ಪಾರ್ಲಿಮೆಂಟ್ ಕಟ್ಟಡ: ಒಬ್ಬರು ಶವಪೆಟ್ಟಿಗೆ ಅಂತಾರೆ, ಮತ್ತೊಬ್ಬರು ಅನಗತ್ಯ ಅಂತಿದ್ದಾರೆ!
ನವದೆಹಲಿ: ಇದಕ್ಕೆ ಹೇಳೋದು ರಾಜಕೀಯ ಸಭ್ಯತೆ ಮೀರಿ ಹೋದರೆ ಆಗುವುದೇ ಬೇರೆ ಅಂತಾ. ಯಾಕೆ ಈ ಮಾತು ಅಂದ್ರ? ಅದಕ್ಕೆ ಕಾರಣ ಆರ್ಜೆಡಿ ಹೊಸ ಪಾರ್ಲಿಮೆಂಟ್ ಬಿಲ್ಡಿಂಗ್ ಬಗ್ಗೆ ಮಾಡಿರುವ ವಿವಾದಾತ್ಮಕ ಟ್ವೀಟ್. ಹೊಸ ಪಾರ್ಲಿಮೆಂಟ್ ಕಟ್ಟಡವನ್ನು ಶವಪೆಟ್ಟಿಗೆಗೆ ಹೋಲಿಸಿರುವ RJD ಟ್ವೀಟ್ ಇದೀಗ ಸಂಚಲನ ಸೃಷ್ಟಿಸಿದೆ. ಹಾಗೇ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪದೇ ಪದೆ ವಿವಾದದ ಸುಳಿಗೆ ಸಿಲುಕುವುದು ಲಾಲು ಪ್ರಸಾದ್ ಯಾದವ್ರ ಆರ್ಜೆಡಿ ಪಕ್ಷಕ್ಕೆ ಕರಗತವಾಗಿದೆ. ಅದರಲ್ಲೂ ಬಿಹಾರದಲ್ಲಿ ನಿತೀಶ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ನಂತರ ಅತಿರೇಕದ ಮಾತುಗಳಂತು ತಾರಕಕ್ಕೆ ಏರಿದೆ ಎನ್ನುವ ಆರೋಪವಿದೆ. ಈ ನಡುವೆ ದೇಶದ ಸಂಸತ್ ಕಟ್ಟಡದ ಬಗ್ಗೆ ಆರ್ಜೆಡಿ ಮಾಡಿದ ಟ್ವೀಟ್ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ನಿಜಕ್ಕೂ ಆರ್ಜೆಡಿ ಮಾಡಿರುವ ಟ್ವೀಟ್ನಲ್ಲಿ ಇರೋದು ಏನು? ವಿವಾದ ಸೃಷ್ಟಿಯಾಗಿದ್ದು ಎಲ್ಲಿಂದ? ಮುಂದೆ ಓದಿ.

