ಮಸೀದಿ ಹಾಗೂ ಇಸ್ಲಾಂ : ನಮಾಜಿಗಿಂತ ಜಮೀನು ಯಾರಿಗೆ ಎಂಬುದು ಮುಖ್ಯ!
ನವದೆಹಲಿ, ಸೆಪ್ಟೆಂಬರ್ 27: ರಾಮ ಜನ್ಮಭೂಮಿ ಜಮೀನು ವಿವಾದ ಕುರಿತಂತೆ ಅಕ್ಟೋಬರ್ 29ರಿಂದ ನಿರಂತರವಾಗಿ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ಇಂದು ಪ್ರಕಟಿಸಿದೆ. ಇದಕ್ಕೂ ಮುನ್ನ 'ಮಸೀದಿಯನ್ನು ಇಸ್ಲಾಂನ ಅವಿಭಾಜ್ಯ ಅಂಗವೇ? ನಮಾಜು ಮಾಡಲು ಮಸೀದಿಯೇ ಆಗಬೇಕೇ? ಎಂಬುದರ ಬಗ್ಗೆ ಕೂಡಾ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ನೀಡಿದೆ.
ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ ಎಂದು 1994ರ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಜೊತೆಗೆ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದೆ.
1994ರ ಇಸ್ಮಾಯಿಲ್ ಫಾರೂಕಿ ಕೇಸಿಗೆ ಸಂಬಂಧಿಸಿದಂತೆ ಮಸೀದಿ ಕುರಿತು ಕೆಲ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸಿಜೆಐ ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, 1994ರ ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.

ಹೀಗಾಗಿ, ಸುನ್ನಿ ವಕ್ಫ್ ಬೋರ್ಡ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು 1994ರ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪ್ರಶ್ನಿಸಿ 7 ಸದಸ್ಯರ ವಿಸ್ತೃತ ಸಂವಿಧಾನ ಪೀಠ ರಚನೆ ಮಾಡಿ, ಪ್ರಕರಣವನ್ನು ವರ್ಗಾಯಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
ಭೂ ಸ್ವಾದೀನದ ಬಗ್ಗೆ : 1994ರಲ್ಲಿ ಫಾರೂಕಿ ಕೇಸಿಗೆ ಸಂಬಂಧಿಸಿದಂತೆ ಮಾತ್ರ ಜಾಗ, ಜಮೀನಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆ ಪ್ರಕರಣ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅಲ್ಲ, ಭೂ ಸ್ವಾದೀನ ಪಡೆದುಕೊಳ್ಳುವುದರ ಬಗ್ಗೆ ಇತ್ತು.
ಹೀಗಾಗಿ, ಸರ್ಕಾರವು ಅಗತ್ಯಬಿದ್ದಾಗ ದೇಶದ ಯಾವುದೇ ದೇಗುಲ, ಮಸೀದಿ ಮತ್ತು ಚರ್ಚ್ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದರೆ, ನ್ಯಾ ಅಬ್ದುಲ್ ನಜೀರ್ ಅಸಮ್ಮತಿ ವ್ಯಕ್ತಪಡಿಸಿದರು.
'ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ಈಗ ಮತ್ತೊಮ್ಮೆ ವಿಚಾರಣೆಗೆ ಒಳಪಡಲಿದೆ.












Click it and Unblock the Notifications