ನೀರವ್ ಮೋದಿ ವಂಚನೆಯ ಪರಿಣಾಮ, ಸಿಬಿಐಗೆ ದೂರುಗಳ ಮಹಾಪೂರ
ನವದೆಹಲಿ, ಫೆಬ್ರವರಿ 24: ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕುಗಳು ಜುವೆಲ್ಲರಿ ಉದ್ಯಮಿ ನೀರವ್ ಮೋದಿ ಮೇಲೆ ಪ್ರಕರಣ ದಾಖಲಿಸಿದ ನಂತರ ಇದೀಗ ದಿನಕ್ಕೊಂದು ಬ್ಯಾಂಕ್ ವಂಚನೆ ಪ್ರಕರಣಗಳು ಸಿಬಿಐ ಮೆಟ್ಟಿಲೇರುತ್ತಿವೆ.
ರೂ. 11,400 ಕೋಟಿಯ ನೀರವ್ ಮೋದಿ ಹಗರಣದ ನಂತರ ರೊಟೊಮ್ಯಾಕ್ ಪೆನ್ ಕಂಪನಿಯ ರೂ. 3695 ಕೋಟಿಯ ಹಗರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಮತ್ತೆ ಮೂರು ಪ್ರಕರಣಗಳು ಸಿಬಿಐ ಮೆಟ್ಟಿಲೇರಿವೆ.

ವಸೂಲಾಗದ ಸಾಲ ಅಥವಾ ವಂಚನೆ ನಡೆದಿರುವ ಮತ್ತೊಂದು ಹಗರಣದ ಸಂಬಂಧ ಪಿಎನ್ ಬಿ ಸಿಬಿಐಗೆ ಎರಡನೇ ದೂರು ನೀಡಿದೆ. ಬ್ಯಾಂಕ್ ಮ್ಯಾನೇಜರ್ ಒಬ್ಬರು 2011ರಲ್ಲಿ ಬ್ಯಾಂಕಿಗೆ 2 ಕೋಟಿ ರೂಪಾಯಿ ವಂಚಿಸಿದ್ದರು. ಈ ಪ್ರಕರಣದಲ್ಲಿ ಅವರನ್ನು ವಜಾ ಮಾಡಲಾಗಿದೆ ಎಂದು ಬ್ಯಾಂಕ್ ದೂರಿನಲ್ಲಿ ಹೇಳಿದೆ.
ಇದೇ ವೇಳೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ಸಿಬಿಐಗೆ ದೂರು ನೀಡಿದೆ. ದೆಹಲಿ ಮೂಲದ ಉದ್ಯಮಿ ಅಮಿತ್ ಸಿಂಗ್ಲಾ ಎಂಬವರಿಗೆ ಸಾಲ ನೀಡಿ ಅವರು ಸುಸ್ತಿದಾರರಾಗಿದ್ದರು. 9 ಕೋಟಿ ಸಾಲಕ್ಕೆ 18 ಕೋಟಿ ಆಸ್ತಿಯನ್ನು ಭದ್ರತೆಯಾಗಿ ನೀಡಿದ್ದರು. ಆದರೆ ಅದರ ಮೌಲ್ಯ ಕೇವಲ 2 ಕೋಟಿ ರೂಪಾಯಿ ಆಗಿತ್ತು ಎಂದು ಬ್ಯಾಂಕ್ ಹೇಳಿದೆ.
ಈ ಸಂಬಂಧ ಇದ್ದ ಸಾಲದ ಹಣವನ್ನು ವಸೂಲಿ ಮಾಡಲು ಬ್ಯಾಂಕ್ ಇದ್ದ ಅಲ್ಪ ಆಸ್ತಿಯನ್ನು ಜಪ್ತಿ ಕೂಡ ಮಾಡಿತ್ತು. ಇದೀಗ ಈ ಪ್ರಕರಣದಲ್ಲಿ ಮೂವರ ವಿರುದ್ಧ ಬ್ಯಾಂಕ್ ದೂರು ದಾಖಲಿಸಿದೆ.
ಇನ್ನೊಂದು ಕಡೆ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 389.85 ಕೋಟಿ ರೂಪಾಯಿ ವಂಚಿಸಿದ ಮತ್ತೋರ್ವ ವಜ್ರದ ರಫ್ತುದಾರನ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ದ್ವಾರ್ಕಾ ದಾಸ್ ಸೇಠ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಮೇಲೆ ಕೇಸ್ ದಾಖಲಿಸಿಲಾಗಿದೆ. ಆರು ತಿಂಗಳ ಹಿಂದೆಯೇ ಬ್ಯಾಂಕ್ ಈ ಸಂಬಂಧ ಸಿಬಿಐಗೆ ದೂರು ನೀಡಿತ್ತು. ಆದರೆ ಪ್ರಕರಣ ದಾಖಲಿಸಿಕೊಳ್ಳದ ಸಿಬಿಐ ಈಗ ಕಂಪನಿ ಮತ್ತು ಕಂಪನಿ ನಿರ್ದೇಶಕರಾದ ಸಭ್ಯಾ ಸೇಠ್, ರೀತಾ ಸೇಠ್, ಕೃಷ್ಣ ಕುಮಾರ್ ಸಿಂಗ್, ರವಿ ಸಿಂಗ್ ಮತ್ತು ಮತ್ತೊಂದು ಕಂಪನಿ ದ್ವಾರ್ಕಾ ದಾಸ್ ಸೇಠ್ ಎಸ್ಇಝಡ್ ಕಾರ್ಪೊರೇಷನ್ ವಿರುದ್ಧವೂ ದೂರು ದಾಖಲಿಸಿದೆ.











Click it and Unblock the Notifications