ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಮೋದಿ
ಅಜ್ಮೇರ್, ಅಕ್ಟೋಬರ್ 06: ದೇಶದಲ್ಲಿ ಒಂದು ಕಡೆ ವೋಟ್ ಬ್ಯಾಂಕ್ ರಾಜಕೀಯ ಮಾಡುವ ಪಕ್ಷ ಮತ್ತೊಂದೆಡೆ 'ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ' ಇದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ರಾಜಸ್ಥಾನದ ಅಜ್ಮೇರ್ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಇದೇ ಡಿಸೆಂಬರ್ 7 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಭಾಷಣ ಮಾಡಿದರು.
ರಾಜಸ್ಥಾನ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಮಾತನಾಡಿದ ನರೇಂದ್ರ ಮೋದಿ ಅವರು, ತಮ್ಮ ಬಿಜೆಪಿ ಪಕ್ಷ ಹಾಗೂ ಅದರ ಕಾರ್ಯ ಯೋಜನೆಗಳ ಗುಣಗಾನ ಮಾಡಿದರು ಹಾಗೂ ಕಾಂಗ್ರೆಸ್ ಮೇಲೆ ಪ್ರಖರ ವಾಗ್ದಾಳಿ ನಡೆಸಿದರು.
ಮೋದಿ ಅವರು ಇತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡುತ್ತಿದ್ದರೆ ರಾಹುಲ್ ಗಾಂಧಿ ಅತ್ತ ಮಧ್ಯಪ್ರದೇಶದ ಮೊರೆನಾದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಸ್ಥಾನದ ಮತದಾರರು ಎಚ್ಚರಿಕೆಯಿಂದಿರಿ
ರಾಜಸ್ಥಾನದ ಜನರು ಎಚ್ಚರಿಕೆಯಿಂದಿರಬೇಕು, ಅವರು (ಕಾಂಗ್ರೆಸ್) ನಿಮ್ಮನ್ನು ಕಷ್ಟಕ್ಕೆ ದೂಡಿ ತಾವು ಸುಖವಾಗಿ ಕೂತು ಉಣ್ಣುವುದಕ್ಕಾಗಿ ನಿಮ್ಮ ಮತಗಳನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ನೀವುಗಳು ಮತಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮೋದಿ ಹೇಳಿದರು.

ಪ್ರಧಾನಿ ಆಗಿದ್ದರೂ ನಾನು ಕಾರ್ಯಕರ್ತನೆ
'ನಾನು ಪ್ರಧಾನಿ ಆಗಿದ್ದರೂ ಸಹ ಇನ್ನೂ ಕಾರ್ಯಕರ್ತನೇ ಎಂದ ಮೋದಿ, ಪ್ರಧಾನಿ ಆಗಿದ್ದರೂ ನನ್ನ ಬೇರನ್ನು ನಾನು ಮರೆತಿಲ್ಲ, ಕಾರ್ಯಕರ್ತನಾಗಿ ಸ್ಕೂಟರ್ನಲ್ಲಿ ಬೂತ್ನಿಂದ ಬೂತ್ಗೆ ಓಡಾಡಿದ್ದು ಇನ್ನೂ ನನ್ನ ನೆನಪಿನಲ್ಲಿದೆ' ಎಂದು ಕಾರ್ಯಕರ್ತರನ್ನು ಮೋದಿ ಹುರಿದುಂಬಿಸಿದರು.

ಕಾಂಗ್ರೆಸ್ನವರು ಸುಳ್ಳು ಹೇಳಿ ಭಯ ಹುಟ್ಟಿಸುತ್ತಿದ್ದಾರೆ
ಕಾಂಗ್ರೆಸ್ ನವರು ಸುಳ್ಳು ಹೇಳಿ ಜನರಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಲ್ಲಿ ನಿರತರಾಗಿದ್ದಾರೆ ಎಂದ ಅವರು, ಕಾಂಗ್ರೆಸ್ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯ ಹಾಗೂ ನಮ್ಮ ಸಮಯದಲ್ಲಿ ಆದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆಗೆ ಬನ್ನಿ ಎಂದರೆ ಅವರು ತಯಾರಿಲ್ಲ ಆದರೆ ಸುಳ್ಳು ಹೇಳಿ ಜನರಲ್ಲಿ ಭಯ ಮೂಡಿಸುವುದರಲ್ಲಿ ಮಾತ್ರ ಮುಂದಿದ್ದಾರೆ ಎಂದು ಅವರು ಆರೋಪಿಸಿದರು.

ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಕಿಡಿ
ಅತ್ತ ಮೋದಿ ಅವರು ಭಾಷಣ ಮುಕ್ತಾಯವಾದ ನಂತರ ಇತ್ತ ಚುನಾವಣಾ ಆಯೋಗವು ನೀತಿ ಸಂಹಿತೆ ಘೋಷಣೆ ಮಾಡಿದೆ ಇದು ಕಾಂಗ್ರೆಸ್ ಅನ್ನು ಕೆರಳಿಸಿದೆ. ಮೊದಲೆ ಗೊತ್ತಾದ ಸಮಯ ಬಿಟ್ಟು ಮೋದಿ ಭಾಷಣದ ತರುವಾಯ ನೀತಿ ಸಂಹಿತೆ ಘೋಷಿಸಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications