'ಯುಪಿ + ಬಿಹಾರ = ಗಯಿ ಮೋದಿ ಸರ್ಕಾರ್': ಎರಡೂ ರಾಜ್ಯಗಳಲ್ಲಿ ನಿತೀಶ್, ಅಖಿಲೇಶ್ ಮೈತ್ರಿ ಸಾಧ್ಯತೆ- ಇನ್ಸೈಡ್ ಸ್ಟೋರಿ
ನವದೆಹಲಿ, ಜುಲೈ 03: ಕಳೆದ ತಿಂಗಳು ಪಾಟ್ನಾದಲ್ಲಿ ನಡೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ನಡೆದಿದೆ. ಆ ಬಳಿಕ ಜನತಾ ದಳ (ಯುನೈಟೆಡ್) ಸಮಾಜವಾದಿ ಪಕ್ಷ (ಎಸ್ಪಿ) ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವುದು ಈ ಮೈತ್ರಿಯ ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲಿ 'ಯುಪಿ + ಬಿಹಾರ = ಗಯಿ ಮೋದಿ ಸರ್ಕಾರ್' ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ಯತ್ನಗಳು ನಡೆದಿವೆ.
ಪೂರ್ವ ಯುಪಿಯ ಫುಲ್ಪುರ ಮತ್ತು ಪ್ರತಾಪ್ಗಢ್ ಎರಡು ಲೋಕಸಭಾ ಸ್ಥಾನಗಳ ಜೆಡಿಯು ಕಣ್ಣಿಟ್ಟಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆಯಲ್ಲಿ ಫುಲ್ಪುರದಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಇದು ಕುರ್ಮಿ ಮತ್ತು ಯಾದವರ ಮತಗಳನ್ನು ಒಟ್ಟುಗೂಡಿಸುತ್ತದೆ ಎಂದು ಜೆಡಿಯು ಪಕ್ಷವು ಲೆಕ್ಕಾಚಾರ ಹಾಕಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ಶೇ 0.01 ಮತಗಳನ್ನು ಜೆಡಿಯು ಪಡೆದಿದೆ. ಯುಪಿಯಲ್ಲಿ ಇದು ದೊಡ್ಡ ಶಕ್ತಿಯಾಗಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ. ಆದರೆ, ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಹೊಂದಿರುವ ನಿತೀಶ್ ಕುಮಾರ್ ಅವರು ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಹಾರದ ಹೊರಗೆ ಜೆಡಿಯುಗೆ ನೆಲೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಫುಲ್ಪುರ್ ಬಹಳಷ್ಟು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಕ್ಷೇತ್ರವನ್ನು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ವಿ ಪಿ ಸಿಂಗ್ ಪ್ರತಿನಿಧಿಸಿದ್ದಾರೆ. ಸಮಾಜವಾದಿ ಸಿದ್ಧಾಂತದ ಪ್ರತಿಪಾದಕ ರಾಮ್ ಮನೋಹರ್ ಲೋಹಿಯಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
'1962 ರಲ್ಲಿ ಫುಲ್ಪುರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ರಾಮ್ ಮನೋಹರ್ ಲೋಹಿಯಾ ಅವರ ಸಿದ್ಧಾಂತದ ಪ್ರತಿಪಾದಕರಾಗಿ ನಿತೀಶ್ ಕುಮಾರ್ ಹೊರಹೊಮ್ಮಿದ್ದಾರೆ. ಆದ್ದರಿಂದ, ಒಬಿಸಿ ಪ್ರಾಬಲ್ಯವಿರುವ ಫುಲ್ಪುರ್ ಅವರಿಗೆ ಸೂಕ್ತ ಸ್ಥಾನವಾಗಿದೆ' ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಯುಪಿಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜೊತೆಗಿದ್ದ ಹೆಚ್ಚಿನ ಸಂಖ್ಯೆಯ ಯಾದವೇತರ ಒಬಿಸಿ ಮತಗಳು ಕಳೆದ 10 ವರ್ಷಗಳಲ್ಲಿ ಬಿಜೆಪಿ ಕಡೆ ವಾಲಿವೆ ಎಂದು ಹಿರಿಯ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.
2022 ರ ವಿಧಾನಸಭೆ ಚುನಾವಣೆಗೂ ಮುನ್ನ, ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಒಬಿಸಿಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು. ಆದರೆ, ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ನಿತೀಶ್ ಕುಮಾರ್ ಫುಲ್ಪುರದಿಂದ ಸ್ಪರ್ಧಿಸಿದರೆ, ಅವರು ಕುರ್ಮಿ ಮತ್ತು ಯಾದವ ಮತದಾರರನ್ನು ಒಟ್ಟುಗೂಡಿಸಬಹುದು. ಆ ಮೂಲಕ ಬಿಜೆಪಿಯನ್ನು ಸೋಲಿಸಲು ಪರಿಣಾಮಕಾರಿ ಮೈತ್ರಿಯನ್ನು ರಚಿಸಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿತೀಶ್ ಕುಮಾರ್ ಕುರ್ಮಿ ಜಾತಿಗೆ ಸೇರಿದವರು. ಪೂರ್ವ ಮತ್ತು ಮಧ್ಯ ಯುಪಿಯ ಹಲವಾರು ಕ್ಷೇತ್ರಗಳಲ್ಲಿ ಅವರ ಕುರ್ಮಿ ಸಮದಾಯದ ಮತಗಳು ನಿರ್ಣಾಯಕವಾಗಿದೆ.

