3 ನಿಮಿಷಕ್ಕಾಗಿ 25 ದಿನ ಹಾಳು ಮಾಡಿದ ಕಾಂಗ್ರೆಸ್: GST ಬಿಲ್ ಕಥೆ?
ಅಸಹಿಷ್ಣುತೆ, ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ಸಂಸತ್ತಿನ ಎರಡೂ ಸದನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು, ಇನ್ನುಳಿದ ಚಳಿಗಾಲದ ಅಧಿವೇಶನದ ಮೂರು ದಿನದಲ್ಲಾದರೂ ಕಲಾಪ ಸುಗುಮವಾಗಿ ನಡೆಯಲು ಅವಕಾಶ ನೀಡುತ್ತದೆಯೇ?
ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಸಾರ್ವಜನಿಕರಿಗೆ ಸಂಬಂಧವೇ ಇಲ್ಲದ ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಸದನದೊಳಗೆ ರಂಪ ರಾಮಾಯಣ ಮಾಡಿದ್ದ ಕಾಂಗ್ರೆಸ್ ಶನಿವಾರದ (ಡಿ 19) ಕೋರ್ಟ್ ನಿರ್ಧಾರದಿಂದ ಶಾಂತವಾಗುವ ಲಕ್ಷಣಗಳು ಕಾಣಿಸುತ್ತಿವೆ. (ನ್ಯಾಷನಲ್ ಹೆರಾಲ್ಡ್: ಮೂರೇ ನಿಮಿಷದಲ್ಲಿ ಜಾಮೀನು)
ಕೇವಲ 3ನಿಮಿಷದಲ್ಲಿ ಮುಗಿದಿದ್ದ ನ್ಯಾಷನಲ್ ಹೆರಾಲ್ಡ್ ಕೇಸಿನ ಕೋರ್ಟ್ ಪ್ರಕ್ರಿಯೆಯಲ್ಲಿ ಸೋನಿಯಾ, ರಾಹುಲ್ ಗಾಂಧಿ ಮತ್ತು ಇತರರಿಗೆ ಪಟಿಯಾಲ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಜಂಟಲ್ ಮ್ಯಾನ್ ಜಡ್ಜ್ ಎಂದೇ ಹೆಸರಾಗಿರುವ ಲವ್ ಲೀನ್, ಐವತ್ತು ಸಾವಿರ ವೈಯಕ್ತಿಕ ಬಾಂಡಿನ ಷರತ್ತಿನ ಮೂಲಕ ಫೆ 20ಕ್ಕೆ ವಿಚಾರಣೆ ಮುಂದೂಡಿದ್ದರು. ಜೊತೆಗೆ, ಸುಬ್ರಮಣಿಯನ್ ಸ್ವಾಮಿಯವರ ಕೇಸಿನ ಆರೋಪಿಗಳನ್ನು ವಿದೇಶಕ್ಕೆ ಹೋಗಲು ಅನುಮತಿ ನೀಡಬಾರದು ಎನ್ನುವ ಮನವಿಗೆ ಜಡ್ಜ್ ಲವ್ ಲೀನ್ 'ನೋ' ಎಂದಿದ್ದರು.
ಸಂಸತ್ತಿನ ಒಂದು ದಿನದ ಅಧಿವೇಶನಕ್ಕೆ ಅಂದಾಜು ಆರು ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಕೇವಲ 3ನಿಮಿಷದ ಕೋರ್ಟ್ ಪ್ರಕ್ರಿಯೆಗಾಗಿ 25 ದಿನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಬೇಕಾಗಿತ್ತೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿರುವ ಮಾತು. (ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್)
ನವೆಂಬರ್ 19 ರಿಂದ ಆರಂಭವಾಗಿದ್ದ ಚಳಿಗಾಲದ ಅಧಿವೇಶನ ಡಿಸೆಂಬರ್ 23ರಂದು ಮುಕ್ತಾಯಗೊಳ್ಳಲಿದೆ. ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಏನಾಯಿತು, ಮುಂದೆ ಓದಿ..

