ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಬನ್ನಿ : ಮೋದಿ ಆಹ್ವಾನ
ಭೋಪಾಲ್,ನ. 18 : "ರಾಜ್ಯಗಳ ಅಭಿವೃದ್ಧಿ ವಿಚಾರದಲ್ಲಿ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸೋಣ, ಸಿದ್ದವಾಗಿ ಬನ್ನಿ" ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಯಾವ ಪಕ್ಷ ಅಭಿವೃದ್ಧಿ ಮಾಡಿದೆ ಎಂದು ದೇಶದ ಜನರು ತೀರ್ಮಾನ ಮಾಡಲಿ ಎಂದು ಮೋದಿ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.
ನ.25ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೋಮವಾರ ಭೋಪಾಲ್, ಗುಣ, ಛತ್ರಾಪುರ, ಸಾಗರ್ ಗಳಲ್ಲಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಕಾಂಗ್ರೆಸ್ ರಾಜಕೀಯದಿಂದ ದೇಶದ ಜನರಿಗೆ ಆತಂಕ ಉಂಟು ಮಾಡಿದೆ. ಕೇಂದ್ರ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರೆ, ಬಿಜೆಪಿ ಒಂದುಗೂಡಿಸುವ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ ನಾಯಕರೇ ಪ್ರಧಾನಿಗೆ ಗೌರವ ಕೊಡುವುದಿಲ್ಲ. ಅವರು ಮಂಡಿಸಿದ ಸುಗ್ರೀವಾಜ್ಞೆಯನ್ನು ನಾನ್ ಸೆನ್ಸ್' ಎಂದು ಹೇಳುತ್ತಾರೆ ಎಂದು ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಮೋದಿ ಮಾತಿನ ಮುಖ್ಯಾಂಶಗಳು)

ಕಾಂಗ್ರೆಸ್ ದುರಾಡಳಿತದ ಕಾಲ ಸನ್ನಿಹಿತವಾಗಿದೆ
ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಕೊನೆಗೊಳಿಸುವ ಕಾಲ ಹತ್ತಿರವಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸಿ ಎಂದು ಮೋದಿ ಜನರಿಗೆ ಕರೆ ನೀಡಿದರು.

ಪ್ರಧಾನಿಗೆ ಗೌರವವಿಲ್ಲ
ದೇಶದ ಪ್ರಧಾನಮಂತ್ರಿಗೆ ಅವರ ಪಕ್ಷದ ಕೆಲವು ನಾಯಕರೇ ಗೌರವ ಕೊಡುವುದಿಲ್ಲ. ಪ್ರಧಾನಿ ಜಾರಿಗೆ ತರಲು ಹೊರಟ ಸುಗ್ರೀವಾಜ್ಞೆಯನ್ನು ನಾನ್ ಸೆನ್ಸ್ ಎಂದು ಅವರ ಪಕ್ಷದ ನಾಯಕರೇ ಟೀಕಿಸುತ್ತಾರೆ ಎಂದು ಮೋದಿ, ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಒಂದೇ ವೇದಿಕೆಗೆ ಬನ್ನಿ
ಬಿಜೆಪಿ ಮತ್ತು ಕಾಂಗ್ರೆಸ್ ಹೇಗೆ ರಾಜ್ಯಗಳ ಅಭಿವೃದ್ದಿ ಮಾಡಿದೆ ಎಂದು ಚರ್ಚಿಸೋಣ, ಒಂದೇ ವೇದಿಕೆಗೆ ಬನ್ನಿ ಎಂದು ನರೇಂದ್ರ ಮೋದಿ ಕಾಂಗ್ರೆಸ್ ನಾಯಕರಿಗೆ ಸಲಾಲು ಹಾಕಿದ್ದಾರೆ. ಕೇಂದ್ರ ಸರ್ಕಾರ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಿಲ್ಲ ಎಂದು ಮೋದಿ ಆರೋಪಿಸಿದರು.

