ಯುವಜನತೆಯಲ್ಲಿ ಕೊರೊನಾ ಸೋಂಕು; ನೀತಿ ಆಯೋಗ ಸದಸ್ಯರ ಸ್ಪಷ್ಟನೆ
ನವದೆಹಲಿ, ಏಪ್ರಿಲ್ 19: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಯುವಜನತೆಯೇ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದಾರೆ ಎನ್ನುವ ಸಂಗತಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, ಯುವಜನತೆಯಲ್ಲಿ ಅಧಿಕ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
"ಕಳೆದ ವರ್ಷ 30ಕ್ಕಿಂತಲೂ ಕಡಿಮೆ ವಯಸ್ಸಿನವರು ಸೋಂಕಿಗೆ ತುತ್ತಾದ ಪ್ರಮಾಣ 31% ಇತ್ತು. ಈ ಬಾರಿ 32% ಇದೆ. 30ರಿಂದ 45 ವಯಸ್ಸಿನವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಪ್ರಮಾಣ ಕಳೆದ ವರ್ಷದಂತೆಯೇ 21% ಇದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬುದು ಅಂಕಿಸಂಖ್ಯೆಯಿಂದ ಸಾಬೀತಾಗಿಲ್ಲ" ಎಂದಿದ್ದಾರೆ.
ಇದರೊಂದಿಗೆ ಗಾಳಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸೋಂಕು ಹರಡುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಸೋಂಕು ಹೆಚ್ಚಿರುವ ಕಾರಣ ರೆಮ್ಡೆಸಿವಿರ್ ಔಷಧದ ಉತ್ಪಾದನಾ ಮಟ್ಟವನ್ನೂ ಏರಿಸಲಾಗಿದೆ. ತಿಂಗಳಿಗೆ 26 ಲಕ್ಷ ಬಾಟಲಿಗಳಿಂದ 40 ಲಕ್ಷದವರೆಗೂ ಉತ್ಪಾದನೆ ಏರಿಸಲಾಗಿದೆ ಎಂದು ತಿಳಿಸಿದರು.

ಹಲವು ತಜ್ಞರು ಈ ಎರಡನೇ ಕೊರೊನಾ ಅಲೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದ್ದಾರೆ. ಸೋಂಕಿನ ಲಕ್ಷಣಗಳೂ ಭಿನ್ನವಾಗಿವೆ ಎಂದು ಕಳೆದ ವಾರವಷ್ಟೆ ಡಿಸಿಜಿಎ ಮುಖ್ಯಸ್ಥ ಗೌರಿ ಅಗರ್ವಾಲ್ ಹೇಳಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ಯುವಜನತೆಯಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದರು. "ದೆಹಲಿಯಲ್ಲಿ 10-15 ದಿನಗಳ ಅಂಕಿ ಸಂಖ್ಯೆಯನ್ನು ಗಮನಿಸಿದರೆ, ಅದರಲ್ಲಿ 65% ರೋಗಿಗಳು 45 ವರ್ಷದ ಕೆಳಗಿನವರಾಗಿದ್ದಾರೆ. ಆದ್ದರಿಂದ ಯುವಜನರೂ ಎಚ್ಚರಿಕೆಯಿಂದ ಇರಬೇಕಾಗಿದೆ" ಎಂದು ಹೇಳಿದ್ದರು.












Click it and Unblock the Notifications