ಅಡ್ವಾಣಿ ಕನಸಿನ ಹುದ್ದೆಗೆ ಎಳ್ಳು ನೀರು ಬಿಟ್ಟಿತಾ ಬಾಬ್ರಿ ಮಸೀದಿ?
ಬಾಬ್ರಿ ಮಸೀದಿ ಪ್ರಕರಣದಲ್ಲಿ ಅಡ್ವಾಣಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಹೀಗಾಗಿ ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ಅಡ್ವಾಣಿ ಹೆಸರು ಎರಡನೇ ಸಾಲಿನಲ್ಲಿ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.
ನವದೆಹಲಿ, ಏಪ್ರಿಲ್ 20: ಯಾವ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಎಲ್.ಕೆ ಅಡ್ವಾಣಿಯನ್ನು ರಾಜಕೀಯ ಪ್ರವರ್ಧಮಾನಕ್ಕೆ ತಂದಿತೋ ಅದೇ ಬಾಬ್ರಿ ಮಸೀದಿ ಅಡ್ವಾಣಿಯ ಕನಸಿಕ ಹಾದಿಗೆ ಅಡ್ಡಗಾಲಾಗಿ ಪರಿಣಮಿಸಿದೆ.
ಬಾಬ್ರಿ ಮಸೀದಿ ಪ್ರಕರಣದಲ್ಲಿ ಅಡ್ವಾಣಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಹೀಗಾಗಿ ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ಅಡ್ವಾಣಿ ಹೆಸರು ಎರಡನೇ ಸಾಲಿನಲ್ಲಿ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಇದೇ ಜುಲೈನಲ್ಲಿ ಪ್ರಣಬ್ ಮುಖರ್ಜಿ ಅವಧಿ ಕೊನೆಗೊಳ್ಳಲಿದ್ದು ಹೊಸ ರಾಷ್ಟ್ರಪತಿ ಆಯ್ಕೆ ನಡೆಯಬೇಕಾಗಿದೆ.[ಬಾಬ್ರಿ ಪ್ರಕರಣ: ಆರೋಪ ಸಾಬೀತಾದಲ್ಲಿ ಅಡ್ವಾಣಿ ಮತ್ತಿತರರಿಗೆ ಐದು ವರ್ಷ ಜೈಲು]
ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರ ಬರುತ್ತಿದ್ದಂತೆ ಬಿಜೆಪಿ ನಾಯಕ ಅರುಣ್ ಜೇಟ್ಲಿಗೆ ಪ್ರಶ್ನೆಯೊಂದು ತೂರಿ ಬಂತು. ಸುಪ್ರೀಂ ಕೋರ್ಟ್ ತೀರ್ಪು ಅಡ್ವಾಣಿಯನ್ನು ರಾಷ್ಟ್ರಪತಿ ಹುದ್ದೆಯಿಂದ ದೂರ ಇಡಲಿದೆಯಾ ಎಂಬ ಪ್ರಶ್ನೆ ಅದಾಗಿತ್ತು. ಇದಕ್ಕೆ ಉತ್ತರಿಸಿದ ಜೇಟ್ಲಿ ಇದೊಂದು 'ಕಾಲ್ಪನಿಕ ಪ್ರಶ್ನೆ' ಎಂದಷ್ಟೇ ಹೇಳಿದರು. "ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಅಡ್ವಾಣಿ ಅಪರಾಧಿಯಾಗಿಲ್ಲ. ವಿಚಾರಣೆ ನಡೆದು ಅವರು ಅಪರಾಧಿ ಹೌದೋ ಅಲ್ಲವೋ ಎಂಬುದು ಸಾಬೀತಾಗಬೇಕಾಗಿದೆ," ಎಂದಿದ್ದಾರೆ.[ ಅಯೋಧ್ಯೆಗೆ ಹೊರಟಿದ್ದ ಉಮಾ ಭಾರತಿಯನ್ನು ತಡೆದು ನಿಲ್ಲಿಸಿದರೇ ಅಮಿತ್ ಶಾ?]
ಸದ್ಯಕ್ಕೆ ಇಲ್ಲಿಯವರೆಗೆ ಬಿಜೆಪಿಯಾಗಲಿ ಎನ್.ಡಿ.ಎ ಆಗಲಿ ರಾಷ್ಟ್ರಪತಿ ಹುದ್ದೆಗೆ ಯಾರ ಹೆಸರನ್ನೂ ಬಹಿರಂಗವಾಗಿ ಘೋಷಿಸಿಲ್ಲ. ಆದರೆ ಅಡ್ವಾಣಿ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸಲಾಗುವುದು ಎಂಬ ಮಾತುಕತೆಗಳು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿವೆ. ಇದೇ ವೇಳೆ ಕೆಲವು ಮಾಧ್ಯಮಗಳು ಇದು ಗುರುವಿಗೆ ನರೇಂದ್ರ ಮೋದಿ ನೀಡಲಿರುವುವ 'ಗುರುದಕ್ಷಿಣೆ' ಎಂದೂ ಬಣ್ಣಿಸಿದ್ದವು.
ಇನ್ನು ಈ ಹಿಂದೆ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಅಡ್ವಾಣಿ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸದೇ ಇದ್ದರೆ ತಮ್ಮ ಪಕ್ಷ ಒಮ್ಮತದ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದು ಹೇಳಿದ್ದರು.[ಸುಪ್ರೀಂ ಆದೇಶ: ಮುರಳಿ ಭೇಟಿ ಮಾಡಿದ ಆಡ್ವಾಣಿ]
ಸದ್ಯ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನಲೆಯಲ್ಲಿ ಅಡ್ವಾಣಿ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸಲು ಯಾವುದೇ ಅಡ್ಡಿ ಇಲ್ಲ. ಯಾಕೆಂದರೆ ಅವರಿನ್ನೂ ಅಪರಾಧಿಯಾಗಿಲ್ಲ. ಆದರೆ ಬಿಜೆಪಿ ಮತ್ತು ಆರ್.ಎಸ್.ಎಸ್ ಅಡ್ವಾಣಿ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸುತ್ತದೆಯೋ ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ.