ಸಂಸತ್ ಬಿಕ್ಕಟ್ಟು: 4 ಪಕ್ಷಗಳ ಸಭೆಯನ್ನು ತಿರಸ್ಕರಿಸಿದ ವಿಪಕ್ಷಗಳು
ನವದೆಹಲಿ, ಡಿಸೆಂಬರ್ 20: ಚಳಿಗಾಲದ ಅಧಿವೇಶನದಲ್ಲಿ 12 ಸಂಸದರನ್ನು ಅಮಾನತು ಮಾಡಿದ ವಿಚಾರದಲ್ಲಿ ಭಾರೀ ಗದ್ದಲ ಎದ್ದು ಬಿಕ್ಕಟ್ಟು ಉಂಟಾಗಿದೆ. ಈ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಾಲ್ಕು ಪಕ್ಷಗಳ ಸಭೆಯನ್ನು ಕರೆದಿದೆ. ಆದರೆ ವಿರೋಧ ಪಕ್ಷಗಳು ಈ ಸಭೆಯನ್ನು ತಿರಸ್ಕರಿಸಿದೆ.
ಮುಂಗಾರು ಅಧಿವೇಶನದ ವೇಳೆ ದುರ್ನಡತೆ ತೋರಿದ ಆರೋಪದ ಮೇಲೆ ಚಳಿಗಾಲದ ಅಧಿವೇಶನದಿಂದ 12 ಸಂಸದರನ್ನು ಸಭಾಪತಿಗಳು ಅಮಾನತು ಮಾಡಿದ್ದಾರೆ. ಇದರ ವಿರುದ್ಧ ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಎಲ್ಲಾ ವಿರೋಧ ಪಕ್ಷಗಳು ತಮ್ಮ ನಿಲುವಿನಿಂದ ಹಿಂಜರಿಯದ ನಿರ್ಧಾರವನ್ನು ಕೈಗೊಂಡಿದೆ.
ಶುಕ್ರವಾರ ರಾಜ್ಯಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ನವೆಂಬರ್ 29 ರಿಂದ ಅಧಿವೇಶನಕ್ಕೆ ಅಡೆತಡೆ ಉಂಟು ಮಾಡುತ್ತಿರುವ ವಿಚಾರಗಳ ಬಗ್ಗೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಸಭೆ ಸೇರುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಸಂಜೆ ಈ ಸಭೆಗೆ ಕೇಂದ್ರ ಸರ್ಕಾರವು ಅಮಾನತುಗೊಂಡ ಸಂಸದರ ನಾಲ್ಕು ಪಕ್ಷಗಳನ್ನು ಆಹ್ವಾನ ಮಾಡಿದೆ. ಈ ಸಭೆಯನ್ನು ಸಚಿವ ಪ್ರಹ್ಲಾದ್ ಜೋಶಿ ಕರೆದಿದ್ದಾರೆ. ಆದರೆ ವಿಪಕ್ಷಗಳು ಈ ಸಭೆಯನ್ನು ತಿರಸ್ಕರಿಸಿದ್ದಾರೆ. ಹಾಗೆಯೇ ವಿರೋಧ ಪಕ್ಷಗಳು ಸೋಮವಾರ ಸಭೆಯನ್ನು ಕರೆದಿದೆ.

ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿಗೆ ಪತ್ರ ಬರೆದಿದ್ದಾರೆ. "ಕೇವಲ ನಾಲ್ಕು ಪಕ್ಷಗಳಿಗೆ ಆಹ್ವಾನ ನೀಡಿರುವುದು ಸರಿಯಲ್ಲ ಹಾಗೂ ದುರದೃಷ್ಟಕರ," ಎಂದು ಹೇಳಿದ್ದಾರೆ. "ಹನ್ನೆರಡು ಸಂಸದರನ್ನು ಅಮಾನತು ಮಾಡಿರುವ ವಿಚಾರದಲ್ಲಿ ಎಲ್ಲಾ ವಿರೋಧ ಪಕ್ಷಗಳು ಜೊತೆಯಾಗಿ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯಸಭೆಯ ಸಭಾಪತಿಗಳು ಅಥವಾ ಸಚಿವ ಪಿಯೂಷ್ ಗೋಯಲ್ ಎಲ್ಲಾ ವಿರೋಧ ಪಕ್ಷಗಳ ಸಭೆಯನ್ನು ಕರೆಯುವಂತೆ ನಾವು ನವೆಂಬರ್ 29 ರಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೆ ನಮ್ಮ ಈ ಮನವಿಗೆ ಮನ್ನಣೆ ನೀಡಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಎಲ್ಲಾ ಪಕ್ಷಗಳ ಸಭೆ ಕರೆಯುವ ಬದಲು ಕೇವಲ ನಾಲ್ಕು ಪಕ್ಷಗಳನ್ನು ಮಾತ್ರ ಸಭೆಗೆ ಆಹ್ವಾನ ಮಾಡಿದೆ. ಇದು ಸ್ಪಷ್ಟವಾಗಿ ದುರದೃಷ್ಟಕರ ಹಾಗೂ ಸರಿಯಲ್ಲ," ಎಂದು ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೆರೆಕ್ ಒಬ್ರೇನ್ ಟ್ವೀಟ್ನಲ್ಲಿ ಹೇಳಿದ್ದು ಹೀಗೆ..
ಈ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರೇನ್ ಟ್ವೀಟ್ ಮಾಡಿದ್ದಾರೆ. "ಸರ್ಕಾರವನ್ನು ನಡೆಸಲು ಬರದ ಕೇಂದ್ರ ಸರ್ಕಾರ ಸೋಮವಾರ ಕಸರತ್ತು ನಡೆಸಲಿದೆ. ಸರ್ಕಾರ ಯಾವ ಪಕ್ಷದ ಸಂಸದರು ಅಮಾನತುಗೊಂಡಿದ್ದರೋ ಅವರ ಸಭೆಯನ್ನು ಕರೆದಿದ್ದಾರೆ. ಸರ್ಕಾರ ಉಳಿದ ಹತ್ತು ಪಕ್ಷಗಳನ್ನು ಕರೆದಿಲ್ಲ. ಇದು ವಿಫಲ ಯತ್ನ. ಎಲ್ಲಾ ವಿರೋಧ ಪಕ್ಷಗಳು ಒಂದಾಗಿದೆ. ಸಂಸದರ ಅಮಾನತು ರದ್ದು ಮಾಡಬೇಕು ಎಂಬುವುದು ನಮ್ಮ ಆಗ್ರಹ," ಎಂದು ಹೇಳಿದ್ದಾರೆ. ಈ ನಡುವೆ ಟಿಎಂಸಿ ಈ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲಿದೆ ಎಂಬ ಸುಳಿವು ದೊರೆತಿದೆ.
ಸಂಸತ್ನ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ವಿರೋಧ ಪಕ್ಷಗಳ ಸಭೆ ನಡೆಸುವಂತೆ ಸಭಾಪತಿಗಳು ಸಲಹೆ ನೀಡಿದ್ದಾರೆ. ಆದರೆ ವಿರೋಧ ಪಕ್ಷವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ತಮ್ಮ ಪಟ್ಟು ಬಿಟ್ಟಿಲ್ಲ. ಇನ್ನು ಕೇಂದ್ರ ಸರ್ಕಾರವು ಅಮಾನತುಗೊಂಡ ಈ 12 ಸಂಸದರು ಕ್ಷಮೆಯಾಚಿಸಿದರೆ ಅಮಾನತು ರದ್ದು ಮಾಡಲಾಗುವುದು ಎಂದು ಹೇಳಿದೆ. ಆದರೆ ವಿರೋಧ ಪಕ್ಷಗಳು ಕ್ಷಮೆಯಾಚಿಸಲಾರೆವು, ಅಮಾನತು ರದ್ದು ಮಾಡಬೇಕು ಎಂದು ಹೇಳಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications