ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆಂದ ಉಗ್ರನಿಗೆ ಜಾಮೀನು
ನವದೆಹಲಿ, ಡಿ. 18 : ಭಾರತದ ಮೇಲೆ ಮುಂಬೈ ಮಾದರಿಯಲ್ಲಿ ದಾಳಿ ನಡೆಸುವುದಾಗಿ ಲಷ್ಕರ್-ಎ-ತೊಯ್ಬಾದ ನಾಯಕ ಹಫೀಜ್ ಸಯೀದ್ ಗುಡುಗುತ್ತಿರುವಾಗ, ಭಯೋತ್ಪಾದನೆಯನ್ನು ಮಟ್ಟಹಾಕುವುದಾಗಿ ಘಂಟಾಘೋಷವಾಗಿ ಸಾರುತ್ತಿರುವ ಪಾಕಿಸ್ತಾನ, ಮುಂಬೈ ದಾಳಿಯ ಪ್ರಮುಖ ಆರೋಪಿ ಉಗ್ರವಾದಿ 'ಚಾಚಾ' ಝಾಕಿ-ಉರ್-ರೆಹಮಾನ್ ಲಕ್ವಿಗೆ ಜಾಮೀನು ನೀಡಿದೆ.
ಅಲ್ಲಿಗೆ, ಭಯೋತ್ಪಾದನೆಯನ್ನು ನಿರ್ನಾಮ ಮಾಡುವುದಾಗಿ ಪಾಕಿಸ್ತಾನ ಹೇಳಿಕೆ ನೀಡುತ್ತಿರುವುದೆಲ್ಲವೂ ಮಹಾಸುಳ್ಳು ಎಂಬುದು ಸಾಬೀತಾಗಿದೆ. ಪೇಶಾವರದಲ್ಲಿ ತಾಲಿಬಾನಿ ಉಗ್ರರಿಂದ ಭೀಕರ ನರಮೇಧ ನಡೆದಿದ್ದರೂ ಪಾಕಿಸ್ತಾನ ಇನ್ನೂ ಎಚ್ಚೆತ್ತುಕೊಂಡಿಲ್ಲ ಎನ್ನುವುದಕ್ಕೆ, ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆ ಎಂದಿದ್ದ ಉಗ್ರನೊಬ್ಬನಿಗೆ ಭಯೋತ್ಪಾದನಾ ನಿಗ್ರಹ ಕೋರ್ಟ್ ಜಾಮೀನು ನೀಡಿರುವುದೇ ಸಾಕ್ಷಿ.
ಬಿಡುಗಡೆಯಾಗಿರುವ ಲಕ್ವಿ ಲಷ್ಕರ್-ಎ-ತೊಯ್ಬಾದಲ್ಲಿ ಹಫೀಜ್ ಸಯೀದ್ ನಂತರದ ನಾಯಕ. 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ದಾಳಿಯ ಸೂತ್ರಧಾರ. ಬಂಧಿತನಾಗಿದ್ದ ಏಕೈಕ ಉಗ್ರ ಅಬ್ದುಲ್ ಕಸಬ್, ಡೆವಿಡ್ ಹ್ಯಾಡ್ಲಿ ಮುಂತಾದವರು ಮುಂಬೈ ದಾಳಿಯ ಸಂಪೂರ್ಣ ನೇತೃತ್ವ ವಹಿಸಿದ್ದ ಎಂದು ಹೇಳಿಕೆ ನೀಡಿದ್ದರು. ಭಾರತದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಲಕ್ವಿ ಕೂಡ ಇದ್ದಾನೆ. [ಮಕ್ಕಳನ್ನು ಹತ್ಯೆಗೈದ ರಕ್ಕಸರು ಇವರೇ]
ಚಾಟಿ ಬೀಸಿದ ಭಾರತ : "ಪೇಶಾವರದಲ್ಲಿ ಹತ್ಯಾಕಾಂಡ ನಡೆದಿರುವ ಸಂದರ್ಭದಲ್ಲಿಯೇ ಲಕ್ವಿ ಬಿಡುಗಡೆಯಾಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಮುಂಬೈ ದಾಳಿಯ ವಿಚಾರಣೆಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಪಾಕಿಸ್ತಾನ ಇನ್ನಷ್ಟು ಗಂಭೀರವಾಗಿ ಚಿಂತನೆ ನಡೆಸಬೇಕಿದೆ" ಎಂದು ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಒಪ್ಪಿಸಿ : ಈ ನಡುವೆ, ಭಯೋತ್ಪಾದನೆ ವಿರುದ್ಧ ಹೋರಾಡಲು ನಿಜಕ್ಕೂ ಆಸಕ್ತಿಯಿದ್ದರೆ, 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಮತ್ತು 2008ರ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್ ರನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.
ಸಂಸತ್ತಿನ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, "ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಇವರಿಬ್ಬರನ್ನು ಭಾರತಕ್ಕೆ ಒಪ್ಪಿಸಬೇಕು. ಹಫೀಜ್ ಸಯೀದ್ ಒಬ್ಬ ಮಾನವಕುಲದ ಶತ್ರು" ಎಂದಿದ್ದಾರೆ.