ನೀರವ್ ಮೋದಿ ಪ್ರಕರಣ: ಕರ್ನಾಟಕದ ಮೂಲದ ಗೋಕುಲ್ ನಾಥ್ ಶೆಟ್ಟಿ ಬಂಧನ
ನವದೆಹಲಿ, ಫೆಬ್ರವರಿ 17: ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ)ಗೆ ವಂಚನೆ ಎಸಗಲು ಸಹಾಯ ಮಾಡಿದ ಕರ್ನಾಟಕ ಮೂದಲ ಬ್ಯಾಂಕ್ ಅಧಿಕಾರಿ ಸೇರಿ ಮೂವರನ್ನು ಸಿಬಿಐ ಇಂದು ಬಂಧಿಸಿದೆ.
ಸದ್ಯ ನಿವೃತ್ತರಾಗಿರುವ ಅಂದಿನ ಪಿಎನ್ ಬಿ ಡೆಪ್ಯೂಟಿ ಮ್ಯಾನೇಜರ್ ಗೋಕುಲ್ ನಾಥ್ ಶೆಟ್ಟಿ, ಸಿಂಗಲ್ ವಿಂಡೋ ಆಪರೇಟರ್ ಗಳಾದ ಮನೋಜ್ ಖಾರಟ್ ಮತ್ತು ನೀರವ್ ಮೋದಿ ಗ್ರೂಪ್ ನ ಅಧಿಕೃತ ಸಿಗ್ನೇಚರಿಯಾಗಿದ್ದ ಹೇಮಂತ್ ಭಟ್ ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಅಧಿಕಾರಿಗಳು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
'ಲೂಟಿ ಮಾಡಿ ಪರಾರಿಯಾಗಿ' ಇದು ಮೋದಿ ಸರ್ಕಾರದ ನೀತಿ: ಕಾಂಗ್ರೆಸ್ ಕಿಡಿ
ಯಾರು ಈ ಗೋಕುಲ್ ನಾಥ್ ಶೆಟ್ಟಿ?
ಬ್ಯಾಂಕ್ ಗೆ ವಂಚನೆ ಎಸಗಲು ನೀರವ್ ಮೋದಿಗೆ ದೊಡ್ಡ ಮಟ್ಟದ ಸಹಾಯ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ಗೋಕುಲ್ ನಾಥ್ ಶೆಟ್ಟಿ. ಇವರು ಮೋದಿ ಸಾಲ ಪಡೆಯುವಾಗ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದರು.
ಗೋಕುಲ್ ನಾಥ್ ಶೆಟ್ಟಿ ಮೂಲ್ಕಿಯ ವಿಜಯಾ ಕಾಲೇಜಿಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದ್ದರು. ಅಲ್ಲಿ ಸಿಡ್ನ್ಯಾಮ್ ಕಾಲೇಜ್ ಆಫ್ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿ ಮುಂಬೈನಲ್ಲೇ ಉದ್ಯೋಗಕ್ಕೆ ಸೇರಿಕೊಂಡಿದ್ದರು.
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
2010ರಿಂದ ನಿವೃತ್ತಿಯಾಗುವವರೆಗೂ ಅವರು ಪಿಎನ್ ಬಿಯ ಮುಂಬೈ ಶಾಖೆಯ ವಿದೇಶಿ ವಿನಿಮಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೋದಿ ಅಕ್ರಮಗಳ ಜತೆ ಕೈಜೋಡಿಸಿದ್ದ ಗೋಕುಲ್ ನಾಥ್ ಶೆಟ್ಟಿ ಯಾವುದೇ ಖಾತ್ರಿ ಪಡೆಯದೇ ಸಾಲ ಖಾತ್ರಿ ಪತ್ರ ನೀಡಿದ್ದರು. ಇವರ ಜತೆ ಇನ್ನೋರ್ವ ಬ್ಯಾಂಕ್ ಅಧಿಕಾರಿ ಮನೋಜ್ ಕಾರಟ್ ಕೂಡ ಕೈಜೋಡಿಸಿದ್ದರು. ಇದೀಗ ಇಬ್ಬರನ್ನೂ ಸಿಬಿಐ ಬಂಧಿಸಿದೆ.