ನೇತಾಜಿ ಕಣ್ಮರೆ ಕಡತ ಮೇ 17 ರಂದು ಬಹಿರಂಗ?
ನವದೆಹಲಿ, ಏ. 21: ದೇಶದ ಇತಿಹಾಸದೊಳಗೆ ಹುದುಗಿಹೋಗಿರುವ ರಹಸ್ಯವೊಂದು ಮೇ 17 ರಂದು ತೆರೆದುಕೊಳ್ಳುವ ಸಾಧ್ಯತೆಯಿದೆ. ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕಣ್ಮರೆ ರಹಸ್ಯ ಕುರಿತಾದ ಕಡತಗಳು ಅಂದು ಬಹಿರಂಗವಾಗಬಹುದು.
ಪ್ರಧಾನಿ ನರೇಂದ್ರ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರಿಗೆ ದೆಹಲಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಮೇ 17 ರಂದು ನೇತಾಜಿ ಕುಟುಂಬ ಆಗಮಿಸಲಿದ್ದು ಅಂದೇ ನೇತಾಜಿ ಕಣ್ಮರೆ ಸಂಬಂಧಿತ ಕಡತಗಳು ಬಹಿರಂಗವಾಗುವ ಸಾಧ್ಯತೆಯಿದೆ.[ನೇತಾಜಿ ಕಣ್ಮರೆ ಕಡತ ತನಿಖೆಗೆ ಸಮಿತಿ]
ಪ್ರಧಾನಿ ಮೋದಿ ಕಳೆದ ವಾರ ಜರ್ಮನಿಯ ಪ್ರವಾಸದಲ್ಲಿದ್ದಾಗ ನೇತಾಜಿಯವರ ಮೊಮ್ಮಗ ಸೂರ್ಯ ಬೋಸ್ ಮೋದಿ ಅವರನ್ನು ಭೇಟಿಯಾಗಿ ಕಡತ ಬಹಿರಂಗ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಮೋದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ನೆಹರು ಕುಟುಂಬ ನೇತಾಜಿ ಫ್ಯಾಮಿಲಿ ಬಗ್ಗೆ ಗುಪ್ತಚರದಳದ ಮುಖಾಂತರ ನಿರಂತರ 20 ವರ್ಷ ಮಾಹಿತಿ ಕಲೆ ಹಾಕಿತ್ತು ಎಂಬ ಸಂಗತಿಯೂ ವಿವಾದ ಎಬ್ಬಿಸಿತ್ತು.[ನೇತಾಜಿ ಮೇಲೆ ಸ್ಪೈ, ನೆಹರೂ ಜನ್ಮ ಜಾಲಾಡಿದ ಟ್ವಿಟ್ಟರಿಗರು]
ನೇತಾಜಿ ಕಣ್ಮರೆ ಕಡತಕ್ಕೆ ಸಂಬಂಧಿಸಿ ಪ್ರಧಾನಿ ಸಚಿವಾಲಯಕ್ಕೆ ಮಾಹಿತಿ ಹಕ್ಕು ಅಡಿಯಲ್ಲಿ ಸುಮಾರು 39 ಕ್ಕೂ ಅಧಿಕ ಅರ್ಜಿಗಳು ದಾಖಲಾಗಿವೆ. ನೇತಾಜಿಗೆ ಸಂಬಂಧಿಸಿದ ಮಾಹಿತಿ ಬಹಿರಂಗ ಮಾಡಿದರೆ ಅದು ವಿದೇಶಿ ಬಾಂಧವ್ಯಕ್ಕೆ ಅಡ್ಡಿ ಮಾಡಬಹುದು ಎಂಬ ಸಂಗತಿಯನ್ನು ಕಳೆದ ಡಿಸೆಂಬರ್ ನಲ್ಲಿ ಗೃಹ ಸಚಿವಾಲಯ ಹೇಳಿತ್ತು.['ನೇತಾಜಿ ಬೋಸ್ ಸಾವು ಅಪಘಾತವಲ್ಲ, ಸಹಜ']
ಕಡತ ಬಹಿರಂಗಕ್ಕೆ ಸಂಬಂಧಿಸಿದ ಅಂತಿಮ ಅಧಿಕಾರ ಪ್ರಧಾನಿ ಬಳಿಯಲ್ಲಿದ್ದು ಮೇ 17ರ ಬಗ್ಗೆ ಇಡೀ ದೇಶವೇ ಚರ್ಚೆ ನಡೆಸುವಂತಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಕಡತ ಬಹಿರಂಗ ಸಂಬಂಧ ಸಮಿತಿಯೊಂದನ್ನು ನೇಮಕ ಮಾಡಲು ಆದೇಶ ನೀಡಿತ್ತು.