ಜಗನ್ನಾಥನಿಗೆ ಬೆಳ್ಳಿ ರಥ ನೀಡಿದ ಮುಸ್ಲಿಂ ಬಾಂಧವರು
ಅಹಮದಾಬಾದ್, ಜುಲೈ 18: ಆಷಾಢ ಶುಕ್ಲ ದ್ವಿತೀಯ ದಿನವಾದ ಶನಿವಾರದಂದು (ಜು 18) ನಡೆಯಲಿರುವ ಇತಿಹಾಸ ಪ್ರಸಿದ್ದ ಜಗನ್ನಾಥ ರಥಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಈ ನಡುವೆ ಗುಜರಾತಿನ ಮುಸ್ಲಿಂ ಬಾಂಧವರು ಜಗನ್ನಾಥ ದೇವಸ್ಥಾನಕ್ಕೆ ಬೆಳ್ಳಿಯ ರಥವನ್ನು ದೇಣಿಗೆ ನೀಡುವ ಮೂಲಕ ಧಾರ್ಮಿಕ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಇಲ್ಲಿನ ದೇವಾಲಯದ ಅರ್ಚಕರಿಗೆ ರಥವನ್ನು ಹಸ್ತಾಂತರಿಸಿದ್ದಾರೆ.
ರಥವನ್ನು ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದಾನಿಗಳಲ್ಲಿ ಒಬ್ಬರಾದ ರೌಫ್ ಬಂಗಾಲಿ, ಪ್ರತಿ ವರ್ಷದಂತೆ ಜಗನ್ನಾಥನಿಗೆ ಶಕ್ತ್ಯಾನುಸಾರವಾಗಿ ಏನಾದರೂ ನೀಡುತ್ತೇವೆ. ಅದರಂತೇ ಈ ವರ್ಷ ಬೆಳ್ಳಿಯ ಪುಟ್ಟ ರಥವನ್ನು ದೇವಲಯಕ್ಕೆ ನೀಡುತ್ತಿದ್ದೇವೆ.

ನಾವೆಲ್ಲಾ ಒಂದು ಎನ್ನುವ ಮೂಲಕ ದೇಶದಲ್ಲಿ ಧಾರ್ಮಿಕ ಸಹಿಷ್ಣತೆಯ ಸಂದೇಶವನ್ನು ಪ್ರಸಾರ ಮಾಡುವುದು ನಮ್ಮ ಉದ್ದೇಶ. ಈ ಬಾರಿ ಜಗನ್ನಾಥ ರಥಯಾತ್ರೆ ಮತ್ತು ಈದ್ ಹಬ್ಬ ಒಂದೇ ದಿನ ಬಂದಿರುವುದರಿಂದ ನಾಡಿಗೆ ಮಂಗಳಕರವಾಗಲಿದೆ ಎಂದು ಬಂಗಾಲಿ ಹೇಳಿದ್ದಾರೆ.
ಪುರಿ ಜಗನ್ನಾಥ ರಥಯಾತ್ರೆ : ಶನಿವಾರ ನಡೆಯಲಿರುವ ಒರಿಸ್ಸಾದ ಪುರಿಯಲ್ಲಿನ ಜಗನ್ನಾಥ ರಥಯಾತ್ರೆಗೆ ಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾಗುವ ನಿರೀಕ್ಷೆ ಇದೆ.
ಅಲ್ಲದೇ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇರುವುದರಿಂದ ಸರಕಾರ ರಥಯಾತ್ರೆಗೆ ಯಾವುದೇ ರೀತಿಯ ಅಡ್ಡಿ ಬರದಂತೆ ಎಲ್ಲಾ ಸಿದ್ದತೆಯನ್ನು ಕೈಗೊಂಡಿದೆ.
ಸರಕಾರ ಭಾರೀ ಬಂದೋಬಸ್ತ್ ನಡೆಸಿದ್ದು, ಭದ್ರತೆಗಾಗಿ 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜೊತೆಗೆ ದೇವಾಲಯದ ಸುತ್ತಮುತ್ತಲ ಭಾಗದಲ್ಲಿ 200 ಸಿಸಿ ಟಿವಿ ಕ್ಯಾಮರಾ ಅಳವಡಿಸಿದೆ.
ಈ ಐತಿಹಾಸಿಕ ರಥಯಾತ್ರೆಯಲ್ಲಿ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಕೇಂದ್ರ ಸಚಿವರಾದ ಮಹೇಶ್ ಶರ್ಮಾ, ಧಮೇಂದ್ರ ಪ್ರಧಾನ್ ಮುಂತಾದವರು ಭಾಗಿಯಾಗಲಿದ್ದಾರೆ.












Click it and Unblock the Notifications