ಪೋಷಕರ ಬಗ್ಗೆ ಅಸಹ್ಯಕರ ಹೇಳಿಕೆ; ಖ್ಯಾತ ಯೂಟ್ಯೂಬರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
'ಇಂಡಿಯಾ ಗಾಟ್ ಲ್ಯಾಟೆಂಟ್' ಎನ್ನುವ ಯೂಟ್ಯೂಬ್ ಶೋ ಸಂಚಿಕೆಯೊಂದರಲ್ಲಿ ವಿವಾದಾತ್ಮಕ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು ಮಂಗಳವಾರ ಮಹಾರಾಷ್ಟ್ರ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 30 ರಿಂದ 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಿಂದ 6ನೇ ಸಂಚಿಕೆಯವರೆಗೆ ಭಾಗಿಯಾಗಿದ್ದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎಲ್ಲರಿಗೂ ಈಗಾಗಲೇ ನೋಟಿಸ್ ಕಳಿಸಲಾಗುತ್ತಿದೆ. ಎಲ್ಲರನ್ನೂ ವಿಚಾರಣೆ ಮಾಡಿ ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಸೈಬರ್ ಇಲಾಖೆಯು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿದೆ. ಈಗಾಗಳೇ ಪ್ರಸಾರವಾಗಿರುವ ಕಾರ್ಯಕ್ರಮದ ಒಟ್ಟು 18 ಕಂತುಗಳನ್ನು ಡಿಲೀಟ್ ಮಾಡುವಂತೆ ಸೂಚನೆ ಕೊಟ್ಟಿರುವುದಾಗಿ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಮತ್ತು ಇತರರು ಅಶ್ಲೀಲ ಭಾಷೆಯನ್ನು ಬಳಕೆ ಮಾಡಿರವುದು ಕಂಡುಬಂದಿದೆ ಎಂದು ಸೈಬರ್ ಇಲಾಖೆ ತಿಳಿಸಿದೆ. ಹಾಸ್ಯನಟ ಸಮಯ್ ರೈನಾ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಅವರು ಮಾಡಿದ ಹೇಳಿಕೆಗಳು ಆಕ್ರಮಣಕಾರಿ ಮತ್ತು ಅವಹೇಳನಕಾರಿ ಎಂದು ಪರಿಗಣಿಸಲ್ಪಟ್ಟಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಮಹಿಳಾ ಆಯೋಗದಿಂದ ಸಮನ್ಸ್
ಸೋಷಿಯಲ್ ಮೀಡಿಯಾ ಸ್ಟಾರ್ ಗಳಾದ ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಸಮನ್ಸ್ ಜಾರಿ ಮಾಡಿದೆ.
ಕಾರ್ಯಕ್ರಮದಲ್ಲಿ ಅವರು ನೀಡಿರುವ ಹೇಳಿಕೆಗಳು ಪ್ರತಿಯೊಬ್ಬ ವ್ಯಕ್ತಿಗೆ, ವಿಶೇಷವಾಗಿ ಸಮಾನತೆ ಮತ್ತು ಪರಸ್ಪರ ಗೌರವವನ್ನು ಎತ್ತಿಹಿಡಿಯುವ ಸಮಾಜದಲ್ಲಿ, ನೀಡಬೇಕಾದ ಘನತೆ ಮತ್ತು ಗೌರವವನ್ನು ಉಲ್ಲಂಘಿಸುತ್ತವೆ ಎಂದು ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಹಿಳಾ ಆಯೋಗದ ಮುಂದೆ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರನ್ನು ಕೇಳಿದೆ. ಫೆಬ್ರವರಿ 17 ರಂದು ವಿಚಾರಣೆ ನಡೆಯಲಿದೆ.












Click it and Unblock the Notifications