26/11 ದಾಳಿ: ಕಸಬ್ ಹಿಡಿದ ವೀರ ಒಂಬಳೆ ಸ್ಮರಣೆ
ಬೆಂಗಳೂರು, ನ.26: ಮುಂಬೈ ಮೇಲಿನ ಉಗ್ರರ ದಾಳಿ ನಡೆದು ಇಂದಿಗೆ ಐದು ವರ್ಷ ಕಳೆದಿದೆ. ದಾಳಿ ನಡೆಸಿದ ಉಗ್ರರೆಲ್ಲರೂ ಹತರಾಗಿದ್ದಾರೆ. ಸೆರೆ ಸಿಕ್ಕ ಏಕೈಕ ಉಗ್ರ ಕಸಬ್ ನನ್ನು ನೇಣಿಗೆ ಹಾಕಲಾಗಿದೆ. ಹುತಾತ್ಮರಾದ ಯೋಧರಿಗೆ ಅಶೋಕ ಚಕ್ರ ಸೇರಿದಂತೆ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಮುಂಬೈ ಸೇರಿದಂತೆ ದೇಶದ ಹಲವೆಡೆ ಹುತಾತ್ಮರನ್ನು ಹೆಮ್ಮೆಯಿಂದ ಈ ದಿನ ಸ್ಮರಿಸಿಕೊಳ್ಳಲಾಗಿದೆ. ಉಗ್ರ ಕಸಬ್ ನನ್ನು ಹಿಡಿದ ತುಕಾರಾಮ್ ಒಂಬಳೆ ಸಾಹಸವನ್ನು ಮತ್ತೊಮ್ಮೆ ಮೆಲುಕು ಹಾಕಿಕೊಳ್ಳೋಣ...
ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ತುಕಾರಾಮ್ ಒಂಬಳೆ ಅವರ ಬಳಿ ಸಶಸ್ತ್ರ ಪಡೆ ಇರಲಿಲ್ಲ. ಉಗ್ರರು ಬರುತ್ತಿರುವ ದಾರಿಯ ಮಾಹಿತಿ ವಾಕಿ ಟಾಕಿಯಲ್ಲಿ ಧ್ವನಿಸಿದ್ದು ಬಿಟ್ಟರೆ ಏನು ಮಾಡಬೇಕು ಎಂಬುದರ ಬಗ್ಗೆ ಪೂರ್ವ ನಿಯೋಜಿತ ಯೋಜನೆ ಇರಲಿಲ್ಲ. ಹೀಗಿದ್ದರೂ ಉಗ್ರನೊಬ್ಬನನ್ನು ಕೊಂದು ಕಾರಿನಲ್ಲಿದ್ದ ಮಹಮ್ಮದ್ ಅಜ್ಮಲ್ ಕಸಬ್ ನನ್ನು ಗಿರ್ ಗಾಮ್ ಚೌಪಟ್ಟಿಯ ಬಳಿ ಹಿಡಿದುಕೊಂಡಿದ್ದು ರೋಚಕತೆಗೆ ಸಾಕ್ಷಿ.
ದಕ್ಷಿಣ ಮುಂಬೈನ ಚೌಪಟ್ಟಿಯಲ್ಲಿ ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತುಕಾರಾಂ ಅವರಿಗೆ ಉಗ್ರರಿಬ್ಬರು ಮರೀನ್ ಡ್ರೈವ್ ಬಳಿ ಕಾರು ಕಸಿದುಕೊಂಡು ಮಲಬಾರ್ ಹಿಲ್ ಕಡೆ ಬರುತ್ತಿರುವ ಮಾಹಿತಿ ಸಿಕ್ಕಿದೆ. ಒಂಬಳೆ ಹಾಗೂ ಸಂಗಡಿಗರು ಬಂದೂಕು ಹಿಡಿದು ಕಾಯುತ್ತಾ ನಿಲ್ಲುತ್ತಾರೆ.
ಸ್ಕೋಡಾ ಕಾರಿನಲ್ಲಿ ಬಂದ ಉಗ್ರರು ಪೊಲೀಸ್ ತಡೆಯನ್ನು ಕಂಡು ಬೆಚ್ಚುತ್ತಾರೆ. ಆದರೆ, ಬೇರೆ ದಾರಿ ಇಲ್ಲದೆ ಪೊಲೀಸರಿದ್ದ ಕಡೆಗೆ ಕಾರು ಚಲಿಸುತ್ತಾರೆ. ಉಗ್ರ ಕೈ ತಪ್ಪಿ ಹಾಕುವ ಶಂಕೆ ವ್ಯಕ್ತವಾಗುತ್ತಿದ್ದಂತೆ ತಡ ಮಾಡದೆ ಒಂಬಳೆ ಕಾರಿನೆಡೆಗೆ ನುಗ್ಗುತ್ತಾ ನೇರವಾಗಿ ಕಸಬ್ ನನ್ನು ಹಿಡಿಯುತ್ತಾರೆ. ಕಸಬ್ ಕೈಲಿದ್ದ ರೈಫಲ್ ಸತತವಾಗಿ ಗುಂಡು ಹಾರಿಸಿದರೂ ಲೆಕ್ಕಿಸದೆ ಒಂಬಳೆ ತನ್ನ ಪಟ್ಟು ಬಿಗಿಗೊಳಿಸುತ್ತಾರೆ. ಇದರಿಂದ ಉತ್ತೇಜನಗೊಂಡ ಇತರೆ ಸಿಬ್ಬಂದಿ ಕಸಬ್ ನನ್ನು ಸುತ್ತುವರೆದು ಬಂಧಿಸುತ್ತಾರೆ. ಆದರೆ, ಅಷ್ಟರಲ್ಲಿ ಒಂಬಳೆ ಅಮರಾಗಿರುತ್ತಾರೆ.ಹುತಾತ್ಮರ ಸ್ಮರಣೆ ಚಿತ್ರಗಳನ್ನು ಮುಂದೆ ನೋಡಿ...

