ಆಂಧ್ರಪ್ರದೇಶ: ಡಿಸೆಂಬರ್ 27 ರಂದು ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನವಿಲ್ಲ
ಅಮರಾವತಿ, ಡಿ. 26: ಮಂಗಳವಾರ (ಡಿಸೆಂಬರ್ 27 ) ನಡೆಯಲಿರುವ ಕೋಯಿಲ್ ಆಳ್ವಾರ್ ತಿರುಮಂಜನದ ಹಿನ್ನೆಲೆಯಲ್ಲಿ ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ರದ್ದುಗೊಳಿಸಿದೆ.
ಪ್ರತಿ ವರ್ಷ ವಾರ್ಷಿಕ ಬ್ರಹ್ಮೋತ್ಸವಗಳು, ವೈಕುಂಠ ಏಕಾದಶಿ, ಯುಗಾದಿ ಮತ್ತು ಅನಿವಾರ ಆಸ್ಥಾನ ಕಾರ್ಯಕ್ರಮಗಳ ಹಿಂದಿನ ಮಂಗಳವಾರದಂದು ಕೊಯಿಲ್ ಆಳ್ವಾರ್ ತಿರುಮಂಜನಂ (ದೇವಾಲಯ ಶುದ್ಧೀಕರಣ ಆಚರಣೆ) ನಡೆಸುವುದು ವಾಡಿಕೆ.
ಏರ್ಪೋರ್ಟ್ನಲ್ಲೇ ತಿರುಪತಿ ವಿಐಪಿ ದರ್ಶನ ಟಿಕೆಟ್ ಪಡೆಯಿರಿ
ಜನವರಿ 2 ರಂದು ತಿರುಮಲ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಅದ್ಧೂರಿ ಆಚರಣೆ ನಡೆಯಲಿದ್ದು, ಈ ಹಿನ್ನೆಲೆ ಡಿಸೆಂಬರ್ 27 ರಂದು ಕೋಯಿಲ್ ಆಳ್ವಾರ್ ತಿರುಮಂಜನವನ್ನು ನಡೆಸಲಾಗುತ್ತದೆ.
ತಿರುಮಂಜನಂ ಉತ್ಸವವನ್ನು ತಿರುಪತಿ ವೆಂಕಟೇಶ್ವರನ ಬೆಟ್ಟದ ದೇವಾಲಯದಲ್ಲಿ ಪ್ರಮುಖ ಹಬ್ಬಗಳಿಗಿಂತ ಮೊದಲು ವರ್ಷದಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ.
ಜನವರಿ 2 ರಂದು ಶುಭ ವೈಕುಂಠ ಏಕಾದಶಿ ಉತ್ಸವವನ್ನು ನಿಗದಿಪಡಿಸಲಾಗಿದ್ದು, ಹಿಂದಿನ ಮಂಗಳವಾರದಂದು 6.00 ರಿಂದ ಮಧ್ಯಾಹ್ನ 12 ರವರೆಗೆ ನಿಯತಕಾಲಿಕವಾಗಿ ತಿರುಮಂಜನ ಕಾರ್ಯಕ್ರಮವನ್ನು ನಡೆಸಲು ಟಿಟಿಡಿ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 26ರಂದು ಯಾವುದೇ ರೀತಿಯ ಶಿಫಾರಸ್ಸು ಪತ್ರಗಳನ್ನು ಸ್ವೀಕರಿಸದಿರಲು, ಯಾವುದೇ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಟಿಟಿಡಿ ನಿರ್ಧರಿಸಿದೆ.
ಇನ್ನು, ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ವಿಮಾನ ನಿಲ್ದಾಣದಲ್ಲಿಯೇ ವಿಐಪಿ ಟಿಕೆಟ್ ಪಡೆಯಲು ವ್ಯವಸ್ಥೆ ಮಾಡಿತ್ತು. ಏರ್ಪೋರ್ಟ್ಗೆ ಬಂದಿಳಿದ ಜನರು ಅಲ್ಲಿಯೇ ದೇವರ ದರ್ಶನಕ್ಕೆ ಟಿಕೆಟ್ ಪಡೆಯಬಹುದಾಗಿದೆ.
ಜನವರಿ 2 ರಿಂದ 11 ರ ವರೆಗೆ ನಡೆಯಲಿರುವ ವೈಕುಂಠ ಏಕಾದಶಿ ಉತ್ಸವಕ್ಕಾಗಿ ದೇವಸ್ಥಾನದ ಟ್ರಸ್ಟ್ ಆನ್ಲೈನ್ ಬುಕಿಂಗ್ಗಾಗಿ ಬಿಡುಗಡೆ ಮಾಡಿದ 300 ರೂಪಾಯಿಯ ವಿಶೇಷ ಪ್ರವೇಶ ದರ್ಶನದ ಟಿಕೆಟ್ಗಳು ಕೆಲವೇ ಕ್ಷಣಾರ್ಧದಲ್ಲಿ ಖಾಲಿಯಾಗಿತ್ತು.
ಮತ್ತೊಂದು ವಿಷಯವೆಂದರೆ, ಈ ತಿಂಗಳ 1ರಿಂದ ಜಾರಿಗೆ ಬರುವಂತೆ ತಿರುಪತಿಯಲ್ಲಿ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಮುಂಜಾನೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಪ್ರಾಯೋಗಿಕವಾಗಿ ವಿಐಪಿ ದರ್ಶನದ ಸಮಯ ಬದಲಾಯಿಸಲಾಗಿದೆ. ವಿಐಪಿ ದರ್ಶನದ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ನಿಗದಿ ಮಾಡಲಾಗಿದೆ. ಉಚಿತ ದರ್ಶನಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡಲು ಈ ತೀರ್ಮಾನ ಕೈಗೊಳ್ಳಲಾಗಿದೆ.