ಕೊನೆಗೂ ಯುಕೆ ಮಾರ್ಗಸೂಚಿ ಬದಲಾವಣೆ: ಲಸಿಕೆ ಹಾಕಿರುವ ಭಾರತೀಯರಿಗೆ ಕ್ವಾರಂಟೈನ್ ಇಲ್ಲ
ನವದೆಹಲಿ, ಅಕ್ಟೋಬರ್ 08: ಕೋವಿಶೀಲ್ಡ್ ಅಥವಾ ಯುಕೆ ಅನುಮೋದನೆ ಮಾಡಿರುವ ಯಾವುದೇ ಕೋವಿಡ್ ಲಸಿಕೆಯನ್ನು ಎರಡೂ ಡೋಸ್ಗಳನ್ನು ಪಡೆದ ಭಾರತೀಯರು ಇನ್ನು ಮುಂದೆ ಬ್ರಿಟನ್ಗೆ ತೆರಳಿದ ಬಳಿಕ ಅಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ. ಈ ಹೊಸ ಮಾರ್ಗಸೂಚಿಯು ಅಕ್ಟೋಬರ್ 11 ರಿಂದ (ಸೋಮವಾರ) ಜಾರಿಗೆ ಬರಲಿದೆ ಎಂದು ಹೈಕಮಿಷನರ್, ಭಾರತಕ್ಕೆ ಗುರುವಾರ ಮಾಹಿತಿ ನೀಡಿದ್ದಾರೆ. ಈ ಮೂಲಕ ಕೋವಿಡ್ ಲಸಿಕೆ ಹಾಗೂ ಸಂಚಾರದ ವಿಚಾರದಲ್ಲಿ ಭಾರತ ಹಾಗೂ ಯುಕೆ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ.
ಈ ಬಗ್ಗೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲೀಸ್ ಟ್ವೀಟ್ ಮಾಡಿದ್ದಾರೆ. "ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಸಂಪೂರ್ಣ ಕೋವಿಡ್ ಲಸಿಕೆಯನ್ನು ಪಡೆದ ಭಾರತೀಯರಿಗೆ ಅಕ್ಟೋಬರ್ 11 ರಿಂದ ಯುಕೆಗೆ ಬರುವ ಭಾರತೀಯರಿಗೆ ಯಾವುದೇ ಕ್ವಾರಂಟೈನ್ ಇಲ್ಲ. ಕಳೆದ ತಿಂಗಳಿನಿಂದ ಉತ್ತಮ ಸಹಕಾರ ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದಗಳು," ಎಂದು ಹೇಳಿದ್ದಾರೆ.
'ವರ್ಣಭೇದ': ಯುಕೆ ಪ್ರಯಾಣ ಮಾರ್ಗಸೂಚಿಯ ವಿರುದ್ದ ಕಾಂಗ್ರೆಸ್ ಮುಖಂಡ ವಾಗ್ದಾಳಿ
"ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಸಚಿವರುಗಳ ಜೊತೆ ಮಾತುಕತೆ ನಡೆಸಿ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ," ಎಂದು ಕೂಡಾ ಹೇಳಿದ್ದಾರೆ.
ಯುನೈಟೆಡ್ ಕಿಂಗ್ಡಮ್ನ ಕೊರೊನಾ ವೈರಸ್ ಸೋಂಕು ಹಿನ್ನೆಲೆ ಜಾರಿಗೆ ತರಲಾದ ಹೊಸ ಪ್ರಯಾಣ ಮಾರ್ಗಸೂಚಿಯು ಕಳೆದ ತಿಂಗಳು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಯುನೈಟೆಡ್ ಕಿಂಗ್ಡಮ್ನ ಈ ಪ್ರಯಾಣ ಮಾರ್ಗಸೂಚಿಯ ಪ್ರಕಾರ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳ ಜನರು ಕೊರೊನಾ ವಿರುದ್ದ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತಿತ್ತು.
ಅಂದರೆ ಯಾರು ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೋ ಅವರನ್ನು ಕೋವಿಡ್ ವಿರುದ್ದ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತಿತ್ತು. ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೂಡಾ ಈ ನಿಯಮ ಅನ್ವಯ ಆಗಲಿದೆ ಎಂದು ಯುಕೆ ಹೇಳಿದ್ದು, ಈ ಹಿನ್ನೆಲೆ ಈ ಯುಕೆ ನಿಯಮ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಭಾರತದಲ್ಲಿ ನೀಡುವ ಲಸಿಕೆ ಪ್ರಮಾಣಪತ್ರದ ಮೇಲೆ ಯುಕೆಗೆ ಅನುಮಾನವೇಕೆ!?
