ಮೋದಿ ಕರೆಯಂತೆ ದೀಪ ಹಚ್ಚುವುದು ಮೂರ್ಖತನದ ಕೆಲಸ!
ನವದೆಹಲಿ, ಏಪ್ರಿಲ್ 03: ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲಿಸಲು ಏಪ್ರಿಲ್ 5ರಂದು ದೀಪ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿಗಳ ಕರೆ ಬಗ್ಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಮಹಾರಾಷ್ಟ್ರದ ವಸತಿ ಸಚಿವ, ಎನ್ಸಿಪಿ ನಾಯಕ ಜಿತೇಂದ್ರ ಅವಾದ್ ನರೇಂದ್ರ ಮೋದಿ ಕರೆಯನ್ನು ಟೀಕಿಸಿದ್ದಾರೆ. "ಪ್ರಧಾನಿಗಳು ಕರೆ ನೀಡಿದಂತೆ ನಾನು ಲೈಟ್ಗಳನ್ನು ಆಫ್ ಮಾಡಿ ದೀಪವನ್ನು ಹಚ್ಚುವುದಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
"ಪ್ರಧಾನಿಗಳು ಹೇಳಿದಂತೆ ವಿದ್ಯುತ್ ದೀಪಗಳನ್ನು ಆರಿಸಿ, ದೀಪ ಬೆಳಗಿಸುವುದು ಮೂರ್ಖತನದ ಕೆಲಸವಾಗಿದೆ. ನಾನಂತೂ ದೀಪವನ್ನು ಹಚ್ಚುವುದಿಲ್ಲ" ಎಂದು ಜಿತೇಂದ್ರ ಅವಾದ್ ಹೇಳಿಕೆ ಕೊಟ್ಟಿದ್ದಾರೆ.

ಎನ್ಸಿಪಿ ವಕ್ತಾರ ನವಾಬ್ ಮಲ್ಲಿಕ್ ಸಹ ಈ ಕುರಿತು ಹೇಳಿಕೆ ನೀಡಿದ್ದಾರೆ. "ಕೊರೊನಾ ವಿರುದ್ಧ ಹೋರಾಡಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಲಿದ್ದಾರೆ ಎಂದು ನಿರೀಕ್ಷಿಸಿದ್ದೆ. ಆದರೆ, ಪ್ರಧಾನಿಗಳು ದೀಪ ಬೆಳಗಿಸಲು ಕರೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಂದೇಶವನ್ನು ನೋಡಿದ ಮೇಲೆ ಜನರು ಅಸಹಾಯಕರಾಗಿದ್ದಾರೆ, ಅವರಿಗೆ ನಿರಾಸೆಯಾಗಿದೆ" ಎಂದು ನವಾಬ್ ಮಲ್ಲಿಕ್ ತಿಳಿಸಿದ್ದಾರೆ.
ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ನರೇಂದ್ರ ಮೋದಿ ಕರೆ ಬಗ್ಗೆ ವ್ಯಂಗ್ಯವಾಡಿದ್ದಾರೆ. "ದೀಪ ಹಚ್ಚುವುದರಿಂದ ಕಾಯಿಲೆ ವಾಸಿ ಆಗುತ್ತಾ?. ವಾಸಿ ಆಗುವುದಾದದರೆ ಹಚ್ಚಲಿ ಬಿಡಿ, ನಮ್ಮ ಅಭ್ಯಂತರವಿಲ್ಲ" ಎಂದು ಹೇಳಿದ್ದಾರೆ.











Click it and Unblock the Notifications