ಎನ್ಐಎ ಅಧಿಕಾರಿ ತನ್ಜಿಲ್ ಹತ್ಯೆ, ಇಬ್ಬರ ಬಂಧನ
ಬೆಂಗಳೂರು, ಏಪ್ರಿಲ್ 12 : ಎನ್ಐಎ ಅಧಿಕಾರಿ ಮೊಹಮ್ಮದ್ ತನ್ಜಿಲ್ ಅಹ್ಮದ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಯ ಸುಳಿವು ಕೊಟ್ಟವರಿಗೆ ನಗದು ಬಹುಮಾನವನ್ನು ಪೊಲೀಸರು ಘೋಷಣೆ ಮಾಡಿದ್ದಾರೆ.
ತನ್ಜಿಲ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಾನ್ ಮತ್ತು ಝೈನೂಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಪ್ರಕರಣದ ರೂವಾರಿ ಮುನೀರ್ ಎಂದು ಗುರುತಿಸಲಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರೆದಿದೆ. [ತನ್ಜಿಲ್ ಅಹ್ಮದ್ ಹತ್ಯೆ ವ್ಯವಸ್ಥಿತ ಸಂಚು]

ರೆಹಾನ್ ಮತ್ತು ಝೈನೂಲ್ ವಿಚಾರಣೆ ನಡೆಸಿದಾಗ ಮುನೀರ್ ಬಗ್ಗೆ ತಿಳಿದುಬಂದಿದೆ. ಮುನೀರ್ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಬಿಜ್ನೋರ್ನ ನಿವಾಸಿಯಾದ ಮುನೀರ್ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. [NIA ಅಧಿಕಾರಿ ಹತ್ಯೆ]
ಇಬ್ಬರು ಆರೋಪಿಗಳನ್ನು ಬಂಧಿಸಿದರೂ ತನ್ಜಿಲ್ ಅಹ್ಮದ್ ಹತ್ಯೆಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ. ಮುನೀರ್ ಬಂಧನ ಬಳಿಕ ಸ್ಪಷ್ಟವಾದ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿವಾದದ ಹಿನ್ನಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಏ.3ರ ಭಾನುವಾರ ಮುಂಜಾನೆ ಉತ್ತರ ಪ್ರದೇಶದ ಬಿಜ್ನೋರ್ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಎನ್ಐಎ ಅಧಿಕಾರಿ ತನ್ಜಿಲ್ ಅಹ್ಮದ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅಹ್ಮದ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ತನ್ಜಿಲ್ ಅಹ್ಮದ್ ಅವರು ಬಿಎಸ್ಎಫ್ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿದ್ದರು. 2009ರ ಫೆಬ್ರವರಿಯಲ್ಲಿ ಅವರನ್ನು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು. ಮೊದಲು ಎನ್ಐಎ ಗುಪ್ತಚರ ವಿಭಾಗದಲ್ಲಿದ್ದ ಅವರು ನಂತರ ತನಿಖಾಧಿಕಾರಿಯಾಗಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಯನ್ನು ಅವರು ನಡೆಸುತ್ತಿದ್ದರು. [ಪಿಟಿಐ ಚಿತ್ರ]












Click it and Unblock the Notifications