ಭಾರತದಲ್ಲಿ ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರನ್ನು ಇನ್ನು ಯುಕೆಯಲ್ಲಿ ಕೋವಿಡ್ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತದೆ ಎಂದು ಈ ಹಿಂದಿನ ಯುಕೆಯ ಪ್ರಯಾಣ ಮಾರ್ಗಸೂಚಿ ಹೇಳುತ್ತದೆ. ಆದರೆ ಈ ನಡುವೆ ಅಸ್ಟ್ರಾಜೆನಿಕಾದ ಲಸಿಕೆಯನ್ನು ನೀಡಲಾಗುವ ಆಸ್ಟ್ರೇಲಿಯಾ, ಬೆಹರ್ರೇನ್, ಇಸ್ರೇಲ್, ಸೌದಿ ಅರೇಬಿಯಾ, ಸಿಂಗಾಪುರ ಹಾಗೂ ಸೌತ್ ಕೊರಿಯಾಗೆ ಈ ನಿಯಮವು ಅನ್ವಯ ಆಗುವುದಿಲ್ಲ ಎಂಬ ವಿಚಾರವು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಯುಕೆಯ ಈ ನೂತನ ಪ್ರಯಾಣ ಮಾರ್ಗಸೂಚಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದರು. ಈ ನೂತನ ಕೋವಿಡ್ ಹಿನ್ನೆಲೆಯ ಪ್ರಯಾಣ ಮಾರ್ಗಸೂಚಿಯು "ವರ್ಣಭೇದ ಮಾಡುವಂತದ್ದು ಆಗಿದೆ" ಹಾಗೂ "ಸಂಪೂರ್ಣವಾಗಿ ವಿಚಿತ್ರವಾದುದು" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
"ಕೋವಿಶೀಲ್ಡ್ ಲಸಿಕೆಯನ್ನು ಮೂಲವಾಗಿ ಯುಕೆಯಲ್ಲಿಯೇ ಅಭಿವೃದ್ದಿ ಪಡಿಸಲಾಗಿದೆ. ಹಾಗೆಯೇ ಪುಣೆಯ ಸೀರಮ್ ಸಂಸ್ಥೆಯಲ್ಲಿ ಈ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಮಾಡಿ ಯುಕೆಗೂ ರಫ್ತು ಮಾಡಲಾಗಿದೆ. ಹೀಗಿರುವಾಗ ಈಗ ಯುಕೆಯೇ ಕೋವಿಶೀಲ್ಡ್ನ ಎರಡು ಡೋಸ್ ಲಸಿಕೆ ಹಾಕಿದರೂ ಕೂಡಾ ಅವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸುವುದು ವಿಚಿತ್ರ. ಇದು ವರ್ಣಭೇದ ನೀತಿಯ ಮೇಲಿನ ಒಂದು ಭಾಗ," ಎಂದು ಹೇಳಿದ್ದರು.
ಈ ಬಗ್ಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯುಕೆ ತನ್ನ ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿತ್ತು. ಆದರೆ ಎರಡು ಕೊರೊನಾ ಲಸಿಕೆ ಡೋಸ್ಗಳನ್ನು ಪಡೆದವರು ಕೂಡಾ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಹೇಳಿದೆ. ಭಾರತದ ಕೋವಿಶೀಲ್ಡ್ ಲಸಿಕೆಯಲ್ಲಿ ಅಲ್ಲ ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರದಲ್ಲಿ ಸಮಸ್ಯೆ ಇದೆ ಎಂದು ಯುಕೆ ಹೇಳಿಕೊಂಡಿತ್ತು.
ಯುಕೆಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತವು, "ಕೋವಿಡ್ ಆಪ್ನಲ್ಲಿ ಆಗಲಿ ಅಥವಾ ಭಾರತದ ಕೊರೊನಾ ಪ್ರಮಾಣ ಪತ್ರದಲ್ಲಿ ಆಗಲಿ ಯಾವುದೇ ಸಮಸ್ಯೆ ಇಲ್ಲ. ಇದು ಸಂಪೂರ್ಣವಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಇದೆ," ಎಂದು ತಿಳಿಸಿತ್ತು.
ಈ ಎಲ್ಲಾ ಬೆಳವಣಿಗೆಯ ನಂತರ ಯುಕೆ ಈಗ ಮತ್ತೆ ತನ್ನ ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದ್ದು, ಈ ನೂತನ ಮಾರ್ಗಸೂಚಿಯ ಪ್ರಕಾರ ಕೋವಿಶೀಲ್ಡ್ ಅಥವಾ ಯುಕೆ ಅನುಮೋದನೆ ಮಾಡಿರುವ ಯಾವುದೇ ಕೋವಿಡ್ ಲಸಿಕೆಯನ್ನು ಎರಡೂ ಡೋಸ್ಗಳನ್ನು ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಬ್ರಿಟನ್ಗೆ ತೆರಳಿದ ಬಳಿಕ ಅಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ.
(ಒನ್ಇಂಡಿಯಾ ಸುದ್ದಿ)