ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?
ನವದೆಹಲಿ, ಅಕ್ಟೋಬರ್ 26: ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡದೆ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಚುನಾವಣೆಯನ್ನು ಗೆಲ್ಲುವ ಸಲುವಾಗಿ ಕಾಂಗ್ರೆಸ್ ಹೂಡಿರುವ ಈ ಹೊಸ ತಂತ್ರ ಫಲ ನೀಡುತ್ತದೆಯೇ ಎಂಬುದು ಡಿಸೆಂಬರ್ 11 ರಂದಷ್ಟೇ ತಿಳಿಯಲಿದೆ!
ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲೆಟ್ ಅವರಿಗೂ ಈ ಬಾರಿ ಟಿಕೆಟ್ ಸಿಗುವುದು ಅನುಮಾನ!
ರಾಜಸ್ಥಾನದಲ್ಲಿ ಮೈಕೊಡವಿಕೊಂಡು ಏಳಲಿರುವ ಕಾಂಗ್ರೆಸ್ ಸೇವಾದಳ!
ಅಷ್ಟಕ್ಕೂ ಕಾಂಗ್ರೆಸ್ಸಿನ ಸ್ಟ್ರಾಟಜಿ ಏನು? ಹಿರಿಯ, ಜನಪ್ರಿಯ ನಾಯಕರಿಗೆ ಟಿಕೆಟ್ ನೀಡದೆ ಇರುವುದು ಪಕ್ಷಕ್ಕೇ ದೊಡ್ಡ ಹೊಡೆತವಲ್ಲವೇ? ಎಂದರೆ 'ಖಂಡಿತ ಇಲ್ಲ' ಎನ್ನುತ್ತಾರೆ ಹೈಕಮಾಂಡ್ ನಾಯಕರು.
ಒಟ್ಟಿನಲ್ಲಿ ಕಾಂಗ್ರೆಸ್ ಸ್ಟ್ರಾಟಜಿ ಬೇರೆಯೇ ಇದೆ... ಏನದು?
ಯಾರ್ಯಾರಿಗೆ ಟಿಕೆಟ್ ಇಲ್ಲ?
ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲೆಟ್, ಸಂಸದರಾದ ಜ್ಯೋತಿರಾದಿತ್ಯ ಸಿಂದಿಯಾ, ಅಶೋಕ್ ಗೆಹ್ಲೋಟ್ ಮತ್ತು ಸಿ ಪಿ ಜೋಶಿ ಮುಂತಾದ ಪ್ರಮುಖರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ! ಈ ಎಲ್ಲರೂ ಚುನಾವಣೆಗೆ ಸ್ಪರ್ಧಿಸದೆ ಇದ್ದರೆ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಬಂಡಾಯ ಆರಂಭವಾಗುವ ಸಂಭವವೂ ಕಡಿಮೆ ಎಂಬುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ. ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಹೇಳುವ ಅಗತ್ಯವೂ ಆಗ ಬರುವುದಿಲ್ಲ!
ಸ್ಟ್ರಾಟಜಿ ಏನು?
ಅಷ್ಟಕ್ಕೂ ಈ ಎಲ್ಲಾ ಪ್ರಮುಖ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಇರುವುದಕ್ಕೆ ಕಾರಣವೇನು? ಅಕಸ್ಮಾತ್ ಇವರಿಗೆ ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರದ ಟಿಕೆಟ್ ನೀಡಿದರೆ ಅವರೆಲ್ಲ ಆ ಒಂದು ಕ್ಷೇತ್ರದ ಬಗ್ಗೆ ಮಾತ್ರವೇ ಗಮನ ಹರಿಸುತ್ತಾರೆ. ಹೆಚ್ಚು ಕಾಲ ಪ್ರಚಾರವನ್ನೂ ಅಲ್ಲಿಯೇ ನಡೆಸುತ್ತಾರೆ. ಆದರೆ ಅವರಿಗೆ ಟಿಕೆಟ್ ನೀಡದೆ ಇದ್ದಲ್ಲಿ ಇಡೀ ರಾಜ್ಯದಾದ್ಯಂತ ಮಾತ್ರವಲ್ಲದೆ, ಇನ್ನುಳಿದ ನಾಲ್ಕು ರಾಜ್ಯಗಳಲ್ಲೂ ಅವರು ಪ್ರಚಾರ ನಡೆಸುವುದಕ್ಕೆ ಸಾಧ್ಯ ಎಂಬುದು ಹೈಕಮಾಂಡ್ ಲೆಕ್ಕಾಚಾರ!
ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!
ಕಾಂಗ್ರೆಸ್ಸಿಗೇ ನಷ್ಟ?!
ಆದರೆ ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡದೆ ಇದ್ದಲ್ಲಿ ನಷ್ಟವಾಗುವುದು ಕಾಂಗ್ರೆಸ್ಸಿಗೇ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ, ಬೇರೆ ಅಭ್ಯರ್ಥಿಗಳಿಗೆ ನೀಡಿದರೆ ಚುನಾವಣೆಯ ಸಮಯದಲ್ಲಿ ಬಂಡಾಯದ ಬಾವುಟ ಹಾರಬಹುದು. ಇದರಿಂದ ಪಕ್ಷಕ್ಕೇ ಕಷ್ಟ. ಅದೂ ಅಲ್ಲದೆ, ಕಾಂಗ್ರೆಸ್ ಈ ರಾಜ್ಯಗಳಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳದೆ ಇರುವುದೂ ಪಕ್ಷಕ್ಕೆ ದೊಡ್ಡ ಹೊಡೆತವಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಿರುವಾಗ ಇಂಥ ತಂತ್ರಕ್ಕೆ ಕಾಂಗ್ರೆಸ್ ಮೊರೆಹೋದರೆ ಕಾಂಗ್ರೆಸ್ಸಿಗೇ ನಷ್ಟವಾಗಬಹುದು!
ರಾಜಸ್ಥಾನದಲ್ಲಿ ಬಿಜೆಪಿಗೆ ಬಹುದೊಡ್ಡ ತಲೆನೋವಾಗಲಿರುವ ರಾಮ್ ರಹೀಮ್!
ಸಿದ್ಧವಾಗಿದೆ ರಣರಂಗ!
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳು 230. ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 116.