ನೀವು ಕುಡುಕರು: ಬಿಜೆಪಿ ಶಾಸಕರಿಗೆ ಕಿಚಾಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಸರನ್ (ಬಿಹಾರ) , ಡಿಸೆಂಬರ್ 14: ಬಿಹಾರದ ಸರನ್ ಜಿಲ್ಲೆಯಲ ಛಾಪ್ರಾ ಪ್ರದೇಶದಲ್ಲಿ ನಕಲಿ ಮಧ್ಯ ಕುಡಿದ ಹಲವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ(BJP) ಶಾಸಕರು ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡುವೆ ವಾಗ್ವಾದ ನಡೆದಿದೆ.
ಬುಧವಾರ ನಡೆದ ಚರ್ಚೆಯು ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ; ರಹಸ್ಯ ಬಿಚ್ಚಿಟ್ಟ ಬಿಜೆಪಿ!
2016ರಿಂದ ರಾಜ್ಯದಲ್ಲಿ ಮದ್ಯ ನಿಷೇಧವಿದೆ. ಈ ನೀತಿಯನ್ನು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಪ್ರಶ್ನಿಸಿದರು. ಜನತಾ ದಳ-ಸಂಯುಕ್ತ ಪಕ್ಷದ ಮುಖಂಡರು ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದರು. ಸಾರಾಯಿ ಕುಡಿದು ಸಾವನ್ನಪ್ಪಿದವರ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ, ತಾಳ್ಮೆ ಕಳೆದುಕೊಂಡ ಸಿಎಂ ನಿತೀಶ್ ಕುಮಾರ್, ಬಿಜೆಪಿ ಶಾಸಕರ ಮೇಲೆ ಹರಿಹಾಯ್ದರು.
ಶರಾಬಿ ಹೋ ಗಯೇ ಹೋ ತಮ್(ನೀವು ಕುಡುಕರಾಗಿದ್ದೀರಿ ಎಂದು ಬಿಜೆಪಿ ನಾಯಕರನ್ನು ನಿತೀಶ್ ಕುಮಾರ್ ಕಿಚಾಯಿಸಿದರು.
ಈ ಘಟನೆಗೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಸಿಎಂ ನಿತೀಶ್ ವಿರುದ್ಧ ರಾಜ್ಯ ವಿಧಾನಸಭೆಯ ಎದುರು ಧರಣಿ ನಡೆಸಿದರು.
ಛಪ್ರಾದಲ್ಲಿ ಕನಿಷ್ಠ ಐವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಶಾವ್ಪುರ್ ಪ್ರದೇಶದ ಪೊಲೀಸರು ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಳನ್ನು ಮುಂದುವರಿಸಿದ್ದಾರೆ. ಈ ಸಾವುಗಳನ್ನು 'ಅನುಮಾನಾಸ್ಪದ' ಎಂದು ಕರೆದಿದ್ದಾರೆ.
'ಮೂವರು ಸಾವನ್ನಪ್ಪಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳು ಅನುಮಾನಾಸ್ಪದ ಸಾವಿನಂತೆ ಕಾಣುತ್ತಿವೆ. ಇನ್ನೂ ಕೆಲವರು ವಿವಿಧ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೂ ನನಗೆ ಬಂದಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ
ಛಾಪ್ರಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಮಿತ್ ರಂಜನ್ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಪೊಲೀಸರು ರಂಜನ್ ಮೃತದೇಹವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ.