ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್
ಕೋಲ್ಕತಾ, ಸೆಪ್ಟೆಂಬರ್ 18 : ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿ ಬ್ರಿಟಿಷರ ವಿರುದ್ಧ ಸಮರ ಸಾರಿದ್ದ 'ನೇತಾಜಿ' ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 64 ಕಡತಗಳು ಬಹಿರಂಗವಾಗಿರುವುದು ಇನ್ನಿಲ್ಲದ ಕುತೂಹಲವನ್ನು ಸೃಷ್ಟಿಸಿದ್ದರೆ, ಇವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿರುವ ಟೈಮಿಂಗ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನೇತಾಜಿಗೆ ಸಂಬಂಧಿಸಿದ ಫೈಲುಗಳನ್ನು ಡಿಕ್ಲಾಸಿಫೈ ಮಾಡುವುದಾಗಿ ಮಮತಾ ಅವರು ಕಳೆದ ವಾರ ಘೋಷಿಸಿದ್ದಾಗಲೇ ಅನೇಕರಲ್ಲಿ ಹುಬ್ಬೇರಿದ್ದರೆ, ಹಲವರ ಹುಬ್ಬು ಗಂಟಿಕ್ಕುವಂತಾಗಿತ್ತು. ಈ ವಿಷಯದಲ್ಲಿ ಪಾರದರ್ಶಕತೆ ಇರಬೇಕು, ತಮ್ಮ ನೆಚ್ಚಿನ ನಾಯಕನ ಬಗ್ಗೆ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿರುವ ಮಮತಾ ಬ್ಯಾನರ್ಜಿ, ಇಡೀ ಜಗತ್ತಿನ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.
ಮಮತಾರನ್ನು ಶ್ಲಾಘಿಸಲೇಬೇಕು : ಅತ್ಯಂತ ಚಾಣಾಕ್ಷ ರಾಜಕೀಯ ನಡೆಗಳನ್ನು ನಡೆಸುವುದರಲ್ಲಿ ತಮ್ಮ ವಿರೋಧಿಗಳನ್ನು ಮೀರಿಸುವ ಮಮತಾ ಅವರನ್ನು, ನೇತಾಜಿಗೆ ಸಂಬಂಧಿಸಿದ ಫೈಲುಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಶ್ಲಾಘಿಸಲೇಬೇಕು. ಜೊತೆಗೆ, ನರೇಂದ್ರ ಮೋದಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಮಮತಾ, ಜನರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. [ನೇತಾಜಿಗೆ ಸಂಬಂಧಿಸಿದ 64 ಸೀಕ್ರೆಟ್ ಫೈಲ್ಸ್ ಬಹಿರಂಗ]
ನೇತಾಜಿಗೆ ಸಂಬಂಧಿಸಿದ ಕಡತಗಳು ಬಹಿರಂಗವಾದರೆ ಕಾಂಗ್ರೆಸ್ ಪಕ್ಷ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇತ್ತು. ಇದನ್ನು ಮನಗಂಡಿದ್ದ ಪ್ರಧಾನಿ ನರೇಂದ್ರ ಮೋದಿ, ರಹಸ್ಯಗಳನ್ನು ತುಂಬಿಕೊಂಡಿರುವ 64 ಫೈಲುಗಳನ್ನು ಡಿಕ್ಲಾಸಿಫೈ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದನ್ನು ಮನಗಂಡೇ ಮಮತಾ ಅವರು, ಮೋದಿಗಿಂತ ಮೊದಲೇ ಬಹಿರಂಗಗೊಳಿಸಿದ್ದಾರೆ.
