ನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ
ನವದೆಹಲಿ, ಜನವರಿ 01: ಮೋದಿ ಸುದ್ದಿಗೋಷ್ಠಿಗಳಿಗೆ ಹೆದರುತ್ತಾರೆ ಎಂಬ ಮನಮೋಹನ್ ಸಿಂಗ್ ಟೀಕೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಎನ್ಐ ಸುದ್ದಿಸಂಸ್ಥೆಗೆ ವೈಯಕ್ತಿಕ ಸಂದರ್ಶನ ನೀಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರಿಗೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೋದಿ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
2019 ರ ಚುನಾವಣೆ ಮೋದಿ ಹಾಗೂ ಎದುರಾಳಿಗಳ ನಡುವೆ ಅಲ್ಲ. ಜನರು ಹಾಗೂ ಮಹಾಘಟಬಂಧನ್ ನಡುವೆ ನಡೆಯುತ್ತದೆ. ಮೋದಿ, ಜನರ ಪ್ರೀತಿ, ನಂಬಿಕೆಗಳ ಪ್ರತಿರೂಪವಷ್ಟೆ ಎಂದು ಮೋದಿ ಅವರು 2019 ರ ಚುನಾವಣೆ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಮಮಂದಿರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋದಿ, ರಾಮಮಂದಿರ ಕುರಿತ ಯಾವುದೇ ಸುಗ್ರೀವಾಜ್ಞೆ ತೆಗೆದುಕೊಂಡರೂ ಸಹ ಅದು ಕಾನೂನು ಪ್ರಕ್ರಿಯೆ ಪೂರ್ಣವಾದ ಬಳಿಕವಷ್ಟೆ ಚಾಲ್ತಿಗೆ ಬರುತ್ತದೆ ಎಂದಿದ್ದಾರೆ. ಆ ಮೂಲಕ ಬಿಜೆಪಿಯು ಸಹ ರಾಮಮಂದಿರಕ್ಕೆ ಕೋರ್ಟ್ ತೀರ್ಪಿಗೆ ಕಾಯುತ್ತಿದೆ ಎಂದು ಸೂಚ್ಯಗೊಳಿಸಿದ್ದಾರೆ.

'ಉರ್ಜಿತ್ ಪಟೇಲ್ ಮೇಲೆ ಒತ್ತಡ ಇರಲಿಲ್ಲ'
ಆರ್ಬಿಐ ಗೌರ್ನರ್ ಉರ್ಜಿತ್ ಪಟೇಲ್ ಅವರ ಹಠಾತ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಉರ್ಜಿತ್ ಪಟೇಲ್ ಅವರು, 6-7 ತಿಂಗಳಿನಿಂದಲೂ ರಾಜೀನಾಮೆ ನೀಡಲು ಪ್ರಯತ್ನಿಸಿದ್ದರು, ನನ್ನ ಬಳಿ ಮನವಿ ಮಾಡಿದ್ದರು. ವೈಯಕ್ತಿಕ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ ಅದು ಬರವಣಿಗೆಯಲ್ಲಿ ಇದೆ. ಅವರ ಮೇಲೆ ಯಾವುದೇ ರಾಜಕೀಯ ಪ್ರಭಾವ ಇರಲಿಲ್ಲ. ಅವರೊಬ್ಬ ಉತ್ತಮ ಆರ್ಬಿಐ ಗೌರ್ನರ್ ಆಗಿದ್ದರು ಎಂದಿದ್ದಾರೆ ಮೋದಿ.

'ಅಪನಗದೀಕರಣ ಹಠಾತ್ ಅಲ್ಲ'
ಅಪನಗದೀಕರಣ ಹಠಾತ್ತಾಗಿ ಜನರ ಮೇಲೆ ಹೇರಿದ್ದಲ್ಲ ಎಂದು ಮೋದಿ ಸಮರ್ಥಿಸಿಕೊಂಡಿದ್ದಾರೆ. 'ನಾವು ಒಂದು ವರ್ಷಕ್ಕೆ ಮುಂಚೆಯೇ ಕಪ್ಪು ಹಣವನ್ನು ಬ್ಯಾಂಕ್ಗೆ ಕಟ್ಟುವಂತೆ ಎಚ್ಚರಿಕೆ ನೀಡಿದ್ದೆವು ಎಂದು ಹೇಳಿದ್ದಾರೆ.

'ಜಾಮೀನಿನ ಮೇಲಿದೆ ಕಾಂಗ್ರೆಸ್ ಕುಟುಂಬ'
ಚುನಾವಣಾ ಎದುರಾಳಿ ಕಾಂಗ್ರೆಸ್ ಬಗ್ಗೆ ಹರಿಹಾಯ್ದಿರುವ ಅವರು, 'ಗೌರವಯುತ ಕುಟುಂಬ ಕರೆಸಿಕೊಳ್ಳುವ, ನಾಲ್ಕು ತಲೆಮಾರು ದೇಶವನ್ನು ಆಳಿರುವ ಕುಟುಂಬದವರು ಈಗ ಜಾಮೀನ ಮೇಲೆ ಹೊರಗಿದ್ದಾರೆ. ಅವರ ಅಡಿಯಾಳಾಗಿರುವ ಕೆಲವರು ಅವರ ಪರವಾಗಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