'ಜೆಡಿಯು ಮತ್ತು ಎಸ್ಪಿ ನಡುವೆ ಮೈತ್ರಿ ಬಹುತೇಕ ಖಚಿತವಾಗಿದೆ. ಸೀಟು ಹಂಚಿಕೆ ಚರ್ಚೆ ಆರಂಭವಾದಾಗ, ಫುಲ್ಪುರ ಮತ್ತು ಪ್ರತಾಪ್ಗಢದ ಎರಡು ಸ್ಥಾನಗಳನ್ನು ಬಿಟ್ಟುಕೊಡುವಂತೆ ಜೆಡಿಯು ಎಸ್ಪಿ ನಾಯಕರ ಮುಂದೆ ಬೇಡಿಕೆ ಇಡಲಿದೆ. ಇದರಿಂದ ಯುಪಿ ಹಲವು ಕ್ಷೇತ್ರಗಳಲ್ಲಿ ಎಸ್ಪಿ ಲಾಭ ಪಡೆಯಬಹುದು' ಎಂದು ಜೆಡಿಯು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಈ ವಿಚಾರವಾಗಿ 'ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ'ಯೊಂದಿಗೆ ಮಾತನಾಡಿರುವ ಜೆಡಿಯು ಮುಖ್ಯ ರಾಷ್ಟ್ರೀಯ ವಕ್ತಾರ ಕೆ ಸಿ ತ್ಯಾಗಿ, 'ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರಿಂದ ನಿತೀಶ್ ಕುಮಾರ್ ಮೇಲೆ ಒತ್ತಡವಿದೆ. ಆದರೆ ನಿತೀಶ್ ಕುಮಾರ್ ಅವರು ಇದುವರೆಗೆ ಯಾವುದೇ ನಿರ್ದಿಷ್ಟ ಸ್ಥಾನದಿಂದ ಸ್ಪರ್ಧಿಸುವ ಬಗ್ಗೆ ಮನಸ್ಸು ಮಾಡಿಲ್ಲ. ಫುಲ್ಪುರಕ್ಕೆ ಸಂಬಂಧಿಸಿದಂತೆ ಇನ್ನೂ ಮಾತುಕತೆಗಳು ನಡೆದಿಲ್ಲ. ಅಖಿಲೇಶ್ ಯಾದವ್ ಅವರೊಂದಿಗೆ ಮಾತುಕತೆ ನಡೆಯುವ ವರೆಗೂ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಯುಪಿಯಲ್ಲಿ ಬಿಜೆಪಿ ವಿರುದ್ಧ ಜೆಡಿಯು ಮತ್ತು ಎಸ್ಪಿ ಪ್ರಬಲ ಮೈತ್ರಿ ಮಾಡಿಕೊಳ್ಳಬಹುದು' ಎಂದು ಹೇಳಿದ್ದಾರೆ.
ಎಸ್ಪಿ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಮಾತನಾಡಿ, ಇಲ್ಲಿಯವರೆಗೆ ಜೆಡಿಯು ಮತ್ತು ಎಸ್ಪಿ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ತಾತ್ವಿಕ ನಿರ್ಧಾರವನ್ನು ತೆಗೆದುಕೊಂಡಿವೆ. ಆದರೆ ಯುಪಿಯಲ್ಲಿ ಮೈತ್ರಿ ಬಗ್ಗೆ ಏನನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.

ಪೂರ್ವ ಮತ್ತು ಮಧ್ಯ ಯುಪಿ ಜಿಲ್ಲೆಗಳಾದ ಮಿರ್ಜಾಪುರ್, ವಾರಣಾಸಿ, ಚಂದೌಲಿ, ಪ್ರಯಾಗ್ರಾಜ್, ಕೌಶಂಬಿ, ಪ್ರತಾಪ್ಗಢ, ಫತೇಪುರ್, ಬಸ್ತಿ, ಗೊಂಡಾ, ಬಹ್ರೈಚ್, ಭದೋಹಿ ಮತ್ತು ಸೋನ್ಭದ್ರಾದಲ್ಲಿ ಕುರ್ಮಿಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಪ್ರತಾಪಗಢದಲ್ಲಿ ಬ್ರಾಹ್ಮಣರು ಮತ್ತು ಠಾಕೂರ್ಗಳು ಪ್ರಾಬಲ್ಯ ಹೊಂದಿದ್ದರೆ, ಕುರ್ಮಿಗಳು ಮೂರನೇ ಸ್ಥಾನದಲ್ಲಿ ಬರುತ್ತಾರೆ. ಪ್ರಯಾಗ್ರಾಜ್ನಲ್ಲಿಯೂ ಕುರ್ಮಿಗಳು ಪ್ರಬಲರಾಗಿದ್ದಾರೆ. ಫುಲ್ಪುರದ ಹಾಲಿ ಸಂಸದೆ, ಬಿಜೆಪಿಯ ಕೇಶರಿ ದೇವಿ ಪಟೇಲ್ ಕೂಡ ಕುರ್ಮಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಮುಸ್ಲಿಮರು, ಯಾದವರು ಮತ್ತು ಇತರ ಒಬಿಸಿಗಳಾದ ಮೌರ್ಯರು, ನಿಶಾದ್ಗಳು ಮತ್ತು ರಾಜಭರ್ಗಳು ಕೂಡ ಫುಲ್ಪುರದಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications