ಹರಿಯಾಣದ ಪಾಣಿಪತ್ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಮುಸ್ಲಿಮರ ಅಂಗಡಿಗಳಿಗೆ ಹಾನಿ
ಮಣಿಪುರದಿಂದ ಹರಿಯಾಣಕ್ಕೆ ಹರಡಿರುವ ಜನಾಂಗೀಯ ಹಿಂಸಾಚಾರದ ಕಿಚ್ಚು ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಭಾನುವಾರವೂ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಮುಸ್ಲಿಮರ ಅಂಗಡಿಗಳಿಗೆ ಹಾನಿ ಮಾಡಿರುವುದು ವರದಿಯಾಗಿದೆ.
ಭಾನುವಾರ ಚಾಂದಿನಿ ಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಪುರುಷರು ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಜೊತೆಗೆ ಅವುಗಳನ್ನು ಖಾಲಿ ಮಾಡುವಂತೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಈವರೆಗೆ ಪೊಲೀಸರು ಅಂತವರನ್ನು 15 ಮಂದಿಯನ್ನು ಬಂಧಿಸಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆಂದು ಎಎಸ್ಪಿ ಪಾಣಿಪತ್ ಮಯಾಂಕ್ ಮಿಶ್ರಾ ಹೇಳಿದ್ದಾರೆ.

"ನಾವು ಅವರ ಕಾರ್ಯ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ಈ ಗುಂಪಿನ ಹಿಂದೆ ಯಾರಿದ್ದಾರೆ? ಅವರಿಗೆ ಶಸ್ತ್ರಾಸ್ತ್ರಗಳನ್ನು ಯಾರು ಒದಗಿಸುತ್ತಿದ್ದಾರೆ ಎಂದು ತಿಳಿಯುವ ಪ್ರಯತ್ನಗಳಾಗುತ್ತಿವೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ನಿವಾಸಿಗಳು ಚಿತ್ರೀಕರಿಸಿದ ವೀಡಿಯೊಗಳ ಆಧಾರದ ಮೇಲೆ ಇನ್ನೂ ಹಲವರನ್ನು ಬಂಧಿಸಲಾಗುವುದು"ಎಂದು ಅವರು ಹೇಳಿದರು.
ಸುಮಾರು 25-30 ಮಂದಿ ಮುಖ ಮುಚ್ಚಿಕೊಂಡು ಕತ್ತಿ ಮತ್ತು ಚಾಕುಗಳನ್ನು ಹಿಡಿದು ಕೃಷ್ಣ ಗಾರ್ಡನ್ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ವಾಸಿಸುವ ಮಾರುಕಟ್ಟೆಗೆ ನುಗ್ಗಿ ಮುಸ್ಲಿಮರನ್ನು ಬೆದರಿಸಿ ಅಂಗಡಿಗಳನ್ನು ಧ್ವಂಸಗೊಳಿಸಿದ್ದರು.
ಮಾಂಸದ ಅಂಗಡಿ ಧ್ವಂಸ
ಜನಸಮೂಹ ಪ್ರದೇಶದ ಸುತ್ತಲೂ ಚಲಿಸಿ ಕೃಷ್ಣ ಗಾರ್ಡನ್, ಉಜಾ ಗೇಟ್ ಮತ್ತು ಇಂಡೋ ಫಾರ್ಮ್ ರಸ್ತೆಯಲ್ಲಿನ ಆಸ್ತಿಗಳನ್ನು ಧ್ವಂಸಗೊಳಿಸಿದೆ. ಮುಸ್ಲಿಂ ವ್ಯಾಪಾರಿಗಳನ್ನು ಪ್ರದೇಶವನ್ನು ತೊರೆಯುವಂತೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಇದರಿಂದ ಕೆಲ ವ್ಯಾಪಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹರಿಯಾಣ ಪೊಲೀಸರು ಚಾಂದಿನಿ ಬಾಗ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148, 149, 324, 427 ಮತ್ತು 506 ರ ಅಡಿಯಲ್ಲಿ ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.

