100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ; ಮೋದಿ
ನವದೆಹಲಿ, ಫೆಬ್ರವರಿ 07; "ಹಲವಾರು ರಾಜ್ಯಗಳಲ್ಲಿ ಸೋತ ಬಳಿಕವೂ ನಿಮ್ಮ ಅಹಂಕಾರ ಕಡಿಮೆಯಾಗಿಲ್ಲ. ಇನ್ನು 100 ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾನಸಿಕವಾಗಿ ಸಿದ್ಧವಾಗಿದ್ದೀರಿ" ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ನರೇಂದ್ರ ಮೋದಿ ಉತ್ತರ ನೀಡಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡ ಅವರು ಕಟು ಶಬ್ದಗಳಿಂದ ಪ್ರತಿಪಕ್ಷವನ್ನು ಟೀಕಿಸಿದರು.
"ಪ್ರತಿಪಕ್ಷಗಳು ಹಣದುಬ್ಬರದ ವಿಚಾರ ಪ್ರಸ್ತಾಪಿಸಿವೆ. ಆದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಈ ವಿಚಾರ ಪ್ರಸ್ತಾಪಿಸಿದ್ದರೆ ಚೆನ್ನಾಗಿತ್ತು. ಕೋವಿಡ್ ಸಮಯದಲ್ಲಿ ನಾವು ಹಣದುಬ್ಬರ ಕಡಿಮೆ ಮಾಡಲು ಪ್ರಯತ್ನ ನಡೆಸಿದ್ದೇವೆ" ಎಂದು ಮೋದಿ ಹೇಳಿದರು.

"ಕೋವಿಡ್ ಪರಿಸ್ಥಿತಿ ಸಮಯದಲ್ಲಿ ಸರ್ಕಾರ ಹಣದುಬ್ಬರ ನಿಭಾಯಿಸಿದೆ. ಪ್ರತಿಪಕ್ಷಗಳು ಆಗ ರಾಜಕೀಯ ಮಾಡಿದವು. 2014 ರಿಂದ 2020ರ ತನಕ ಹಣದುಬ್ಬರ ದರ ಶೇ 5ಕ್ಕಿಂತ ಕಡಿಮೆ ಇತ್ತು" ಎಂದು ಮೋದಿ ಹೇಳಿದರು.
"ಕಾಂಗ್ರೆಸ್ನ ಪಿ. ಚಿದಂಬರಂ ಪತ್ರಿಕೆಗಳಿಗೆ ಆರ್ಥಿಕತೆ ಬಗ್ಗೆ ಲೇಖನ ಬರೆಯುತ್ತಾರೆ. ಆದರೆ 2012ರಲ್ಲಿ ಅವರು ಏನು ಹೇಳಿದ್ದರು?. ಕೊರಿಯಾ ಯುದ್ಧವು ಹಣದುಬ್ಬರಕ್ಕೆ ಕಾರಣವಾಯಿತು ಎಂದು ನೆಹರೂ ಹೇಳಿದ್ದರು" ಎಂದು ಮೋದಿ ಟೀಕಿಸಿದರು.
"ಗರೀಬಿ ಹಟಾವೋ ಎಂಬ ಘೋಷಣೆ ಮೂಲಕ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಚುನಾವಣೆ ಗೆದ್ದಿತ್ತು. ಆದರೆ ಅದನ್ನು ಜಾರಿಗೆ ತರಲು ಮರೆತು ಹೋಯಿತು. ಆದ್ದರಿಂದ ಜನರು ಪಕ್ಷದ ವಿರುದ್ಧ ಮತ ಹಾಕಿದರು" ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ಉತ್ತರ ಪ್ರದೇಶ, ಕರ್ನಾಟಕ, ಬಿಹಾರ, ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ. ಹಲವು ರಾಜ್ಯಗಳ ಚುನಾವಣೆ ಸೋತರು ನಿಮ್ಮ (ಕಾಂಗ್ರೆಸ್) ಅಹಂಕಾರ ಕಡಿಮೆಯಾಗಿಲ್ಲ" ಎಂದರು.
"ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿಯ ಸ್ವದೇಶಿ ಕನಸಿಗೆ ಅಡ್ಡಿಯಾಗಿದೆ. ಆತ್ಮ ನಿರ್ಭರ ಭಾರತದ ಕನಸಿಗೆ ಕಾಂಗ್ರೆಸ್ ವಿರುದ್ಧವಾಗಿದೆ. ಕೆಲವರಿಗೆ ಮೇಕ್ ಇನ್ ಇಂಡಿಯಾ ಎಂದರೆ ಆಗುವುದಿಲ್ಲ. ಏಕೆಂದರೆ ಅದರಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಹಣ ಸಂಗ್ರಹ ಮಾಡಲು ಆಗುವುದಿಲ್ಲ" ಎಂದು ಮೋದಿ ಹೇಳಿದರು.
"ನಾವು ಸ್ವಾತಂತ್ರ್ಯದ ಭಾರತದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರನ್ನೂ ನಾವು ಸ್ಮರಿಸಬೇಕು. ಎರಡು ವರ್ಷಗಳಲ್ಲಿ ನಾವು ಮಹಾಮಾರಿಯನ್ನು ಎದುರಿಸಿದ್ದೇವೆ. ಕೋವಿಡ್ ಕಾಲದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡಿದೆ" ಎಂದರು.
"ದೇಶದಲ್ಲಿ ಬಡವರು ಸಂತವಾಗಿದ್ದಾರೆ. ಈ ಸಂತಸ ದೇಶದ ಶಕ್ತಿಯನ್ನು ಹೆಚ್ಚಿಸಿದೆ. ಬಡವರು ಬ್ಯಾಂಕ್ ಖಾತೆ ತೆರೆಯುವಂತೆ ಆಗಿದೆ. ಬಡವರ ಮನೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನಮ್ಮ ಸಣ್ಣ ರೈತರನ್ನು ನಾವು ಬಲಪಡಿಸಬೇಕು. ನಮ್ಮ ಗಮನ ಅತ್ತ ಇದೆ. ಸಣ್ಣ ರೈತರ ನೋವು ಗೊತ್ತಿಲ್ಲದವರು ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ" ಎಂದು ಮೋದಿ ಕುಟುಕಿದರು.
"ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿತು. ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮುಂಬೈನಿಂದ ಊರುಗಳಿಗೆ ಹೋಗಲು ಉಚಿತ ರೈಲು ಟಿಕೆಟ್ ನೀಡಿತು. ಅದೇ ಸಮಯದಲ್ಲಿ ದೆಹಲಿ ಸರ್ಕಾರ ವಲಸೆ ಕಾರ್ಮಿಕರು ನಗರ ತೊರೆಯುವಂತೆ ಹೇಳಿತು, ಇದರಿಂದಾಗಿ ಉತ್ತರ ಪ್ರದೇಶ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಕೋವಿಡ್ ವೇಗವಾಗಿ ಹಬ್ಬಿತು" ಎಂದು ಮೋದಿ ಆರೋಪಿಸಿದರು.
"ದೇಶದ ಬಡ ಜನರಿಗೆ ಗ್ಯಾಸ್ ಸೌಲಭ್ಯ ಸಿಗುತ್ತಿದೆ. ಮನೆ, ಶೌಚಾಲಯಗಳನ್ನು ಪಡೆಯುತ್ತಿದ್ದಾರೆ. ಅವರದ್ದೇ ಆದ ಬ್ಯಾಂಕ್ ಖಾತೆ ಹೊಂದಿದ್ದಾರೆ. 2014ರ ಬಳಿಕ ಯೋಜನೆಗಳು ಜನರ ಬಳಿಗೆ ತಲುಪುತ್ತಿವೆ" ಎಂದು ಮೋದಿ ಹೇಳಿದರು.
"ನೀವು (ಕಾಂಗ್ರೆಸ್) ನನ್ನನ್ನು ವಿರೋಧಿಸಬಹುದು. ಯೋಜನೆಗಳನ್ನು ವಿರೋಧಿಸಿದರೆ ಜನರು ಪಾಠ ಕಲಿಸುತ್ತಾರೆ. ಹಲವು ರಾಜ್ಯಗಳಲ್ಲಿ ನೀವು ಸೋತಿರುವುದು ಇದಕ್ಕೆ ಸಾಕ್ಷಿ" ಎಂದರು.












Click it and Unblock the Notifications