ರಾಷ್ಟ್ರಪತಿ ಆಯ್ಕೆಗೆ ಬಿಜೆಪಿಯಿಂದ ಬ್ರಾಹ್ಮಣ-ದಲಿತ ಸಮೀಕರಣ
ನವದೆಹಲಿ, ಜೂನ್ 15: ಇನ್ನೇನು ತಿಂಗಳು ಅದರ ಮೇಲೆ ಒಂದೆರಡು ದಿನಕ್ಕೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸ್ಥಾನಗಳ ಆಯ್ಕೆ ನಡೆಯುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಬ್ರಾಹ್ಮಣ ಹಾಗೂ ದಲಿತ ಸಮೀಕರಣದ ಲೆಕ್ಕಾಚಾರದಲ್ಲಿ ತೊಡಗಿದೆ.
ರಾಷ್ಟ್ರಪತಿ ಹುದ್ದೆಗೆ ಬ್ರಾಹ್ಮಣ ಹಾಗೂ ಉಪರಾಷ್ಟ್ರಪತಿ ಸ್ಥಾನಕ್ಕೆ ದಲಿತರನ್ನು ಆಯ್ಕೆ ಮಾಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎಂಬುದನ್ನು ಮೂಲಗಳು ಒನ್ ಇಂಡಿಯಾಗೆ ತಿಳಿಸಿವೆ. ಈ ಮಧ್ಯೆ ಜಾರ್ಖಂಡ್ ನ ರಾಜ್ಯಪಾಲೆ ಆಗಿರುವ ದ್ರೌಪದಿ ಮುರ್ಮು ಆವರ ಹೆಸರು ಇನ್ನೂ ರೇಸಿನಿಂದ ಹೊರಬಿದ್ದಿಲ್ಲ.

ಅವರ ಜತೆಗೆ ಇನ್ನಷ್ಟು ಹೆಸರುಗಳ ಚರ್ಚೆಯಾಗಿದೆ. ಜೂನ್ ಇಪ್ಪತ್ತರಂದು ಹೆಸರು ಘೋಷಿಸುವ ಸಾಧ್ಯತೆ ಇದೆ. ಇಪ್ಪತ್ಮೂರಂದು ಆತ ಅಥವಾ ಆಕೆ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಾರೆ. ಇಪ್ಪತ್ತೈದನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳುತ್ತಿದ್ದು, ಅಷ್ಟರಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿದಿರಬೇಕು ಎಂದು ಬಿಜೆಪಿ ಬಯಸಿದೆ.
ಹಲವು ಹೆಸರುಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ ಎಂಬುದನ್ನು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಶುಕ್ರವಾರದಂದು ಸೋನಿಯಾ ಗಾಂಧಿ ಅವರ ಭೇಟಿ ನಿಗದಿಯಾಗಿದ್ದು, ಆ ವೇಳೆ ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು ಹೆಸರುಗಳನ್ನು ತಿಳಿಸುತ್ತಾರೆ. ಬ್ರಾಹ್ಮಣ-ದಲಿತ ಎಂಬ ಸಮೀಕರಣದಲ್ಲಿ ಐದಾರು ಮಂದಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.
ಮೊದಲ ಸುತ್ತಿನ ಲೆಕ್ಕಾಚಾರದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹೆಸರು ಕೇಳಿಬಂದಿತ್ತು. ಇನ್ನು ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರು ಉಪರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.












Click it and Unblock the Notifications