ಅತ್ಯಾಚಾರಕ್ಕೆ ನಿರ್ಭಯಾ ಮೇಲೆ ಗೂಬೆ ಕೂರಿಸಿದ ರಾಯ್ಪುರ ಶಿಕ್ಷಕಿ
ರಾಯ್ಪುರ, ಜನವರಿ 30: "ಸಂತ್ರಸ್ಥೆ ಮನೆಯಲ್ಲೇ ಇದ್ದಿದ್ದರೆ ನಿರ್ಭಯಾ ಘಟನೆ ನಡೆಯುತ್ತಲೇ ಇರಲಿಲ್ಲ" ಎನ್ನುವ ಮೂಲಕ ರಾಯಪುರದ ಶಿಕ್ಷಕಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಛತ್ತೀಸಗಢದ ಕೇಂದ್ರಿಯ ವಿದ್ಯಾಲಯದ ಶಿಕ್ಷಕಿ ಎಸ್ ಸಿಂಗ್ ಎಂಬುವವರು ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಸಮಯದಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ರಾತ್ರಿ 8:30 ರ ಸಮಯದಲ್ಲಿ ನಾನು ರಸ್ತೆಯಲ್ಲಿ ನೋಡಿದೆ. ಆಕೆಗೆ ತಕ್ಷಣ ಮನೆ ಸೇರಿಕೊಳ್ಳುವಂತೆ ಹೇಳಿದೆ. ಮಹಿಳೆಯರು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕು. ನಿರ್ಭಯಾ ಸಹ ಆವತ್ತು ಮನೆಯಿಂದ ಆಚೆ ಬಂದಿರದಿದ್ದರೆ ಆ ಘಟನೆ ನಡೆಯುತ್ತಿರಲಿಲ್ಲ. ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಆಕೆಗೆ ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ, ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರವನ್ನೂ ಸರಿಯಾಗಿ ತೊಟ್ಟುಕೊಳ್ಳಬೇಕು. ಅದು ಪ್ರಚೋದನಾಕಾರಿಯಾಗಿರಬಾರದು ಎಂದ ಅವರು, ತಾವು ವಿದ್ಯಾರ್ಥಿಗಳು ಲಿಪ್ ಸ್ಟಿಕ್ ಹಚ್ಚುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ!

ಮಹಿಳೆಯಾಗಿ ಇಥ ಬೇಜವಾಬ್ದಾರಿ ಮಾತನ್ನಾಡಿದ ಶಿಕ್ಷಕಿಯ ನಡೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.
ದೆಹಲಿಯಲ್ಲಿ 2012ರ ಡಿಸೆಂಬರ್ 16 ರಂದು ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೆಲ ದಿನಗಳ ನಂತರ ಆಕೆ ಅಸುನೀಗಿದ್ದರು.
ಹೆಣ್ಣು ಮಕ್ಕಳು ತೊಡುವ ಬಟ್ಟೆ, ಅವರು ರಾತ್ರಿ ಮನೆಯಿಂದ ಆಚೆ ಹೋಗುವುದೇ ಅತ್ಯಾಚಾರಕ್ಕೆ ಕಾರಣ ಎನ್ನುವುದಾದರೆ ಈಗೀಗ ಹಸುಗೂಸುಗಳ ಮೇಲೂ ಅತ್ಯಾಚಾರ ನಡೆಯುತ್ತದಲ್ಲ, ಅದಕ್ಕೆ ಈ ಶಿಕ್ಷಕಿ ಏನೆನ್ನುತ್ತಾರೋ!












Click it and Unblock the Notifications