ಉತ್ತರಾಖಂಡ, ಕೇರಳ, ತಮಿಳುನಾಡಿನಲ್ಲೂ ಪಿಎಫ್ಐ ನಿಷೇಧಗೊಳಿಸಿ ಅಧಿಸೂಚನೆ
ಡೆಹರಾಡೂನ್, ಅಕ್ಟೋಬರ್ 1: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಿದ ನಂತರ ಈಗ ಉತ್ತರಾಖಂಡ ಸರ್ಕಾರವು ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗನ್ನು ಕಾನೂನುಬಾಹಿರ ಸಂಘವೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಭಯೋತ್ಪಾದನಾ ಕೃತ್ಯದ ಸಂಪರ್ಕ ಹೊಂದಿದ್ದಕ್ಕಾಗಿ ನಿಷೇಧ ಹೇರಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಉತ್ತರಖಂಡ ಮಾತ್ರವದಲ್ಲದೆ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳು ಪಿಎಫ್ಐ ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಇಂತಹ ಆದೇಶಗಳನ್ನು ಜಾರಿಗೊಳಿಸಿವೆ.
ಪಿಎಫ್ಐ ಮೇಲೆ ಕಾಂಗ್ರೆಸ್, ಸಿದ್ದರಾಮಯ್ಯಗೆ ಒಳಗೊಳಗೆ ಪ್ರೀತಿ; ಪ್ರಹ್ಲಾದ್ ಜೋಶಿ
ಉತ್ತರಾಖಂಡವು ರಿಹಬ್ ಇಂಡಿಯಾ ಫೌಂಡೇಶನ್ (ಆರ್ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ಸಿಎಚ್ಆರ್ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ರಿಹ್ಯಾಬ್ ಫೌಂಡೇಶನ್ ಇವುಗಳನ್ನು ನಿಷೇಧಿಸಿದೆ.
ಆದೇಶದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉತ್ತರಖಂಡ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಸೂಚಿಸಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್ಎ) ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯ ಮೂಲಕ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗನ್ನು ತಕ್ಷಣವೇ ಜಾರಿಗೆ ಬರುವಂತೆ ಕಾನೂನುಬಾಹಿರ ಸಂಘ ಎಂದು ಘೋಷಿಸಿದೆ.
ಕೇರಳ ಕೂಡ ಪಿಎಫ್ಐ ಜೊತೆಗೆ, ರಿಹಬ್ ಇಂಡಿಯಾ ಫೌಂಡೇಶನ್ (ಆರ್ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ಸಿಎಚ್ಆರ್ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹಬ್ ಫೌಂಡೇಶನ್ ಸೇರಿದಂತೆ ಅದರ ಸಂಸ್ಥೆಗಳಿಗೂ ಕಾನೂನುಬಾಹಿರ ಸಂಘ ಎಂದು ನಿಷೇಧ ಹೇರಲಾಗಿದೆ.
ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟುಮಾಡುವ ಮತ್ತು ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ದೇಶದ ಮತ್ತು ದೇಶದಲ್ಲಿ ಉಗ್ರಗಾಮಿತ್ವವನ್ನು ಬೆಂಬಲಿಸುವ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ನಿಷೇಧ ಹೇರಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ದೇಶದ ಸಮಗ್ರತೆ, ಸಾರ್ವಭೌಮತೆ ಧಕ್ಕೆ ಆರೋಪ
ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಅಧಿಸೂಚನೆಗಳನ್ನು ಹೊರಡಿಸಿವೆ. ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡುವ ಮತ್ತು ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ ಮತ್ತು ಅಂಗಸಂಸ್ಥೆಗಳ ವಿರುದ್ಧ ನಿಷೇಧ ಹೇರಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಯುಎಪಿಎ ಅಡಿಯಲ್ಲಿ ಪ್ರಕರಣ
ಈ ಮಧ್ಯೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು ಶುಕ್ರವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) 11 ಕಾರ್ಯಕರ್ತರನ್ನು 21 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಕಳೆದ ವಾರ ಕೇರಳದ ವಿವಿಧ ಸ್ಥಳಗಳಿಂದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್ಐಎಯಿಂದ ಬಂಧಿಸಲ್ಪಟ್ಟಿದ್ದ ಪಿಎಫ್ಐ ಕಾರ್ಯಕರ್ತರನ್ನು ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರ ಏಳು ದಿನಗಳ ಕಸ್ಟಡಿ ಇಂದು ಅಂತ್ಯಗೊಂಡಿತು.
ಕರಮಾನ ಅಶ್ರಫ್ ಮೌಲವಿ, ಸಾದಿಕ್ ಅಹ್ಮದ್ ವಶಕ್ಕೆ
ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾದ ಆರೋಪಿಗಳೆಂದರೆ ಕರಮಾನ ಅಶ್ರಫ್ ಮೌಲವಿ (ಪಿಎಫ್ಐನ ರಾಷ್ಟ್ರೀಯ ಪ್ರಭಾರಿ, ಶಿಕ್ಷಣ ವಿಭಾಗ), ಸಾದಿಕ್ ಅಹ್ಮದ್ (ಪಿಎಫ್ಐ ಪತ್ತನಂತಿಟ್ಟ ಜಿಲ್ಲಾ ಕಾರ್ಯದರ್ಶಿ, ಶಿಹಾಸ್ (ಪಿಎಫ್ಐ ವಲಯ ಕಾರ್ಯದರ್ಶಿ), ಅನ್ಸಾರಿ ಪಿ, ಎಂಎಂ ಮುಜೀಬ್, ನಜುಮುದ್ದೀನ್, ಸೈನುದ್ದೀನ್ ಟಿ.ಎಸ್. (ಪಿಎಫ್ಐ ಕೊಟ್ಟಾಯಂ ಜಿಲ್ಲಾ ಕಾರ್ಯದರ್ಶಿ), ಪಿ ಕೆ ಉಸ್ಮಾನ್, ಯಾಹಿಯಾ ಕೋಯಾ (ಪಿಎಫ್ಐ ರಾಜ್ಯ ಕಾರ್ಯಕಾರಿ ಸದಸ್ಯ), ಕೆ ಮುಹಮ್ಮದಲಿ (ಪಿಎಫ್ಐನ ರಾಷ್ಟ್ರೀಯ ಉಸ್ತುವಾರಿ, ವಿಸ್ತರಣಾ ವಿಭಾಗ), ಮತ್ತು ಸಿ ಟಿ ಸುಲೈಮಾನ್ (ಕಾಸರಗೋಡು ಜಿಲ್ಲಾ ಅಧ್ಯಕ್ಷರು).
ಹಲವಾರು ಬ್ಯಾಂಕ್ ಖಾತೆಗಳ ವಶ
ಈ ಮೊದಲು ಅವರನ್ನು ನ್ಯಾಯಾಲಯವು ಇಂದಿನವರೆಗೆ 7 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಕಳುಹಿಸಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಿರುದ್ಧದ ಅತಿದೊಡ್ಡ ಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಮಯದಲ್ಲಿ ಗೊಂದಲವನ್ನು ಉಂಟುಮಾಡುವ ಉದ್ದೇಶದಿಂದ ತರಬೇತಿ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಈ ವರ್ಷ ಜುಲೈ 12 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕೃತ್ಯಗಳು ಬೆಳಕಿಗೆ ಬಂದಿವೆ. ಅಲ್ಲದೆ, ತನಿಖೆಯ ಸಂದರ್ಭದಲ್ಲಿ ಏಜೆನ್ಸಿಯು ಪಿಎಫ್ಐನ ಹಲವಾರು ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಂಡಿವೆ.