ಭಯೋತ್ಪಾದಕ ಚಟುವಟಿಕೆ: ಜಮ್ಮು-ಕಾಶ್ಮೀರದ 14 ಸ್ಥಳಗಳಲ್ಲಿ ಎನ್ಐಎ ದಾಳಿ
ಶ್ರೀನಗರ, ಡಿಸೆಂಬರ್ 23: ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವಲ್ಲಿ ನಿರತರಾಗಿದ್ದವರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಶೋಧ ನಡೆಸಿತು. ಇವರೆಲ್ಲರೂ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಮೂಲಕ ಕಾರ್ಯ ಚಟುವಟಿಕೆ ಮಾಡುತ್ತಿದ್ದರು. ಅಲ್ಪಸಂಖ್ಯಾತರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸುವ ಮೂಲಕ ಭಯೋತ್ಪಾದನೆ ಹರಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್, ಪುಲ್ವಾಮಾ, ಅನಂತನಾಗ್, ಸೋಪೋರ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ಎನ್ಐಎ ಶೋಧ ಕಾರ್ಯಾಚರಣೆ ನಡೆಸಿದೆ.
ಶೋಧಿಸಿದ ಜಾಗಗಳಿಂದ ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್ಗಳು ಮತ್ತು ಡಿಜಿಟಲ್ ಶೇಖರಣಾ ಸಾಧನಗಳಂತಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ನಿಷೇಧಿತ ಸಂಸ್ಥೆಗಳು, ಅವುಗಳ ಅಂಗಸಂಸ್ಥೆಗಳು ಮತ್ತು ಆಫ್-ಶೂಟ್ ಕ್ಯಾಡರ್ಗಳು ಈ ಪ್ರಕರಣಕ್ಕೆ ಸಂಬಂಧಿಸಿವೆ.
ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಕ್ರಿಮಿನಲ್ ಪಿತೂರಿಯನ್ನು ಈ ಸಂಘಟನೆಗಳಿಗೆ ಸೇರಿದ ಯುವಕರು ಮಾಡುತ್ತಿದ್ದರು ಎಂದು ಎನ್ಐಎ ತಿಳಿಸಿದೆ. ಇವರೆಲ್ಲರಿಗೂ ಪಾಕಿಸ್ತಾನ ಮೂಲದ ಕಮಾಂಡರ್ಗಳಿದ್ದಾರೆ.
'ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಬರ್-ಸ್ಪೇಸ್ ಬಳಸಿ, ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡಿದ್ದರು. ಆ ಮೂಲಕ ಕೋಮು ಸೌಹಾರ್ದತೆ ಹಾಳುಗೆಡುವ ಕೆಲಸಕ್ಕೆ ಕೈಹಾಕಿದ್ದರು. ನಂತರ ಭಯೋತ್ಪಾದಕ ದಾಳಿಗಳನ್ನು ನಡೆಸುವ ಹುನ್ನಾರ ರೂಪಿಸಿದ್ದರು' ಎಂದು ಎನ್ಐಎ ಹೇಳಿದೆ.
ಎನ್ಐಎ ಜಮ್ಮು ಶಾಖೆಯು ಈ ವರ್ಷ ಜೂನ್ 21 ರಂದು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದೆ.
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಸರ್ಕಾರ ಹೊಂದಿದೆ. ಈ ಕಾರಣ, ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸುವ ಇಂತಹ ಸಂಘಟನೆಗಳ ವಿರುದ್ಧ ಎನ್ಐಎಯ ದಾಳಿ ನಡೆಸಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಇತ್ತೀಚೆಗೆ ರಾಜ್ಯಸಭೆಗೆ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡಿ, 'ಈ ವರ್ಷದ ನವೆಂಬರ್ 30 ರ ವರೆಗೆ ಜಮ್ಮು-ಕಾಶ್ಮೀರದಲ್ಲಿ ಮೂವರು ಕಾಶ್ಮೀರಿ ಪಂಡಿತರು ಸೇರಿದಂತೆ ಒಟ್ಟು 14 ಮಂದಿ ಅಲ್ಪಸಂಖ್ಯಾತರನ್ನು ಕೊಲ್ಲಲಾಗಿದೆ' ಎಂದು ತಿಳಿಸಿದ್ದರು.
ಈ ವರ್ಷ ಇದುವರೆಗೆ 123 ಭಯೋತ್ಪಾದಕ ಘಟನೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 180 ಉಗ್ರರು, 31 ಭದ್ರತಾ ಸಿಬ್ಬಂದಿ ಮತ್ತು 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದರು.
ಇಷ್ಟೆಲ್ಲ ನಡೆದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಸಚಿವರು ಅಭಿಪ್ರಯ ಪಟ್ಟಿದ್ದರು.