ನೆರೆಹೊರೆಯವರ ಸುರಕ್ಷತೆಗಾಗಿ ಮನೆಯಿಂದ ಹೊರಗೆ ಕಾಲಿಟ್ಟ ನಿಹಾಲ್, ಗಲಾಟೆಯ ನಡುವೆ ದಾಳಿಕೋರರು ಬಳಸುತ್ತಿದ್ದ ಬೈಕ್ನ ನಂಬರ್ ಪ್ಲೇಟ್ ಕಳಚಿ ಬಿದ್ದಿದ್ದು ಅದನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ 35 ವರ್ಷದ ಮೌಲ್ವಿ ಅಬ್ದುಲ್ ವಾಹಿದ್ ಅವರು ಸೆಕ್ಟರ್ 25 ರ ಮಸೀದಿಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ದಾಳಿ ನಡೆದಿದೆ. "ಮಕ್ಕಳು ಮಧ್ಯಾಹ್ನದ ಸುಮಾರಿಗೆ ಹೊರಡಬೇಕಿತ್ತು. ಅವರನ್ನು ಬಿಡಲು ನನಗೆ ಭಯವಾಯಿತು. ಅವರ ಮೇಲೂ ದಾಳಿ ಮಾಡಬಹುದು ಎಂಬ ಭಯವಾಯಿತು. ನಾವು ಮಸೀದಿಯೊಳಗೆ ಅಡಗಿಕೊಂಡೆವು. ಪುರುಷರು ಸ್ಥಳದಿಂದ ಹೋದಾಗ, ನಾನು ಮಕ್ಕಳನ್ನು ಹೋಗಲು ಬಿಟ್ಟಿದ್ದೇನೆ, "ಎಂದು ಅವರು ಹೇಳಿದ್ದಾರೆ.
ಮಸೀದಿಯಿಂದ ಇನ್ನೂರು ಮೀಟರ್ ದೂರದಲ್ಲಿ ವಾಹಿದ್ ಅವರ ಪತ್ನಿ ಖಾಲಿದಾ (28) ತಮ್ಮ ಬಟ್ಟೆ ಅಂಗಡಿಯಲ್ಲಿ ತಮ್ಮ ಎರಡು ಮತ್ತು ಮೂರು ವರ್ಷದ ಮಕ್ಕಳೊಂದಿಗೆ ಕುಳಿತಿದ್ದರು. ಪುರುಷರು ಅಂಗಡಿಯನ್ನು ಪ್ರವೇಶಿಸುವ ಮೊದಲು ಅದರ ಹೆಸರನ್ನು ಪರಿಶೀಲಿಸಿದರು ಎಂದು ಖಾಲಿದಾ ದಿ ಹಿಂದೂಗೆ ತಿಳಿಸಿದ್ದಾರೆ. ಬಳಿಕ ಗುಂಪು ಆಸ್ತಿಯನ್ನು ಧ್ವಂಸಗೊಳಿಸಿದರು ಮತ್ತು ಎಲ್ಲಾ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
"ಅಂಗಡಿಯು ಹಿಂದೂ ನಿವಾಸಿಗಳ ಒಡೆತನದಲ್ಲಿದೆ. ಬಾಡಿಗೆಗೆ ಮಾತ್ರ ತೆಗೆದುಕೊಂಡಿದ್ದೆವೆ. ನನ್ನ ಮಕ್ಕಳಿಗೆ ಅವರು ಹಾನಿ ಮಾಡಬಾರದೆಂದು ನಾನು ಅವರನ್ನು ಬಚ್ಚಿಟ್ಟಿದ್ದೇನೆ'' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೀದಿಗೆ ಆಹಾರ ಚೆಲ್ಲಿದ ದಾಳಿಕೋರರು
ಈ ವೇಳೆ ಅನೇಕ ಮಾಂಸದ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಆಹಾರವನ್ನು ಬೀದಿಗೆ ಎಸೆಯಲಾಯಿತು. 25 ವರ್ಷದ ಮೊಹಮ್ಮದ್ ಶಾನು ಅವರು ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡರು ಹೇಳಿದ್ದು ಹೀಗೆ: "ಜನಸಮೂಹವು ಮಹಿಳೆಯರನ್ನೂ ಸಹ ಬಿಡಲಿಲ್ಲ. ನಮ್ಮ ಅಂಗಡಿಗಳಿಗೆ ನುಗ್ಗಿ ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಮಾರಾಟಕ್ಕೆ ಇಟ್ಟಿದ್ದ ಬಿರಿಯಾನಿ, ಚಿಕನ್ ಕರಿಗಳನ್ನು ರಸ್ತೆಗೆ ಎಸೆದಿದ್ದಾರೆ. ಅವರು ಮೇಜು, ಕುರ್ಚಿ ಮತ್ತು ಗಾಜಿನ ಬಾಗಿಲುಗಳನ್ನು ಒಡೆದು ಹೋಗಿದ್ದಾರೆ. ನನಗೆ ₹ 50,000 ನಷ್ಟವಾಗಿದೆ. ನಾವು ದಿನನಿತ್ಯ ಸಂಪಾದಿಸುವ ಸಣ್ಣ ಜನರು. ನಾವು ಎಲ್ಲಿಗೆ ಹೋಗಬೇಕು? " ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಜೈ ಶ್ರೀ ರಾಮ್' ಘೋಷಣೆಗೆ ಒತ್ತಾಯ
ಮಾತ್ರವಲ್ಲದೆ ದಾಳಿಕೋರರ ಗುಂಪು ಮುಸ್ಲಿಂ ಪುರುಷರನ್ನು 'ಜೈ ಶ್ರೀ ರಾಮ್' ಎಂಬ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸುತ್ತಿರುವುದು ಕೇಳಿ ಬಂದಿದೆ. ಮೊಹಮ್ಮದ್ ಅಹ್ತಾಶಮ್ ತನ್ನ ಅಂಗಡಿಯಲ್ಲಿ ಕುಳಿತು ತನ್ನ ವ್ಯವಹಾರದ ಬಗ್ಗೆ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಗುಂಪು ಪ್ರವೇಶಿಸಿ ಅಹ್ತಾಶಮ್ ಅವರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದೆ.