ನೇತಾಜಿ ರಹಸ್ಯಗಳಿಗೆ ಸಂಬಂಧಿಸಿದಂತೆ 'India's Biggest Cover Up' ಎಂಬ ಪುಸ್ತಕವನ್ನು ಬರೆದಿರುವ ಸಂಶೋಧಕ ಅನುಜ್ ಧಾರ್ ಅವರು, ಈ ಫೈಲುಗಳನ್ನು ಡಿಕ್ಲಾಸಿಫೈ ಮಾಡಿರುವುದರ ಹಿಂದೆ ಇನ್ನೂ ಅನೇಕ ಕಾರಣಗಳಿವೆ ಎಂದು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಮಮತಾ ಮೊದಲ ಗೆಲುವನ್ನು ಕಂಡಿದ್ದು ಮಾತ್ರ ಸುಳ್ಳಲ್ಲ.
ಇನ್ನೂ ಏನೇನು ರಹಸ್ಯಗಳಿವೆಯೋ? : ಈ ಕಡತಗಳಲ್ಲಿ ಏನೇನು ರಹಸ್ಯಗಳು ಅಡಗಿವೆಯೋ ಬಲ್ಲವರಾರು? ಈಗ ಡಿಕ್ಲಾಸಿಫೈ ಮಾಡಲಾಗಿರುವ ಕಡತಗಳಲ್ಲಿ ಹುದುಗಿರುವ ಮತ್ತಷ್ಟು ರಹಸ್ಯಗಳನ್ನು ಭೇದಿಸಲು ಕೇಂದ್ರ ಸರಕಾರ ಪ್ರಯತ್ನ ಮಾಡಲಿ ಎಂಬ ಉದ್ದೇಶದಿಂದಲೇ ಮಮತಾ ಬ್ಯಾನರ್ಜಿ ಅವರು ನೇತಾಜಿಯ ಫೈಲುಗಳನ್ನು ಬಹಿರಂಗಗೊಳಿಸಿದ್ದಾರೆ ಎನ್ನುತ್ತಾರೆ ಅನುಜ್ ಧಾರ್.
ಈ 64 ಫೈಲುಗಳ ಜೊತೆ ಕೇಂದ್ರದ ಬಳಿಯೂ ಸುಮಾರೂ 135 ರಹಸ್ಯ ಕಡತಗಳಿವೆ. ನೇತಾಜಿ ರಹಸ್ಯ ಜೀವನದ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಅವನ್ನು ಕೂಡ ಕೇಂದ್ರ ಖಂಡಿತ ಭೇದಿಸಲಿದೆ. ಏನೇ ಆದರೂ ಮೊದಲ ಶ್ರೇಯ ಸಿಗುವುದು ಮಮತಾ ಬ್ಯಾನರ್ಜಿ ಅವರಿಗೇ. ಪಶ್ಚಿಮ ಬಂಗಾಳದ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಇದು ಮಮತಾರ ಚಾಣಾಕ್ಷ ನಡೆ ಎಂದಿದ್ದಾರೆ ಅನುಜ್.
ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ಸ್ವಾತಂತ್ರ್ಯಕ್ಕೂ ಮೊದಲೇ 1945ರಲ್ಲಿ ನೇತಾಜಿ ಅಪಘಾತದಲ್ಲಿ ಅಸುನೀಗಿದರಾ? ಸ್ವಾತಂತ್ರ್ಯ ಲಭಿಸಿದ ನಂತರವೂ ನೇತಾಜಿ 'ಗುಮ್ ನಾಮಿ ಬಾಬಾ' ಆಗಿ ನಿಜಕ್ಕೂ ಭಾರತದಲ್ಲಿ ನೆಲೆಸಿದ್ದರಾ? ಅವರ ಹತ್ಯೆಗಾಗಿ ಯಾರ್ಯಾರಿಂದ ಏನೇನು ಷಡ್ಯಂತ್ರ ನಡೆದಿತ್ತು? ಎಲ್ಲ ಸೀಕ್ರೆಟ್ ಗಳನ್ನು ಸದ್ಯದಲ್ಲೇ ಬಹಿರಂಗವಾಗಲಿದೆ.