ಅಂದು ಶಿವಸೇನೆ.. ಇಂದು ಎನ್ಸಿಪಿ.. ಏನಾಗುತ್ತಿದೆ ಮಹಾರಾಷ್ಟ್ರದಲ್ಲಿ?
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಎನ್ಸಿಪಿ ಪಕ್ಷದ ಪ್ರಮುಖ ನಾಯಕ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ತೊಡೆತಟ್ಟಿ ಹೊರಬಂದಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ, ಶಿವಸೇನೆ ರೀತಿ ಎನ್ಸಿಪಿ ಕೂಡ ಹರಿದು ಹಂಚಿ ಹೋಗುತ್ತಾ? ಚಿಹ್ನೆ ಸಹಿತ ಎಲ್ಲ ವಿಚಾರಕ್ಕೂ ಬಡಿದಾಟ ಶುರುವಾಗುತ್ತಾ? ಅಂತಾ. ಈ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕೇಬಿಟ್ಟಿದೆ.
ಅಷ್ಟಕ್ಕೂ 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಶಿವಸೇನೆಯ ನಡುವೆ ಫೈಟಿಂಗ್ ಶುರುವಾಗಿತ್ತು. ಇದೇ ವೇಳೆ ಎರಡೂ ಪಕ್ಷಗಳ ಮಧ್ಯೆ ಮೈತ್ರಿ ಮುರಿದು ಬಿದ್ದು, ಎನ್ಸಿಪಿ ಮತ್ತು ಕಾಂಗ್ರೆಸ್ ಕಿಂಗ್ ಮೇಕರ್ಸ್ ಆಗಿದ್ದವು. ಫಲಿತಾಂಶ ಬಂದ ಬಳಿಕ ತತ್ವ ಸಿದ್ಧಾಂತ ಪಕ್ಕಕ್ಕಿಟ್ಟು ಉದ್ಧವ್ ಠಾಕ್ರೆ ಕಾಂಗ್ರೆಸ್ & ಎನ್ಸಿಪಿ ಜೊತೆ ಕೈಜೋಡಿಸಿದ್ದರು. ಹೀಗೆ ಸರ್ಕಾರ ರಚಿಸಿದ ನಂತರವೇ ಶುರುವಾಗಿದ್ದು ಅಸಲಿ ಆಟ. ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಣ ಹಾಗೂ ಏಕನಾಥ್ ಶಿಂಧೆ ಬಣದ ನಡುವೆ ಫೈಟ್ ಶುರುವಾಗಿ, ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದರು. ಇದಾದ ಬಳಿಕ ಎನ್ಸಿಪಿ ಕೂಡ ಪೀಸ್ ಪೀಸ್ ಆಗುವ ಲಕ್ಷಣ ಕಂಡುಬಂದಿದ್ದು, ಶಿವಸೇನೆ ರೀತಿ ಹರಿದು ಹಂಚಿಹೋಗುತ್ತಾ? ಎಂಬ ಭೀತಿ ಶರದ್ ಪವಾರ್ರನ್ನ ಕಾಡುತ್ತಿದೆ.

ಎನ್ಸಿಪಿ ಚಿಹ್ನೆ ಅಡಿಯಲ್ಲೇ ಸ್ಪರ್ಧೆ!
ಇಂದು ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಅಜಿತ್ ಬಾಂಬ್ ಸಿಡಿಸಿದ್ದಾರೆ. ಮುಂದಿನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎನ್ಸಿಪಿ ಚುನಾವಣೆ ಅಡಿಯಲ್ಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಅಜಿತ್ ತೊಡೆತಟ್ಟಿದ್ದಾರೆ. ಹಾಗಾದರೆ ಅಜಿತ್ ಪವಾರ್ ಜತೆ ಎನ್ಸಿಪಿ ಪಕ್ಷದಿಂದ ಎಷ್ಟು ಶಾಸಕರು ಬರಬಹುದು? ಮಹಾರಾಷ್ಟ್ರ ಚುನಾವಣೆ ವಿಪಕ್ಷಗಳಿಗೆ ಏಕೆ ಮುಖ್ಯ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಅಸಲಿ ಆಟ ಇನ್ನೂ ಬಾಕಿ ಇದೆಯಾ?
ಮಹಾರಾಷ್ಟ್ರದಲ್ಲಿ ಭಾನುವಾರ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇಂದು ಬೆಳಗ್ಗೆ ವಿಪಕ್ಷ ನಾಯಕನಾಗಿದ್ದ ಅಜಿತ್ ಪವಾರ್ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ & ಶಿವಸೇನೆ ಸರ್ಕಾರದ ಭಾಗವಾಗಿದ್ದಾರೆ. ಡಿಸಿಎಂ ಸ್ಥಾನಕ್ಕೂ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದರು. ಆದರೆ ಹೀಗೆ ಎನ್ಸಿಪಿ ಬಿಟ್ಟು ಹೋದ ಅಜಿತ್ ಹೊಸ ಬಾಂಬ್ ಸಿಡಿಸಿದ್ದಾರೆ, ಎನ್ಸಿಪಿಯ ಬಹುತೇಕ ಶಾಸಕರ ತಮ್ಮ ಜೊತೆ ಇರುವುದನ್ನ ಹೇಳಿದ್ದಾರೆ. ಹೀಗಾಗಿ ಠಾಕ್ರೆ ಬಣ ಮತ್ತು ಶಿಂಧೆ ಬಣದ ನಡುವೆ ಶಿವಸೇನೆ ಚಿಹ್ನೆಗಾಗಿ ನಡೆದಿದ್ದ ಪೈಪೋಟಿ, ಎನ್ಸಿಪಿ ಒಳಗೂ ನಡೆಯುತ್ತಾ? ಹಾಗೇ ಎನ್ಸಿಪಿ ಮೇಲೆ ಅಜಿತ್ ಸಂಪೂರ್ಣ ಅಧಿಕಾರ ಹೊಂದಲಿದ್ದಾರಾ? ಅನ್ನೋ ಡೌಟ್ ಕೂಡ ಭುಗಿಲೆದ್ದಿದೆ.

ಎಷ್ಟು ಶಾಸಕರು ಎನ್ಸಿಪಿ ಬಿಡಲಿದ್ದಾರೆ?
40 ಶಾಸಕರು ಎನ್ಸಿಪಿಗೆ ಗುಡ್ಬೈ ಹೇಳಿದ್ದಾರೆಂಬ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರ ಮಾತು ಈಗ ಸಾಕಷ್ಟು ಕುತೂಹಲ ಕೆರಳಿಸಿದೆ. ಏಕೆಂದರೆ ಮಹಾರಾಷ್ಟ್ರದ 40 ಎನ್ಸಿಪಿ ಶಾಸಕರು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರಂತೆ. ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷರಾದ ಚಂದ್ರಶೇಖರ್ ಬವಾಂಕುಲೆ ಈ ಮಾತನ್ನ ಸ್ಪಷ್ಟಪಡಿಸಿದ್ದಾರೆ. ಅಜಿತ್ ಜೊತೆ ಶರದ್ ಪವಾರ್ ಬಣದ ಒಟ್ಟು 8 ಶಾಸಕರು ಶಿವಸೇನಾ & ಬಿಜೆಪಿ ನೇತೃತ್ವದ ಸರ್ಕಾರದ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ನಡುವೆ ಈ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಇದು ನಿಜವಾದರೆ ಮುಂದೆ ಪರಿಸ್ಥಿತಿ ಏನಾಗಬಹುದು?
ಚಿಕ್ಕಪ್ಪ VS ಮಗ!
ಅಕಸ್ಮಾತ್ ಇದು ನಡೆದಿದ್ದೇ ಆದರೆ ಆಗ ಎನ್ಸಿಪಿ ಮೇಲಿನ ಸಂಪೂರ್ಣ ಅಧಿಕಾರ ಅಜಿತ್ ಕೈಗೆ ಸಿಗುವುದು ಪಕ್ಕಾ. ಆಗ ಶರದ್ ಪವಾರ್ ಕೂಡ ಸಂಕಷ್ಟಕ್ಕೆ ಸಿಲುಕಲಿದ್ದು, ಎನ್ಸಿಪಿ ಪಕ್ಷದಲ್ಲಿ ಈಗ 53 ಶಾಸಕರಿದ್ದಾರೆ. ಈ ಪೈಕಿ 40 ಜನರು ಪಕ್ಷಾಂತರ ಮಾಡಿದರೆ ಸಂಕಷ್ಟ ಖಂಡಿತ. ಇನ್ನು ಅಜಿತ್ ಪವಾರ್ ಪಕ್ಷ ಬಿಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್ ಇದು ನನಗೆ ಹೊಸದಲ್ಲ ಎಂದಿದ್ದಾರೆ. ಜುಲೈ 6ಕ್ಕೆ ಪಕ್ಷದ ಸಭೆ ಕರೆಯಲಿದ್ದೇನೆ ಎಂದಿದ್ದಾರೆ ಶರದ್ ಪವಾರ್. ಇದರ ಜೊತೆಗೆ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಚಿಕ್ಕಪ್ಪ ಮತ್ತು ಮಗನ ನಡುವೆ ಹೊತ್ತಿರುವ ರಾಜಕೀಯ ಕಿಚ್ಚು, ಇನ್ನಷ್ಟು ಧಗಧಗಿಸುವ ಸೂಚನೆ ಸಿಕ್ಕಂತಾಗಿದೆ.
48 ಲೋಕಸಭೆ ಸ್ಥಾನಗಳ ಮೇಲೆ ಕಣ್ಣು
ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಒನ್ಲೈನ್ ಅಜೆಂಡಾ. ಮಹಾರಾಷ್ಟ್ರದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಪಕ್ಷವೇ ಆಗಲಿ ಒಬ್ಬರೇ ನಿಂತು ಹೋರಾಡುವುದು ಕಷ್ಟಕಷ್ಟ ಎನ್ನಬಹುದು.

ವಿಪಕ್ಷ ನಾಯಕರಲ್ಲಿ ಒದ್ದಾಟ ಶುರು
ಒಬ್ಬರೇ ಚುನಾವಣೆ ಎದುರಿಸಲು ಆಗದು ಎಂಬ ಕಾರಣಕ್ಕೆ ಬಿಜೆಪಿ ಪಕ್ಷ ಶಿವಸೇನೆ ಜೊತೆ ಮತ್ತು ಕಾಂಗ್ರೆಸ್ ನಾಯಕರು ಎನ್ಸಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೇ ಎನ್ಸಿಪಿ ಪೀಸ್ ಪೀಸ್ ಆಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಲೋಕಸಭೆ ಚುನಾವಣೆಗೆ ಮುನ್ನ ದೊಡ್ಡ ಹೊಡೆತವೂ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸಭೆ ನಡೆಸಿ, ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನ ಬಿಹಾರ ಸಿಎಂ ಮಾಡುತ್ತಿದ್ದರು. ಆದರೆ ಎನ್ಸಿಪಿ ಪಕ್ಷದ ಬೆಳವಣಿಗೆ ವಿರೋಧ ಪಕ್ಷಗಳ ಒಗ್ಗಟ್ಟಿಗೇ ಆಘಾತ ನೀಡಿದೆ. ಮುಂದೆ ಏನು ಮಾಡುವುದು? ಎಂಬ ಚಿಂತೆಯಲ್ಲಿ ವಿಪಕ್ಷಗಳು ಮುಳುಗುವಂತೆ ಮಾಡಿದೆ.
ಒಟ್ನಲ್ಲಿ 2 ವಾರದ ಹಿಂದಷ್ಟೇ ನಡೆದಿದ್ದ ವಿಪಕ್ಷ ನಾಯಕರ ಸಭೆ ವರ್ಕೌಟ್ ಆಗದೆ ಹೊಸ ಕಿಚ್ಚು ಹೊತ್ತಿಸಿದೆ. ಅದರಲ್ಲೂ ಮಹಾರಾಷ್ಟ್ರದಲ್ಲೇ ವಿಪಕ್ಷಗಳಿಗೆ ಶಾಕ್ ಸಿಕ್ಕಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟು ನಿರೀಕ್ಷೆಯಲ್ಲಿದ್ದ ವಿಪಕ್ಷಗಳಿಗೆ ಏನು ಮಾಡಬೇಕು ಅನ್ನೋದೆ ತಿಳಿಯದಂತಾಗಿದೆ. ಇನ್ನು ಎನ್ಸಿಪಿ ನಾಯಕರು ಕೂಡ ಈಗ ಶಾಕ್ಗೆ ಒಳಗಾಗಿದ್ದು, ಪಕ್ಷದ ಶಾಸಕಾಂಗ ಸಭೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ.












Click it and Unblock the Notifications