'ಒಂದು ಯುದ್ಧದಿಂದ ಪಾಕ್ ಬುದ್ದಿ ಕಲಿಯದು'
ಸರ್ಜಿಕಲ್ ಸ್ಟ್ರೈಕ್ ದಾಳಿ ಬಳಿಕವೂ ಪಾಕಿಸ್ತಾನದ ಕಡೆಯಿಂದ ದಾಳಿಗಳು ನಿಂತಿಲ್ಲವಲ್ಲ ಎಂಬ ಸಂದರ್ಶಕಿ ಪ್ರಶ್ನೆಗೆ ಉತ್ತರಿಸಿರುವ ಮೋದಿ, ಕೇವಲ ಒಂದು ಯುದ್ಧದಿಂದ ಪಾಕಿಸ್ತಾನ ಬುದ್ಧಿ ಕಲಿತು ಬಿಡುತ್ತದೆ ಎಂಬುದು ಸುಳ್ಳು. ಪಾಕಿಸ್ತಾನಕ್ಕೆ ಬುದ್ಧಿ ಬರಬೇಕೆಂದರೆ ಇನ್ನೂ ಸಾಕಷ್ಟು ಸಮಯ ಬೇಕು ಎಂದು ಉತ್ತರಿಸಿದ್ದಾರೆ.

'ಐದಲ್ಲ ಮೂರು ರಾಜ್ಯದಲ್ಲಿ ಸೋತಿದ್ದೇವೆ ಅಷ್ಟೆ'
ಪಂಚ ರಾಜ್ಯದಲ್ಲಿನ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಜನ ಬಿಜೆಪಿಗೆ ಅವಕಾಶ ಕೊಟ್ಟಿಲ್ಲ. ಛತ್ತೀಸ್ಘಡದಲ್ಲಿ ಬಿಜೆಪಿಗೆ ಸ್ಪಷ್ಟ ಸೋಲಾಗಿರುವುದು ನಿಜ ಆದರೆ ಇನ್ನೆರಡು ರಾಜ್ಯಗಳಲ್ಲಿ ಅತಂತ್ರ ಸರ್ಕಾರ ಇದೆ. 15 ವರ್ಷದಿಂದ ಆಡಳಿತ ನಡೆಸಿದ್ದ ಕಾರಣ ಆಡಳಿತ ವಿರೋಧಿ ಅಲೆಯ ವಿರುದ್ಧ ನಮ್ಮ ಜನ ಹೋರಾಡಿದರು ಆದರೆ ಗೆಲುವು ಸಾಧ್ಯವಾಗಲಿಲ್ಲ ಎಂದು ಮೋದಿ ಅವರು ಪಂಚ ರಾಜ್ಯ ಚುನಾವಣೆಯನ್ನು ವಿಶ್ಲೇಷಿಸಿದ್ದಾರೆ.

'ಕಾಂಗ್ರೆಸ್ ಮುಕ್ತ ಭಾರತ' ಹೇಳಿಕೆ ಸಮರ್ಥನೆ
ತಮ್ಮ 'ಕಾಂಗ್ರೆಸ್ ಮುಕ್ತ ಭಾರತ' ಕಲ್ಪನೆಯ ಬಗ್ಗೆ ಮಾತನಾಡಿದ ಮೋದಿ, 'ಕಾಂಗ್ರೆಸ್ನವರೇ ಹೇಳುತ್ತಾರೆ, ಕಾಂಗ್ರೆಸ್ ಒಂದು ಯೋಚನೆ, ಅದೊಂದು ಸಂಸ್ಕೃತಿ ಎಂದು. ಹಾಗಾಗಿ ಆ ಯೋಚನೆಯ ಪದ್ಧತಿಯನ್ನು, ಆ ಸಂಸ್ಕೃತಿಯನ್ನು ಹೋಗಲಾಡಿಸುವುದನ್ನು 'ಕಾಂಗ್ರೆಸ್ ಮುಕ್ತ ಭಾರತ' ಎಂದು ಕರೆಯುತ್ತೇನೆ. ಕಾಂಗ್ರೆಸ್ ಪಕ್ಷ ಸಹ ಕಾಂಗ್ರೆಸ್ ಮನಸ್ಥಿತಿಯಿಂದ ಹೊರಬರಬೇಕು ಎಂದು ಅವರು ಸಲಹೆ ಸಹ ನೀಡಿದ್ದಾರೆ.

'ಆರ್ಥಿಕ ಅಪರಾಧಿಗಳು ಎಲ್ಲ ಹಣ ಕಟ್ಟಬೇಕು'
ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ಕರೆದುಕೊಂಡು ಬರುವ ಬಗ್ಗೆ ಮಾತನಾಡಿದ ಮೋದಿ, 'ಅವರು ದೇಶಬಿಟ್ಟು ಓಡಿಹೋಗುವ ಪರಿಸ್ಥಿತಿ ಉಲ್ಬಿಸಿದ್ದು, ನಮ್ಮ ಸರ್ಕಾರ ಕೈಗೊಂಡ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ. ಮೊದಲಿನ ರೀತಿಯ ಸರ್ಕಾರ ಇದ್ದು ಅದೇ ಗೆಳೆತನಗಳು ಮುಂದುವರೆದಿದ್ದರೆ ಅವರು ಓಡಿಹೋಗುತ್ತಿರಲಿಲ್ಲ. ಈ ರೀತಿ ಓಡಿಹೋಗುವವರನ್ನು ವಾಫಸ್ ತರಲೆಂದು ಕಾನೂನುಗಳನ್ನು ರಚಿಸಿದ್ದೇವೆ. ದೇಶ ಬಿಟ್ಟು ಓಡಿಹೋಗಿರುವ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆಸಲಾಗುವುದು ಅವರಿಂದ ಪೈಸೆ-ಪೈಸೆ ಹಣ ವಸೂಲಿ ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications