ಮೋದಿ ನಾಡಿನ ಶಿವ ದೇಗುಲಕ್ಕೆ 'ಅನ್ಯಮತೀಯರಿಗೆ' ನಿಷೇಧ
ಅಹಮದಾಬಾದ್, ಜೂ.4: ಪ್ರಧಾನಿ ನರೇಂದ್ರ ಮೋದಿ ಅವರು ಟ್ರಸ್ಟಿಯಾಗಿರುವರ ಗುಜರಾತಿನ ಐತಿಹಾಸಿಕ ಸೋಮನಾಥ ದೇಗುಲದೊಳಗೆ ಅನ್ಯಮತೀಯರಿಗೆ ಪ್ರವೇಶ ನಿಷಿದ್ಧಗೊಳಿಸಲಾಗಿದೆ.
ಪ್ರಸಿದ್ಧ ಸೋಮನಾಥ ದೇಗುಲದಲ್ಲಿ ಜ್ಯೋತಿರ್ಲಿಂಗ ರೂಪಿಯಾಗಿ ಪರಮಶಿವ ದರ್ಶನ ನೀಡುತ್ತಿದ್ದಾನೆ. ಇದು ಹಿಂದೂಗಳ ಅತ್ಯಂತ ಪವಿತ್ರ ತಾಣವಾಗಿದೆ. ಇಲ್ಲಿ ಹಿಂದೂಗಳಲ್ಲದವರು ದೇಗುಲ ಪ್ರವೇಶಿಸುವಂತಿಲ್ಲ ಎಂದು ದೇಗುಲದ ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಹಿಂದೂಗಳಲ್ಲದವರು ದೇಗುಲ ಪ್ರವೇಶಿಸಬೇಕಾದರೆ ದೇಗುಲದ ಪ್ರಧಾನ ವ್ಯವಸ್ಥಾಪಕರಿಂದ ಪೂರ್ವ ಅನುಮತಿ ಎಂದು ಪಡೆದುಕೊಳ್ಳಬೇಕು ಎಂದು ದೇಗುಲದ ಮುಖ್ಯದ್ವಾರದಲ್ಲೇ ನೋಟಿಸ್ ಹಾಕಲಾಗಿದೆ. [ಶಿವರಾತ್ರಿ : ಸೋಮನಾಥೇಶ್ವರನ ಪೌರಾಣಿಕ ಕಥೆ]

ಇದು ಇತರೇ ಧರ್ಮದವರನ್ನು ಕಡೆಗಣಿಸುವ ಕಾರ್ಯವಲ್ಲ. ದೇಗುಲದ ಸುರಕ್ಷತೆ ದೃಷ್ಟಿಯಿಂದ ಸೋಮನಾಥ್ ಟ್ರಸ್ಟ್ ಕಾರ್ಯದರ್ಶಿ, ಮಾಜಿ ಐಎಎಸ್ ಅಧಿಕಾರಿ ಪಿ.ಕೆ ಲಹಿರಿ ಅವರು ಈ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ ಎಂದು ಸೋಮನಾಥ್ ಟ್ರಸ್ಟಿನ ಉಪ ವ್ಯವಸ್ಥಾಪಕ ವಿಜಯ್ ಸಿನ್ಹ ಛಾವ್ಡ ಹೇಳಿದ್ದಾರೆ.
ಗಿರ್ ಸೋಮನಾಥ್ ಜಿಲ್ಲೆಯಲ್ಲಿರುವ ಸೋಮನಾಥ ದೇಗುಲದ ಟ್ರಸ್ಟ್ ಮುಖ್ಯಸ್ಥರಾಗಿ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರು ಪ್ರಮುಖ ಟ್ರಸ್ಟಿಗಳಾಗಿದ್ದಾರೆ.
ಇತ್ತೀಚೆಗೆ ಬುರ್ಖಾ ಧರಿಸಿ ಕೆಲವರು ದೇಗುಲಕ್ಕೆ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿದ ಘಟನೆ ಜರುಗಿತ್ತು. ದೇಶದ ಪ್ರಮುಖ ದೇಗುಲಗಳಂತೆ ಇಲ್ಲೂ ಕೂಡಾ ಹೆಚ್ಚಿನ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಈ ಕ್ರಮ ಜರುಗಿಸಲಾಗಿದೆ. ಹಿಂದೂಗಳಲ್ಲದವರು ಪೂರ್ವಾನುಮತಿ ಪಡೆದು ದೇಗುಲದೊಳಗೆ ಹೋಗಬಹುದು ಎಂದು ಟ್ರಸ್ಟ್ ಪ್ರಕಟಿಸಿದೆ. (ಪಿಟಿಐ)












Click it and Unblock the Notifications