ರಾಜ್ಯದ ಕರಾವಳಿ, ಕೊಂಕಣ-ಗೋವಾ, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸಂಭವ
ಬೆಂಗಳೂರು, ಜೂನ್ 7: ಕರ್ನಾಟಕದ ಕರಾವಳಿ ಮತ್ತು ಕೊಂಕಣ ಗೋವಾದಲ್ಲಿ ಗುರುವಾರ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಮುಂಬೈನಲ್ಲಿ ಜೂನ್ 9ರಂದು ಭಾರಿಯಿಂದ ಕುಂಭದ್ರೋಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.
ಪುಣೆ ಜಿಲ್ಲೆಯ ಕೆಲವು ಭಾಗಗಳಲ್ಲಿ ವರುಣ ತೀವ್ರವಾಗಿ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಕರಾವಳಿ, ಕೊಂಕಣ ಗೋವಾ ಮತ್ತು ಮುಂಬೈಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ನೈರುತ್ಯ ಮಾರುತವು ಕರ್ನಾಟಕದ ದಕ್ಷಿಣ ಒಳನಾಡಿನ ಇನ್ನಷ್ಟು ಭಾಗಗಳು, ರಾಯಲಸೀಮೆಯ ಬಹುತೇಕ ಭಾಗ, ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ಬಂಗಾಳ ