ದಿಗ್ವಿಜಯ್ ಸಿಂಗ್ ಪುತ್ರ ವಿಧಾನಸಭೆಗೆ ಸ್ಪರ್ಧೆ
ಭೋಪಾಲ್, ನ.16: ಇದು ಮತ್ತೊಂದು ಪುತ್ರೋತ್ಸವ. ಭಾರತದ ರಾಜಕೀಯಕ್ಕೆ ಅಂಟಿರುವ ಅಂಟುಜಾಢ್ಯ ಚಿಕಿತ್ಸೆಯಿಲ್ಲದೆ ಮತ್ತಷ್ಟು ವ್ಯಾಪಿಸುತ್ತಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಪುತ್ರ ರಾಜ್ಯ ವಿಧಾನಸಭೆ ಕಣದಲ್ಲಿದ್ದಾರೆ.
ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ತಮ್ಮ ಪುತ್ರ ಜೈವರ್ಧನ್ ಸಿಂಗ್ ಅವರನ್ನು ರಾಘೋಗಢದಿಂದ ಕಣಕ್ಕಿಳಿಸಿದ್ದಾರೆ. ಅಂದಹಾಗೆ ದಿಗ್ವಿಜಯ್ ಸಿಂಗ್ 1977ರಲ್ಲಿ ಗುನಾ ಜಿಲ್ಲೆಯ ಇದೇ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆರಿಸಿಬಂದಿದ್ದರು. ದಿಗ್ವಿಜಯ್ ಸಿಂಗ್ ಕುಟುಂಬದವರು ರಾಘೋಗಢದ ರಾಜಮನೆತನಕ್ಕೆ ಸೇರಿದವರು.

ನವೆಂಬರ್ 25 ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ ಕುಟುಂಬಗಳಿಗೆ ಸೇರಿದ 12 ಮಂದಿ ಕಣದಲ್ಲಿದ್ದಾರೆ. ಆಡಳಿತಾರೂಢ ಬಿಜೆಪಿ ವತಿಯಿಂದ 8 ಮಂದಿ ಮತ್ತು ನಾಲ್ಕು ಮಂದಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ಸಂಸದ ಅನಂತಕುಮಾರ್ ಅವರು ಮಧ್ಯಪ್ರದೇಶ ವಿಧಾಸನಭೆ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿದ್ದಾರೆ.
ಇನ್ನು, ಡಿಗ್ಗಿ ಸಮೀಪ ಬಂಧು ಪ್ರಿಯವ್ರತ ಸಿಂಗ್ ರಾಹಗಢ ಜಿಲ್ಲೆಯ ಖಿಲ್ಚಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 27 ವರ್ಷದ ಜೈವರ್ಧನ್ ಸಿಂಗ್, ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದ ಎಂಬಿಎ ಪದವೀಧರ.
ಪುತ್ರೋತ್ಸವವು ಕೇವಲ ದಿಗ್ವಿಜಯ್ ಸಿಂಗ್ ಅವರಿಗೆ ಸೀಮಿತವಾಗಿಲ್ಲ. ಈ ಬಾರಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ಅನೇಕ ಪುತ್ರೋತ್ಸವಗಳಿಗೆ ಹೇತುವಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರಾಜಮನೆತನದ ಕಾಂತಿಲಾಲ್ ಭುರಿಯಾ ಪುತ್ರ ವಿಕ್ರಾಂತ್, ಕೈಗಾರಿಕಾ ಮಂತ್ರಿ ಕೈಲಾಶ್ ವಿಜಯವರ್ಗಿಯಾ ಅವರ ಪುತ್ರ ಆಕಾಶ್, ಸ್ಪೀಕರ್ ಈಶ್ವರದಾಸ್ ರೋಹಣಿ ಅವರ ಪುತ್ರ ಅಶೋಕ್, ಕ್ರೀಡಾ ಸಚಿವ ತುಕೋಜಿ ರಾವ್ ಪುತ್ರ ವಿಕ್ರಮ್ ಸೇರಿದಂತೆ ರಾಜ್ಯದ ಅನೇಕ ಶಾಸಕ/ ಸಚಿವ/ ಸಂಸದರ ಹತ್ತಾರು ಮಕ್ಕಳು ಕಣದಲ್ಲಿದ್ದಾರೆ.
ಇವರಲ್ಲಿ ಅನೇಕರು ಈಗಾಗಲೇ ಕುಖ್ಯಾತ ನಾಮರೂ ಆಗಿದ್ದಾರೆ. ಒಂದಿಬ್ಬರು ತಮ್ಮ ಐಷಾರಾಮಿ ವಾಹನಗಳನ್ನು ಜನರ ಮೇಲೆ ಹತ್ತಿಸಿ, ಅವರ ಬದುಕುಗಳನ್ನು ಕಸಿದುಕೊಂಡ ಹಿಟ್ ಅಂಡ್ ರನ್ ಕೇಸಿಸ್ಟುಗಳು. ಆದರೆ ಇವರುಗಳ ಗೆಲುವಿಗೆ ಇಂಥದ್ದೆಲ್ಲಾ ತೊಡಕಾಗುವುದಿಲ್ಲ. ಏಕೆಂದರೆ ಇಲ್ಲಿನ ಜನ ಅಪ್ಪ ಮತ್ತು ಅವರ ಕುಟುಂಬವನ್ನು ನೋಡಿ ಮಣೆ ಹಾಕುತ್ತಾರೆ.












Click it and Unblock the Notifications