Maharashtra Assembly Election 2024: ಮುಖ್ಯಮಂತ್ರಿ ಹುದ್ದೆ ಬಗ್ಗೆ ಉದ್ಧವ್ ಠಾಕ್ರೆ ಮಾತು
ಮುಂಬೈ, ನವೆಂಬರ್ 18: ಮಹಾರಾಷ್ಟ್ರ ರಾಜ್ಯದ ಚುನಾವಣೆಗೆ ತಯಾರಿ ಅಂತಿಮ ಹಂತದಲ್ಲಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಬಹಿರಂಗ ಪ್ರಚಾರ ಸೋಮವಾರ ಸಂಜೆ ಅಂತ್ಯವಾಗಲಿದೆ. ರಾಜ್ಯದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.

ಎರಡು ಮೈತ್ರಿಕೂಟಗಳು ಚುನಾವಣೆ ಪ್ರಚಾರವನ್ನು ಅಂತ್ಯಗೊಳಿಸುತ್ತಾ ಬಂದಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೆ ಚುನಾವಣೆ ಎದುರಿಸುತ್ತಿವೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮುಖ್ಯಮಂತ್ರಿ ಯಾರು? ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿವೆ.
ಉದ್ಧವ್ ಠಾಕ್ರೆ ಮಾತು: ದಿ ಹಿಂದೂ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತನಾಡಿದರು. "ಪ್ರಚಾರದ ಸಮಯದಲ್ಲಿಯೇ ನಮಗೆ ಮುಖ್ಯಮಂತ್ರಿ ಅಭ್ಯರ್ಥಿ ಇರಬೇಕಿತ್ತು. ಆದರೆ ಈಗ ನಾವು ಚುನಾವಣಾ ಫಲಿತಾಂಶದ ಬಳಿಕ ಈ ಕುರಿತು ತೀರ್ಮಾನ ಮಾಡುತ್ತೇವೆ" ಎಂದು ಹೇಳಿದರು.
ಎಂವಿಎ ಮೈತ್ರಿಕೂಟ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲು ವಿಫಲವಾಯಿತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಉದ್ಧವ್ ಠಾಕ್ರೆ, "ನಾವು ಮೈತ್ರಿಕೂಟ ತೀರ್ಮಾನಿಸುವ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ಮಹಾರಾಷ್ಟ್ರ ದ್ರೋಹಿಗಳು ಅಧಿಕಾರಕ್ಕೆ ಬರುವುದನ್ನು ನಾವು ಸಹಿಸುವುದಿಲ್ಲ" ಎಂದು ಉದ್ಧವ್ ಠಾಕ್ರೆ ತಿಳಿಸಿದರು.
ಮಹಾವಿಕಾಸ್ ಅಘಾಡಿಯಲ್ಲಿ ಹೆಚ್ಚು ಸೀಟುಗಳನ್ನು ಪಡೆದವರು ಸಿಎಂ ಆಗುತ್ತಾರೆ ಎಂಬ ಶರದ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, "ಅವರು ಯಾರೇ ಮುಖ್ಯಮಂತ್ರಿಯಾದರೂ ಬೆಂಬಲ ನೀಡುತ್ತಾರೆ" ಎಂದು ಹೇಳಿದರು.
ಚುನಾವಣಾ ಘೋಷಣೆಯೂ ಮೊದಲೇ ಎಂವಿಎ ಮೈತ್ರಿಕೂಟ ಬೇಡಿಕೆ ಇಟ್ಟರೂ ಸಹ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಉದ್ಧವ್ ಠಾಕ್ರೆ, "ಆ ಕಾಲ ಮುಗಿದಾಗಿದೆ, ಈಗ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಲ್ಲ. ನಾವು ಒಟ್ಟಾಗಿ ಚುನಾವಣೆ ಬಳಿಕ ಸಿಎಂ ಯಾರು ಎಂದು ತೀರ್ಮಾನ ಮಾಡುತ್ತೇವೆ" ಎಂದರು.
"ಸುಪ್ರಿಯಾ ಸುಳೆ, ರಾಜೇಂದ್ರ ಶಿಘ್ನೆ, ನಿಲೇಶ್ ಲಾಂಕೆ, ಜತೇಂದ್ರ ಅಹ್ವದ್ ಸೇರಿದಂತೆ ಯಾರನ್ನು ಬೇಕಾದರೂ ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಿದರೆ ನಾನು ಬೆಂಬಲ ನೀಡುತ್ತೇನೆ" ಎಂದು ಉದ್ಧವ್ ಠಾಕ್ರೆ ಹೇಳಿದರು.
"ಹಣದುಬ್ಬರ, ನಿರುದ್ಯೋಗ, ರೈತರಿಗೆ ಬೆಂಬಲ ಬೆಲೆ ಇಲ್ಲದಿರುವುದು, ಶಿಕ್ಷಣದ ಕೊರತೆ ಇಂತಹ ವಿಷಯಗಳು ರಾಜ್ಯದ ಜನರನ್ನು ಕಾಡುತ್ತಿವೆ. ವ್ಯಾಪಾರ ವಹಿವಾಟು ಗುಜರಾತ್ ರಾಜ್ಯಕ್ಕೆ ಹೋಗುತ್ತಿದೆ. ಇಂತಹ ವಿಷಯಗಳ ಕುರಿತು ಹೋರಾಟ ಮಾಡಬೇಕಿದೆ" ಎಂದು ಉದ್ಧವ್ ಠಾಕ್ರೆ ಚುನಾವಣೆ ಬಗ್ಗೆ ಮಾತನಾಡಿದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಪ್ರಚಾರದ ಕುರಿತು ಮಾತನಾಡಿದ ಉದ್ಧವ್ ಠಾಕ್ರೆ, "ಬಾಳಾ ಸಾಹೇಬ್ ಠಾಕ್ರೆ ಹೆಸರಿನಲ್ಲಿ ಮತವನ್ನು ಕೇಳಲು ಅವರು ಮುಂಬೈಗೆ ಬಂದಿದ್ದಾರೆ ಎಂಬುದು ಅವರಿಗೂ ತಿಳಿದಿದೆ. ಅವರ ಹೆಸರು ಇಲ್ಲದೇ ಅವರ ಸಮಾವೇಶಗಳನ್ನು ಮುಗಿಸುತ್ತಿಲ್ಲ" ಎಂದು ಟೀಕಿಸಿದರು.
"2014ರಲ್ಲಿ ನಮ್ಮ ಜೊತೆಗಿನ ಮೈತ್ರಿ ಮುರಿಯಲು ನಾನು ಏನು ಮಾಡಿದ್ದೆ?., 2019ರಲ್ಲಿ ನಾನು ಏನು ತಪ್ಪು ಮಾಡಿದೆ. ನಿಮ್ಮ ಮಾತಿಗೆ ಬದ್ಧವಾಗಿರಿ ಎಂದು ಮಾತ್ರ ನಾನು ಹೇಳಿದ್ದು" ಎಂದು ಉದ್ಧವ್ ಠಾಕ್ರೆ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು.












Click it and Unblock the Notifications