ಓಮಿಕ್ರಾನ್ ಆತಂಕ: ವಾರ್ ರೂಂ ಸ್ಥಾಪಿಸಿ, ಅಗತ್ಯವಿದ್ದರೆ ನೈಟ್ ಕರ್ಫ್ಯೂ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ನವದೆಹಲಿ, ಡಿಸೆಂಬರ್ 22: ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಹೊಸ ರೂಪಾಂತರ ಓಮಿಕ್ರಾನ್ ಡೆಲ್ಟಾಕ್ಕಿಂತ ಮೂರು ಪಟ್ಟು ಸಾಂಕ್ರಾಮಿಕವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ವಾರ್ ರೂಂ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ರಾಜ್ಯಗಳಿಗೆ ತಿಳಿಸಿರುವ ಕೇಂದ್ರ ಸರ್ಕಾರವು, ಹಲವಾರು ಅಗತ್ಯ ಕ್ರಮಗಳನ್ನು ಪಟ್ಟಿ ಮಾಡಿ ರಾಜ್ಯಗಳಿಗೆ ನೀಡಿದೆ. ಅಗತ್ಯವಿದ್ದರೆ ನೈಟ್ ಕರ್ಫ್ಯೂ ಅನ್ನು ಜಾರಿ ಮಾಡಿ ಎಂದು ಕೂಡಾ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೇಳಿದೆ.
ಆರೋಗ್ಯ ಸಚಿವಾಲಯದ ಪತ್ರದಲ್ಲಿ, ಸ್ಥಳೀಯ ಪರಿಸ್ಥಿತಿಗಳನ್ನು ಆಧರಿಸಿಕೊಂಡು ಕ್ರಮವನ್ನು ಕೈಗೊಳ್ಳುಬೇಕು ಎಂದು ಕೂಡಾ ಉಲ್ಲೇಖ ಮಾಡಲಾಗಿದೆ. ಹಾಗೆಯೇ "ಥ್ರೆಶೋಲ್ಡ್ ಮಿತಿಗಳು" ಎಂದು ಕರೆಯಲ್ಪಡುವ ಮಾರ್ಗಸೂಚಿಗಳನ್ನು ಕೂಡಾ ಕೇಂದ್ರ ಸರ್ಕಾರ ನೀಡಿದೆ.

ಇನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕ್ರಮಗಳು, ಮಿತಿಗಳನ್ನು ದಾಟುವ ಮುನ್ನವೇ ಅಗತ್ಯ ನಿರ್ಬಂಧವನ್ನು ಹೇರಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ತಾನು ಹೊರಡಿಸಿರುವ ಪತ್ರದಲ್ಲಿ, "ಓಮಿಕ್ರಾನ್ ಜೊತೆಗೆ ದೇಶದಲ್ಲಿ ಡೆಲ್ಟಾ ರೂಪಾಂತರವು ಕೂಡಾ ಈಗಲೂ ಇದೆ," ಎಂದು ಎಚ್ಚರಿಕೆ ನೀಡಿದೆ.
ಎಲ್ಲಾ ಕೋವಿಡ್ ಸೋಂಕಿತರ ಸಂಪರ್ಕ ಪತ್ತೆ ಹಚ್ಚಿ
ಇನ್ನು ಕೇಂದ್ರ ಸರ್ಕಾರವು ಎಲ್ಲಾ ಕೋವಿಡ್ ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಮನೆ ಮನೆಗೆ ಹೋಗಿ ಕೋವಿಡ್ ಪರೀಕ್ಷೆ ನಡೆಸಲು ಕೂಡಾ ಹೇಳಿದೆ. ಇನ್ನು ಕ್ಲಸ್ಟರ್ಗಳಲ್ಲಿ ಕೋವಿಡ್ ಸೋಂಕಿತರ ಮಾದರಿಯನ್ನು ಶೀಘ್ರವೇ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಿ ಎಂದು ಕೂಡಾ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ರಾಜ್ಯಗಳಲ್ಲಿ ಶೇ.100ರಷ್ಟು ಜನರಿಗೆ ಕೊವಿಡ್-19 ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಲಸಿಕೆ ವಿತರಣೆ ಅಭಿಯಾನದ ವೇಗವನ್ನು ಹೆಚ್ಚಿಸುವಂತೆಯೂ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇನ್ನು ಆಸ್ಪತ್ರೆಯ ಹಾಸಿಗೆಗಳು, ಆಂಬ್ಯುಲೆನ್ಸ್ಗಳು, ಆಮ್ಲಜನಕ ಉಪಕರಣಗಳು ಮತ್ತು ಔಷಧೋಪಚಾರ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ತುರ್ತು ನಿಧಿಯನ್ನು ಬಳಸಿ ಎಂದೂ ಕೇಂದ್ರ ಹೇಳಿದೆ.
ದೇಶದಲ್ಲಿ ಓಮಿಕ್ರಾನ್ ಪ್ರಕರಣ
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಓಮಿಕ್ರಾನ್ ರೂಪಾಂತರ ಈಗ ವಿಶ್ವದ ಹಲವಾರು ದೇಶಗಳಿಗೆ ಹರಡಿದೆ. ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 200 ರ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ ಮತ್ತು ದೆಹಲಿಯು ಹೊಸ ರೂಪಾಂತರ ಓಮಿಕ್ರಾನ್ ಅತೀ ಅಧಿಕ ಪ್ರಕರಣಗಳು ವರದಿ ಆಗಿದೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಒಟ್ಟು (54), ತೆಲಂಗಾಣ (20), ಕರ್ನಾಟಕ (19), ರಾಜಸ್ಥಾನ (18), ಕೇರಳ (15) ಮತ್ತು ಗುಜರಾತ್ (14) ನಂತರದ ಸ್ಥಾನದಲ್ಲಿವೆ. ಅವರಲ್ಲಿ 77 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications