ನೌಕಾ ಸೇನೆ ಸೇರಿದ ಯುವತಿಯರು ಹೇಳಿದ್ದೇನು?
ಏಹ್ಜಿಮಾಲಾ(ಕೇರಳ), ಡಿ. 6: ಆ ಯುವತಿಯರಲ್ಲಿ ಹೊಸ ಉತ್ಸಾಹ, ಸಾಧಿಸಬೇಕೆಂಬ ಛಲ ಎದ್ದು ಕಾಣುತ್ತಿತ್ತು. ಎಟ್ಟಾಕುಲಮ್ ಸಮುದ್ರ ತೀರದಲ್ಲಿ ಹಮ್ಮಿಕೊಂಡಿದ್ದ ಭಾರತದ ವಾಯು ಸೇನೆಯ ಶಕ್ತಿ ಪ್ರದರ್ಶನ ಕಾರ್ಯಕ್ರಮದ ವೇಳೆ ಯುವತಿಯರು ಒನ್ ಇಂಡಿಯಾದೊಂದಿಗೆ ತಮ್ಮ ಆಸೆ, ಅನುಭವ, ಸೈನ್ಯ ಸೇರಿದ್ದು ಯಾಕೆ? ಮುಂದಿನ ಗುರಿಗಳೇನು ಎಂಬ ವಿಚಾರಗಳನ್ನು ಹಂಚಿಕೊಂಡರು.
ಶ್ವೇತ ವಸ್ತ್ರಧಾರಿಗಳಾಗಿ ಕಂಗೊಳಿಸುತ್ತಿದ್ದ ಯುವತಿಯರು ಅಧಿಕೃತವಾಗಿ ಸೇನೆ ಸೇರಲು ಇನ್ನು ಆರು ತಿಂಗಳ ತರಬೇತಿ ಮುಗಿಸಬೇಕಾಗಿದೆ. ದೆಹಲಿ, ಗುಜರಾತ್, ಮುಂಬೈ ನಲ್ಲಿ ವ್ಯಾಸಂಗ ಮಾಡಿದ ಹುಡಿಗಿಯರು ಇಂದು ದೇಶ ಕಾಯುವ ಯೋಧರಾಗಿ ನಿಂತಿದ್ದಾರೆ.

ತಂದೆಗೆ ಮಾತು ನೀಡಿದ್ದೇನೆ
ಬಿಕಾಂ ಮತ್ತು ಎಂಬಿಎ ಅಧ್ಯಯನ ಮಾಡಿರುವ ಅನುರಾಧಾ ಖಾಸ್ಸಾ ದೆಹಲಿಯವಳು. ನನ್ನ ತಂದೆಯ ಸೇನಾ ಸಮವಸ್ತ್ರವೇ ಸೇನೆ ಸೇರುವಂತೆ ನನ್ನ ಪ್ರೇರೇಪಿಸಿತು. ನನ್ನ ಸೇನಾ ಕ್ಯಾಪ್ ನೀಡುತ್ತೇನೆ ಎಂದು ಬಾಲಕಿಯಾಗಿದ್ದಾಗಲೇ ಪಣ ತೊಟ್ಟಿದ್ದೆ. ಅದು ಇಂದು ನೆರವೇರುತ್ತಿದೆ. ಯಾವುದೇ ಸವಾಲುಗಳು ಎದುರಾದರೂ ಎದುರಿಸಲು ಸಿದ್ಧ ಎಂದು ಖಾಸ್ಸಾ ಹೇಳುತ್ತಾರೆ.