ಹಮೀದ್ ಅನ್ಸಾರಿ
ಶುಕ್ರವಾರ (ಡಿ 18) ರಾಜ್ಯಸಭೆಯ ಸಭಾಪತಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ. ಮೋದಿ ಸರಕಾರದ ಆರು ಮಸೂದೆ ಅನುಮೋದನೆಗೆ ಸರ್ವಪಕ್ಷಗಳು ಸಮ್ಮತಿ ಸೂಚಿಸಿದ್ದವು. ಆದರೆ ಜಿಎಸ್ಟಿ ಹೊರತಾಗಿ..

ಸರಕು ಮತ್ತು ಸೇವಾ ತೆರಿಗೆ
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆಗೆ ಅನ್ಸಾರಿ ನೇತೃತ್ವದ ಸರ್ವಪಕ್ಷದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸದೇ ಇರುವುದರಿಂದ ಈ ಮಸೂದೆಗೆ ಇನ್ನುಳಿದಿರುವ ಮೂರು ದಿನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ತೀರಾ ಕಮ್ಮಿ.

ಏಪ್ರಿಲ್ 2016ರಿಂದ ಜಿಎಸ್ಟಿ ಜಾರಿಗೆ ಮೋದಿ ಚಿಂತಿಸಿದ್ದರು
ಬರುವ ಏಪ್ರಿಲ್ 2016ರಿಂದ ಜಿಎಸ್ಟಿ ಮಸೂದೆಯನ್ನು ಜಾರಿಗೆ ತರಲು ಮೋದಿ ಸರಕಾರ ಉದ್ದೇಶಿಸಿತ್ತು. ಈ ಅಧಿವೇಶನದಲ್ಲಿ ಮಸೂದೆಗೆ ಅನುಮತಿ ಸಿಕ್ಕರೆ ಮಾತ್ರ ಏಪ್ರಿಲ್ ನಿಂದ ಈ ಮಸೂದೆ ಜಾರಿಗೆ ತರಲು ಸಾಧ್ಯವಾಗುವುದರಿಂದ ಕೇಂದ್ರ ಸರಕಾರದ ಶತಪ್ರಯತ್ನಕ್ಕೆ ಹಿನ್ನಡೆಯಾಗುವ ಲಕ್ಷಣಗಳೇ ಹೆಚ್ಚು.

ಅನುಮೋದನೆ ಸಿಗುವ ಮಸೂದೆಗೆಳು (ಸಾಧ್ಯತೆ)
ಇನ್ನುಳಿದ ಮೂರು ದಿನಗಳಲ್ಲಿ ಪರಮಾಣು ತಿದ್ದುಪಡಿ ಮಸೂದೆ, ವಾಣಿಜ್ಯ ನ್ಯಾಯಾಲಯ ಮಸೂದೆ, ಅಪಹರಣ ತಡೆ, ಪರಿಶಿಷ್ಟ ಜಾತಿ, ಪಂಗಡ ಕಾಯ್ದೆ ತಿದ್ದುಪಡಿ ಮಸೂದೆ ಸೇರಿದಂತೆ ಆರು ಮಸೂದೆಗಳು ಈ ಅಧಿವೇಶನದಲ್ಲಿ ಪಾಸ್ ಆಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಸಹಕಾರ ನೀಡಬಹುದು
ಅಸಹಿಷ್ಣುತೆ, ಪಂಜಾಬ್ ಗಲಭೆ, ಅರುಣಾಚಲ ಪ್ರದೇಶ ಕಾಂಗ್ರೆಸ್ ಸಂಘರ್ಷ ಸೇರಿದಂತೆ ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿದಂತೆ ಕಲಾಪಕ್ಕೆ ಭಂಗ ತರುತ್ತಲೇ ಇದ್ದ ಕಾಂಗ್ರೆಸ್ ಪಕ್ಷದ ಟಾಪ್ ಟು ನಾಯಕರಿಗೆ ಬೇಲ್ ಸಿಕ್ಕಿದ ಮೇಲೆ ಸದನ ಸುಗಮವಾಗಿ ಸಾಗಲು ಕಾಂಗ್ರೆಸ್ ಅನುವು ಮಾಡಿಕೊಡುವ ಸಾಧ್ಯತೆ ಇಲ್ಲದಿಲ್ಲ.












Click it and Unblock the Notifications