ಮೊರ್ಬಿ ಸೇತುವೆ ದುರಂತ: ಒರೆವಾ ಸಮೂಹದ ಅಜಂತಾ ಕಂಪನಿಗೆ ಗುಜರಾತ್ ಹೈಕೋರ್ಟ್ ನೋಟಿಸ್
ಅಹಮದಾಬಾದ್, ಡಿ. 21: ಅಕ್ಟೋಬರ್ 30 ರಂದು 135 ಜನರು ಸಾವನ್ನಪ್ಪಿದ ಮೋರ್ಬಿ ಸೇತುವೆ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ಒರೆವಾ ಸಮೂಹದ ಅಜಂತಾ ಮ್ಯಾನಿಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ಗೆ ಗುಜರಾತ್ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಮೋರ್ಬಿ ಸೇತುವೆ ದುರಂತ: ಮೃತರ ಕುಟುಂಬಕ್ಕೆ ಹೆಚ್ಚುವರಿಯಾಗಿ 10 ಲಕ್ಷ ಪರಿಹಾರ
ಮೊರ್ಬಿಯ ಮಚ್ಚು ನದಿಯ ಮೇಲಿನ ಬ್ರಿಟಿಷ್ ಕಾಲದ ತೂಗುಸೇತುವೆಯ ನಿರ್ವಹಣೆ, ದುರಸ್ತಿ ಕಾರ್ಯಾಚರಣೆಗಾಗಿ ಮೊರ್ಬಿ ಪುರಸಭೆಯು ಒರೆವಾ ಸಮೂಹ ಸಂಸ್ಥೆಗೆ ಕೆಲಸ ನೀಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಶಾಸ್ತ್ರಿ ಅವರ ಪೀಠವು ಅಜಂತಾ ಮ್ಯಾನಿಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಮುಂದಿನ ಜನವರಿ 19ಕ್ಕೆ ನಿಗದಿ ಪಡಿಸಿದ್ದು, ಅಷ್ಟರೊಳಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕಂಪನಿಗೆ ತಿಳಿಸಿದೆ.
ದುರಂತದಲ್ಲಿ ತನ್ನ ಸಹೋದರ ಮತ್ತು ಸೊಸೆಯನ್ನು ಕಳೆದುಕೊಂಡಿರುವ ಅಹಮದಾಬಾದ್ನ ದಿಲೀಪ್ಭಾಯ್ ಚವಡಾ ಅವರು ಅಜಂತಾದ ಒರೆವಾ ಗುಂಪನ್ನು ಆರೋಪಿಯನ್ನಾಗಿ ಮಾಡಬೇಕು. ಮೊರ್ಬಿ ಪುರಸಭೆ ಮತ್ತು ಒರೆವಾ ಗುಂಪಿನ ನಡುವೆ ಸಹಿ ಮಾಡಿದ ಒಪ್ಪಂದದಲ್ಲಿ ತಾಂತ್ರಿಕ ಮತ್ತು ಕಾರ್ಯವಿಧಾನದ ಲೋಪಗಳಿವೆ ಎಂದು ಅರ್ಜಿಯನ್ನು ಸಲ್ಲಿಸಿದ್ದರು.
ಸೇತುವೆ ಕುಸಿತದ ಬಗ್ಗೆ ತನಿಖೆ ನಡೆಸಲು ಗುಜರಾತ್ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ಪ್ರಾಥಮಿಕ ವರದಿಯನ್ನೂ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಡಿಸೆಂಬರ್ 12 ರ ತನ್ನ ಆದೇಶದಲ್ಲಿ, ಎಸ್ಐಟಿ ವರದಿಯು ಕೇಬಲ್ ರೂಪಿಸಲು ಬಳಸಿದ್ದ 7 ಎಳೆಗಳ ಒಟ್ಟು 49 ತಂತಿಗಳಲ್ಲಿ 22 ತಂತಿಗಳು ತುಕ್ಕು ಹಿಡಿದಿವೆ ಎಂದು ಬಹಿರಂಗಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈಗಾಗಲೇ ಆ ತಂತಿಗಳು ಮುರಿದುಹೋಗಿವೆ ಎಂದು ಸೂಚಿಸಿದೆ.
ಸುಮಾರು ಏಳು ತಿಂಗಳ ಕಾಲ ನಿರ್ವಹಣೆ ಮತ್ತು ದುರಸ್ತಿಗಾಗಿ ಮುಚ್ಚಲ್ಪಟ್ಟಿದ್ದ ತೂಗು ಸೇತುವೆಯನ್ನು ಅಕ್ಟೋಬರ್ 26 ರಂದು ಪುನಃ ತೆರೆಯಲಾಗಿತ್ತು. ಅಕ್ಟೋಬರ್ 30 ರಂದು ಸೇತುವೆ ಕುಸಿದು, 135 ಜನರು ಸಾವನ್ನಪ್ಪಿದ್ದರು.
ಅಕ್ಟೋಬರ್ 31 ರಂದು ಮೊರ್ಬಿ ಬಿ ವಿಭಾಗದ ಪೊಲೀಸ್ ಠಾಣೆಯಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಒರೆವಾ ಮತ್ತು ಅದರ ಮಾಲೀಕರ ಹೆಸರಿಲ್ಲ. ಇಬ್ಬರು ಟಿಕೆಟ್ ಕಾಯ್ದಿರಿಸುವ ಗುಮಾಸ್ತರು, ಮೂವರು ಭದ್ರತಾ ಸಿಬ್ಬಂದಿ, ಇಬ್ಬರು ಒರೆವಾ ಗ್ರೂಪ್ ಮ್ಯಾನೇಜರ್ಗಳು ಮತ್ತು ಸೇತುವೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ನೇಮಕಗೊಂಡ ಇಬ್ಬರು ಖಾಸಗಿ ಗುತ್ತಿಗೆದಾರರು ಸೇರಿದಂತೆ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮೊರ್ಬಿ ಪುರಸಭೆಯ ಆಗಿನ ಮುಖ್ಯ ಅಧಿಕಾರಿ ಸಂದೀಪ್ಸಿನ್ಹ್ ಜಲಾ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.