ಒಂಬಳೆ ಪುತ್ರಿ ಹೇಳಿಕೆ
ಸುಪ್ರೀಂ ಕೋರ್ಟ್ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಸಂದರ್ಭದಲ್ಲಿ ತುಕಾರಾಮ್ ಒಂಬಳೆ ಅವರ ಪುತ್ರಿ ವೈಶಾಲಿ ಒಂಬಳೆ 'ನನ್ನ ತಂದೆ ದೇಶಕ್ಕಾಗಿ ಜೀವ ತೆತ್ತಿದ್ದಾರೆ. ಕಸಬ್ ಗಲ್ಲು ಅಪ್ಜಲ್ ಗುರುವಿನಂತೆ ಮರೀಚಿಕೆಯಾಗದಿರಲಿ' ಎಂದು ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಂಬಳೆ ಅವರಿಗೆ ಭಾರತ ಸರ್ಕಾರ 2009ರ ಜನವರಿ 26ರಂದು ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಮೇಜರ್ ಸಂದೀಪ್ ಅಮರ
ಜೀವದ ಹಂಗುತೊರೆದು ಮುಂಬೈನ ತಾಜ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ಯತ್ನಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪು ಸದಾ ಇರುವಂತೆ ಮಾಡಿರುವ ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಅವರು ಬೆಂಗಳೂರಿನ ರಾಮಮೂರ್ತಿ ನಗರದ ಸಿಗ್ನಲ್ ಸಮೀಪ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕರಾಳ ನೆನಪು
2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ 166 ಜನರನ್ನು ಹತ್ಯೆಗೈದಿದ್ದರು.
ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ಇದ್ದರ ಜನರನ್ನು ಪಾರು ಮಾಡಲು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ಹೋದಾಗ ಉಗ್ರರ ಜೊತೆ ಹೋರಾಡುತ್ತಲೇ ಮಡಿದಿದ್ದರು.

ಹುತಾತ್ಮರ ಕುಟುಂಬ ವರ್ಗ
ಜನವರಿ 26,2009ರಲ್ಲಿ ಸಂದೀಪ್ ಅವರಿಗೆ ಮರಣೋತ್ತರವಾಗಿ ಅಶೋಕ್ ಚಕ್ರ ನೀಡಲಾಗಿದೆ. ಸಂದೀಪ್ ಅವರ ಜೊತೆಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಲಾಸ್ಕರ್, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಅವರಿಗೂ ಮರಣೋತ್ತರ ಪ್ರಶಸ್ತಿ ಸಿಕ್ಕಿದೆ.

ಹುತಾತ್ಮರಿಗೆ ಶ್ರದ್ಧಾಂಜಲಿ
ಮುಂಬೈ ದಾಳಿಯಲ್ಲಿ ಮೃತಪಟ್ಟ ಹುತಾತ್ಮರಿಗೆ ನವೆಂಬರ್ 26, 2013ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರು ಮುಂಬೈನ ನಾರಿಮನ್ ಹೌಸ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹುತಾತ್ಮರ ಕುಟುಂಬ ವರ್ಗ
26/11 ಉಗ್ರರ ದಾಳಿ ನಡೆದು ಐದು ವರ್ಷವಾದ ಹಿನ್ನೆಲೆಯಲ್ಲಿ ಮುಂಬೈನ ಪೊಲೀಸ್ ಜಿಂಖಾನ ಸ್ಮಾರಕದ ಬಳಿ ಹುತಾತ್ಮರೊಬ್ಬರ ಪತ್ನಿ, ಪುತ್ರ ಹೂವು ಅರ್ಪಿಸಿ ನಮಿಸಿದ್ದಾರೆ.

ಕಸಬ್ ಅಂತ್ಯ
ಮುಂಬೈ ದಾಳಿಗೆ ಕಾರಣರಾದ ಎಲ್ಲಾ ಉಗ್ರರು ಅಂದೇ ಮೃತಪಟ್ಟಿದ್ದರು. ಸಿಕ್ಕಿ ಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಬಂಧಿಸಲಾಗಿತ್ತು. ಕಸಬ್ ಗೆ ನ.21 ಪುಣೆಯ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.












Click it and Unblock the Notifications