"ಅವರು ನನ್ನ ಕಾಲರ್ನಿಂದ ಹಿಡಿದುಕೊಂಡರು, ನನಗೆ ಕುಟುಂಬವಿರುವುದರಿಂದ ನನ್ನನ್ನು ಬಿಡಲು ನಾನು ಅವರಿಗೆ ಹೇಳಿದೆ. ಅವರು ನನ್ನನ್ನು ಗೋಡೆಯ ಕಡೆಗೆ ತಳ್ಳಿದರು. ಅಂಗಡಿಯಲ್ಲಿದ್ದ ₹ 14,000 ತೆಗೆದುಕೊಂಡು ಹೋಗಿ ಆಹಾರ ಪದಾರ್ಥಗಳನ್ನೆಲ್ಲ ನಾಶಪಡಿಸಿದ್ದಾರೆ. ಇದರಿಂದ ₹70 ಸಾವಿರ ನಷ್ಟ ಉಂಟಾಗಿದೆ'' ಎಂದು ದೂರಿದರು.
ವ್ಯಾಪಾರ ನಡೆಸದಂತೆ ಬೆದರಿಕೆ
ದಾಳಿಕೋರರ ಗುಂಪು ತಮ್ಮಲ್ಲಿದ್ದ ಚಾಕುಗಳನ್ನು ತೆಗೆದುಕೊಂಡು, ಆ ಪ್ರದೇಶದಲ್ಲಿ ನಮಗೆ ವ್ಯಾಪಾರವನ್ನು ನಡೆಸದಂತೆ ಬೆದರಿಕೆ ಹಾಕಿದೆ. ಜೊತೆಗೆ ಸ್ಥಳವನ್ನು ತೊರೆಯುವಂತೆ ಒತ್ತಾಯಿಸಿದೆ. ಗುಂಪು ಮೊದಲು ಬೋರ್ಡ್ ನೋಡಿ ನಂತರ ದಾಳಿ ಮಾಡುತ್ತಿದ್ದಾರೆ. ಒಂದು ವೇಳೆ ಬೋರ್ಡ್ ಮೇಲೆ ಅನುಮಾನ ಬಂದಲ್ಲಿ ಅದನ್ನು ಧ್ವಂಸಗೊಳಿಸುತ್ತಿದೆ.
ಈ ಬಗ್ಗೆ ಸ್ಥಳೀಯ ಮಹಿಳೆ ಖಲೀದಾ ದಿ ಹಿಂದೂಗೆ ಆತಂಕ ಹಂಚಿಕೊಂಡಿದ್ದಾರೆ. "ಅಂಗಡಿಯು ಹಿಂದೂ ನಿವಾಸಿಗಳ ಒಡೆತನದಲ್ಲಿದೆ. ಅದು ಅವರ ಆಸ್ತಿ, ನಮ್ಮದಲ್ಲ. ನಾವು ಅದನ್ನು ಬಾಡಿಗೆಗೆ ಮಾತ್ರ ಹೊಂದಿದ್ದೇವೆ. ನಾನು ನನ್ನ ಮಕ್ಕಳನ್ನು ನನ್ನ ದುಪ್ಪಟ್ಟಾ ಅಡಿಯಲ್ಲಿ ಬಚ್ಚಿಟ್ಟಿದ್ದೇ. ಅವರಿಗೆ ಏನನ್ನೂ ಮಾಡಬೇಡಿ ಎಂದು ಬೇಡಿಕೊಂಡೆ" ಎಂದು ಖಲೀದಾ ಹೇಳಿದರು.












Click it and Unblock the Notifications