ಸಂಸತ್ ಭವನದ ಜೊತೆ ಶವ ಪೆಟ್ಟಿಗೆ!
ಲಾಲು ಯಾದವ್ರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ವಿವಾದಾತ್ಮಕ ಟ್ವೀಟ್ ಮಾಡಿದ್ದು, ಇದೀಗ ಉದ್ಘಾಟನೆ ಆಗುತ್ತಿರುವ ಹೊಸ ಸಂಸತ್ ಭವನದ ರಚನೆಯನ್ನು ಶವ ಪೆಟ್ಟಿಗೆಗೆ ಜೊತೆ ಹೋಲಿಸಿದೆ. ಟ್ವೀಟ್ನಲ್ಲಿ ಒಂದ್ಕಡೆ ಶವಪೆಟ್ಟಿಗೆ ಹಾಕಿ ಇನ್ನೊಂದು ಕಡೆ ಸಂಸತ್ ಭವನದ ಕಟ್ಟಡದ ಫೋಟೋ ಹಾಕಿ 'ಇದು ಏನು?' ಎಂಬಂತೆ ಪ್ರಶ್ನಾರ್ಥಕ ಚಿಹ್ನೆ ಮೂಲಕ ವಿವಾದ ಹುಟ್ಟುಹಾಕಿದೆ. ಈ ಮೂಲಕ ವಿವಾದದ ಬಿರುಗಾಳಿ ಎಬ್ಬಿಸಿದೆ ಲಾಲು ಯಾದವ್ರ ಆರ್ಜೆಡಿ ಪಕ್ಷದ ವಿವಾದಾತ್ಮಕ ಟ್ವೀಟ್.
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಬಿಹಾರ ಸಿಎಂ ನಿತೀಶ್ ಹೇಳಿಕೆ ಸಂಚಲನ!
ಒಂದು ಕಡೆ ಆರ್ಜೆಡಿ ಟ್ವೀಟ್ ಮೂಲಕ ವಿವಾದ ಸೃಷ್ಟಿಸಿದೆ, ಇನ್ನೊಂದ್ಕಡೆ ಬಿಹಾರ ಸಿಎಂ ನಿತೀಶ್ ಕೂಡ ನೂತನ ಸಂಸತ್ ಭವನ ಸ್ಥಾಪನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಹೊಸ ಸಂಸತ್ ಭವನ ಅಗತ್ಯವೇ ಇಲ್ಲ' ಎಂದಿದ್ದಾರೆ ನಿತೀಶ್ ಕುಮಾರ್. ಈ ಮೂಲಕ ನಿತೀಶ್ ಕುಮಾರ್ ಮಾತುಗಳು ಕೂಡ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗೆ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಪಕ್ಷ ಮತ್ತು ಲಾಲು ಪಕ್ಷ ಆರ್ಜೆಡಿ ಒಟ್ಟಾಗಿ ನೂತನ ಸಂಸತ್ ಭವನದ ವಿರುದ್ಧ ರೊಚ್ಚಿಗೆದ್ದಿವೆ.

ನಿತೀಶ್ ಕುಮಾರ್ ಹೇಳಿದ್ದು ಏನು?
ಅಷ್ಟಕ್ಕೂ ನೂತನ ಸಂಸತ್ ಭವನದ ಬಗ್ಗೆ ಹೇಳಿಕೆ ನೀಡಿರುವ ನಿತೀಶ್ ಕುಮಾರ್ ಹೇಳಿದ್ದು ಏನು ಅಂದ್ರೆ, 'ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರ ಕೊಡುಗೆ ಇಲ್ಲವೋ ಅವರು ಬರೆಯಲು ಪ್ರಯತ್ನಿಸುತ್ತಿರುವ ಹೊಸ ಇತಿಹಾಸ ನೂತನ ಸಂಸತ್ ಭವನ. ರಾಷ್ಟ್ರಪತಿ ದ್ರೌಪದಿ ಮುರ್ಮು & ಉಪ ರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಣ ನೀಡದೇ ಇರುವುದು ಆಶ್ಚರ್ಯ ತರಿಸಿದೆ' ಎನ್ನುವ ಮೂಲಕ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಪವಾಸ ಮಾಡಲು ಜೆಡಿಯು ನಿರ್ಧಾರ!
ಮಾತು ಮುಂದುವರಿಸಿ ಕೇಂದ್ರ ಸರ್ಕಾರ & ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿಯೇ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್, ಸಂಸತ್ ಭವನ ಕಟ್ಟಡದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ್ದೇವೆ. ಹೊಸ ಸಂಸತ್ ಭವನ ಸ್ವತಃ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವನ್ನು ವಿರೋಧಿಸಿ ಜೆಡಿಯು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ ರಾಷ್ಟ್ರಪತಿ ಅವರು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದಾರೆ ಎಂಬುದನ್ನು ಜೆಡಿಯು ಪಕ್ಷ ಎತ್ತಿಹಿಡಿಯುತ್ತದೆ ಎಂದಿದ್ದಾರೆ ನಿತೀಶ್.
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲೇ ನೂತನ ಸಂಸತ್ ಭವನ ಉದ್ಘಾಟನೆ ವಿಚಾರ ಇಡೀ ದೇಶದ ರಾಜಕೀಯ ವಲಯದಲ್ಲಿ ಸುನಾಮಿ ಎಬ್ಬಿಸಿದೆ. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಪ್ರಧಾನಿ ಮೋದಿ ವಿರುದ್ಧ & ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ವಿಪಕ್ಷಗಳ ಈ ನಡೆಗೆ ಕೇರ್ ಮಾಡದೆ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನ ಅದ್ಧೂರಿಯಾಗಿ ನೆರವೇರಿಸುತ್ತಿದೆ.












Click it and Unblock the Notifications