ಪಾಕಿಸ್ತಾನ ನರಕ: ಬಿಜೆಪಿಗೆ ದಿಗ್ವಿಜಯ್ ಸಿಂಗ್ ಕೇಳಿದ 5 ಪ್ರಶ್ನೆಗಳು
ಪಣಜಿ, ಆಗಸ್ಟ್ 28: ತಮ್ಮವರಿಗೆ ಒಂದು ಕಾನೂನು, ಪರರಿಗೆ ಇನ್ನೊಂದು ಕಾನೂನು ಇದು ಬಿಜೆಪಿ ನಡೆದುಕೊಂಡು ಬರುತ್ತಿರುವ ದಾರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
ಪಣಜಿಯಲ್ಲಿ ಶನಿವಾರ (ಆ 27) ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಬಿಜೆಪಿ ಮತ್ತು ಸಂಘ ಪರಿವಾರ ದೇಶದಲ್ಲಿ ಅಸಹಿಷ್ಣುತೆ ಉಂಟು ಮಾಡುತ್ತಿದ್ದು, ಇದು ಮುಂದಿನ ದಿನಗಳಲ್ಲಿ ದೇಶದ ಐಕ್ಯತೆಗೆ ಬಹುದೊಡ್ಡ ಪೆಟ್ಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. (ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ರಮ್ಯಾ)
ಮಂಗಳೂರಿನಲ್ಲಿ ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಮತ್ತು ಅವರ ವಿರುದ್ದ ರಾಜದ್ರೋಹ ಪ್ರಕರಣ ದಾಖಲಾದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದಿಗ್ವಿಜಯ್ ಸಿಂಗ್, ತಮ್ಮ ಪಕ್ಷದ ಮುಖಂಡರು ಪಾಕಿಸ್ತಾನಕ್ಕೆ ಹೋದಾಗ ಬಿಜೆಪಿ ನಾಯಕರು ಎಲ್ಲಿ ಅಡಗಿ ಕೂತಿದ್ದರು ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಳ್ಳು ದಾಖಲೆ ಸೃಷ್ಟಿಸುವುದರಲ್ಲಿ ನಿಸ್ಸೀಮರು ಎಂದು ರುಜುವಾತಾಗಿದೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಣತಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ 'ಪಾಕಿಸ್ತಾನಕ್ಕೆ ಹೋಗುವುದೂ ಒಂದೇ, ನರಕಕ್ಕೆ ಹೋಗುವುದೂ ಒಂದೇ' ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದಿಗ್ವಿಜಯ್ ಸಿಂಗ್, ಬಿಜೆಪಿಗೆ ಕೇಳಿದ ಪ್ರಶ್ನೆಗಳು..
ಎಲ್ ಕೆ ಅಡ್ವಾಣಿ
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಈ ಹಿಂದೆ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಹೇಳಿದ್ದರು. ಆಗ ನಿಮಗೆ ಪಾಕ್ ನರಕ ಎಂದು ಅನಿಸಲಿಲ್ಲವೇ?
ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಲಾಹೋರಿಗೆ ಬಸ್ ಮೂಲಕ ತೆರಳಿದ್ದರು. ಆಗ ಪಾಕಿಸ್ತಾನ ನರಕ ಎಂದು ತಿಳಿದಿರಲಿಲ್ಲವೇ?
ಮೋಹನ್ ಭಾಗವತ್
RSS ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಪಾಕಿಸ್ತಾನ ನಮ್ಮ ಸಹೋದರ ರಾಷ್ಟ್ರ, ಆ ದೇಶದ ಜೊತೆ ಸಂಬಂಧ ವೃದ್ದಿಸಿಕೊಳ್ಳಬೇಕೆಂದು ಹೇಳಿದ್ದರು. ಪಾಕಿಸ್ತಾನ ನರಕ ಎಂದು ಆಗ ನಿಮಗೆ ಗೊತ್ತಾಗಲಿಲ್ಲವೇ ಅಥವಾ ಭಾಗವತ್ ಅವರನ್ನು ಕೇಳಲು ನಿಮಗೆ ಧೈರ್ಯ ಇರಲಿಲ್ಲವೇ?
ನರೇಂದ್ರ ಮೋದಿ
ಯಾವುದೇ ಪೂರ್ವ ಸಿದ್ದತೆ ಇಲ್ಲದೇ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿದ್ದರು. ಮೋದಿ ಪಾಕಿಸ್ತಾನಕ್ಕೆ ಹೋದ ವೇಳೆ ಆ ದೇಶ ನರಕವಾಗಿರಲಿಲ್ಲವೇ?
ರಮ್ಯಾ
ರಮ್ಯಾ ವಿರುದ್ದ ರಾಜದ್ರೋಹದ ಕೇಸ್ ಹಾಕಲಾಗಿದೆ. ಬಿಜೆಪಿ ಮತ್ತು RSS ದೇಶದಲ್ಲಿ ಅಸಹಿಷ್ಣುತೆ ಉಂಟು ಮಾಡುತ್ತಿದೆ ಅದು ನಿಮಗೆ ನರಕ ಅನಿಸುತ್ತಿಲ್ಲವೇ ಎಂದು ಪರಿಕ್ಕರ್ ಅವರನ್ನು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.