ಕಾಂಗ್ರೆಸ್ ಕಾರ್ಖನೆ
ಗ್ರಾಮಗಳಿಗೆ ಹೋಗಿ ಕಾಂಗ್ರೆಸ್ಸಿಗರು ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುತ್ತಾರೆ. ಅವರೆಂದಾದರೂ ಅಲ್ಲಿ ಶಾಲೆ, ರಸ್ತೆಗಳನ್ನು ನಿರ್ಮಿಸಿದ್ದಾರೆಯೆ?, ಕಾಂಗ್ರೆಸ್ ಹೊಸದೊಂದು ಕಾರ್ಖನೆ ಆರಂಭಿಸಿದೆ, ಅಲ್ಲಿ ಸುಳ್ಳುಗಳನ್ನು ಉತ್ಪತ್ತಿ ಮಾಡಲಾಗುತ್ತದೆ ಎಂದು ಮೋದಿ ಕುಟುಕಿದರು.

ನೀವು ಏನೆಂದು ಮತ ಕೇಳುತ್ತೀರಿ?
ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳ ಮಾನದಂಡವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ, ನೀವು ಏನು ಕೆಲಸ ಮಾಡಿದ್ದೀರಿ? ಎಂದು ಜನರ ಬಳಿ ಹೋಗಿ ಮತ ಕೇಳುತ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಮೋದಿ ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿ
ಭಾರತ ಅಭಿವೃದ್ಧಿಗಾಗಬೇಕಾದರೆ, ಮೊದಲು ದೇಶ ಕಾಂಗ್ರೆಸ್ ಮುಕ್ತವಾಗಬೇಕು. ಮತ ಕೇಳಲು ಬರುವ ಕಾಂಗ್ರೆಸ್ ನಾಯಕರ ಬಳಿ ಭ್ರಷ್ಟಾಚಾರದ ಬಗ್ಗೆ ಕೇಳಿ ಎಂದು ಮೋದಿ ಜನರಿಗೆ ಕರೆ ನೀಡಿದರು. ನಿಮ್ಮ ಒಂದು ಮತ ಕಾಂಗ್ರೆಸ್ ಪಕ್ಷವನ್ನು ಆಡಳಿತದಿಂದ ಕೆಳಗಿಳಿಯುವಂತೆ ಮಾಡುತ್ತದೆ ಎಂದು ಹೇಳಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ
2014ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಮಧ್ಯಪ್ರದೇಶದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತದೆ ಎಂದು ಮೋದಿ ಭರವಸೆ ನೀಡಿದರು.

ಚೌಹಾಣ್ ಕಾರಣ
ಮಧ್ಯಪ್ರದೇಶ ರಾಜ್ಯ ಅಭಿವೃದ್ಧಿ ಹೊಂದಿದೆ ಇದಕ್ಕೆ ಕಾರಣ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಇದು ರಾಜ್ಯದ ಜನರಿಗೆ ತಿಳಿಯುತ್ತದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತಿಳಿಯುವುದಿಲ್ಲ. ರಾಜ್ಯದಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದೆ. 25 ಲಕ್ಷ ಹೆಕ್ಟೇರ್ ಭೂಮಿಯನ್ನು ಕೃಷಿಯೋಗ್ಯ ಭೂಮಿಯಾಗಿ ಮಾಡುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ಪ್ರಧಾನಿ ನಿಷ್ಠೆ ಯಾರಿಗೆ?
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದ ಕುಟುಂಬಕ್ಕೆ ಅವರು ನಿಷ್ಠೆಯನ್ನು ತೋರಿಸುತ್ತಿದ್ದಾರೆ. ಇದರಿಂದ ಅವರು ಭಾರತದ ರಾಜಕೀಯದ ಮಟ್ಟವನ್ನು ಕುಗ್ಗುವಂತೆ ಮಾಡಿದ್ದಾರೆ. ಪ್ರಧಾನಿ ಹೀಗೇಕೆ ಮಾಡುತ್ತಿದ್ದಾರೆ ಎಂದು ಮೋದಿ ಪ್ರಶ್ನಿಸಿದರು.












Click it and Unblock the Notifications