ಯುದ್ಧ ವಿಮಾನದೊಂದಿಗೆ ಪ್ರೀತಿ ಹುಟ್ಟಿದ್ದು ಮೂರನೇ ಕ್ಲಾಸಲ್ಲಿ
ಹರ್ಯಾಣ ಮೂಲದ ಶಿಲ್ಪಾ ಮಲಿಕ್ ಓದಿದ್ದು ವಿಶಾಖಪಟ್ಟಣದಲ್ಲಿ. ನಾನು ಬೇರೆ ಬೇರೆ ಪ್ರದೇಶಗಳನ್ನು ಸುತ್ತಲು ಇಷ್ಟಪಡುತ್ತೇನೆ. ನಮ್ಮ ತಂದೆ ಭಾರತೀಯ ಸಮುದ್ರ ಕಾವಲು ಪಡೆಯ ನೌಕರರಾಗಿದ್ದರು. ಅವರಿಗೆ ವರ್ಗಾವಣೆಯಾದಂತೆ ನಾನು ದೇಶವನ್ನೆಲ್ಲ ಸುತ್ತಾಡಿದೆ. ಈಗ ಅಂಥದ್ದೆ ಕೆಲಸ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಶಿಲ್ಪಾ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ನಾನು ಮೂರನೇ ತರಗತಿಯಲ್ಲಿದ್ದಾಗ ತಂದೆ ಹೋವರ್ ಕ್ರಾಫ್ಟ್ ವೊಂದನ್ನು ಕೊಡುಗೆಯಾಗಿ ನೀಡಿದ್ದರು. ಅಲ್ಲಿಂದ ಅದರೊಂದಿಗೆ ಬೆಳೆದುಕೊಂಡು ಬಂದ ಸಂಬಂಧ ಸೈನ್ಯ ಸೇರುವಂತೆ ಮಾಡಿತು ಎನ್ನುತ್ತಾರೆ.

ಹುಟ್ಟಿನಿಂದಲೇ ಕನಸು ಕಟ್ಟಿಕೊಂಡಿದ್ದೆ
ದೆಹಲಿಯ ಇಪ್ ಶಿತಾ ಗುಪ್ತಾ ಹುಟ್ಟಿನಿಂದಲೇ ಸೇನೆಯಲ್ಲಿ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡವಳು. ನಾನು ಮಿಲಿಟರಿ ಆಸ್ಪತ್ರೆಯಲ್ಲೇ ಜನ್ಮತಾಳಿದವಳು, ಅಲ್ಲಿಂದಲೇ ದೇಶ ಸೇವೆ ಕನಸು ಹುಟ್ಟಿಕೊಂಡಿತು. ಈ ಸ್ಥಾನಕ್ಕೆ ತಲುಪಲು ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಎಂಎಸ್ಸಿ ವ್ಯಾಸಂಗ ಮಾಡಿರುವ ಗುಪ್ತಾ ಹೇಳುತ್ತಾರೆ.
ತರಬೇತಿ ಕಷ್ಟವಾಗಿತ್ತು, ಮುಂದಿನ ಹಾದಿ ಇನ್ನಷ್ಟು ಕಠಿಣವಾಗಿರಬಹುದು. ಆದರೆ ಇದನ್ನೇ ನಾನು ಪ್ರೀತಿಸುತ್ತಿದ್ದೇನೆ ಎಂದು ದೇಶ ಸೇವೆಯ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸವಾಲುಗಳಲ್ಲೇ ಜೀವನದ ನಿಜವಾದ ಸ್ವಾದ ಅಡಗಿದೆ
ಸವಾಲುಗಳಲ್ಲೇ ಜೀವನದ ನಿಜವಾದ ಸ್ವಾದ ಅಡಗಿದೆ ಎಂಬುದು ನಾಗಪುರದ ದೇವಯಾನಿಯ ಅಭಿಪ್ರಾಯ. ನನ್ನ ತಂದೆ ಒಬ್ಬ ಭೂ ಗರ್ಭ ಶಾಸ್ತ್ರಜ್ಞರು. ಸೈನ್ಯ ಸೇರಲು ಲಿಂಗ ತಾರತಮ್ಯವಿಲ್ಲ. ಯಾರು ಬೇಕಾದರೂ ಸೈನ್ಯ ಸೇರಬಹುದು ಪುರುಷರಿಗೆ ಮತ್ತು ಮಹಿಳೆಯರಿಗೆ ಎಂದು ಪ್ರತ್ಯೇಕ ತರಬೇತಿಗಳಿರುವುದಿಲ್ಲ.
ಕೆಲವೊಂದು ಸಂಗತಿಗಳು ಕಷ್ಟ ಎಂದೇನಿಸಿದರೂ ಮಾಡಬೇಕಾಗುತ್ತದೆ. ದೇಶದ ಭದ್ರತೆಗೆ ಕೊಡುಗೆ ನೀಡಲು ನಾವೆಲ್ಲ ಸ್ನೇಹಿತರು ಒಂದಾಗಿರುವುದು ಖುಷಿ ತಂದಿದೆ. ನನ್ನ ಹವ್ಯಾಸಗಳೇ ಸೈನ್ಯ ಸೇರುವಂತೆ ಮಾಡಿತು ಎಂದು ದೇವಯಾನಿ ಹೇಳುತ್ತಾರೆ.













Click it and Unblock the Notifications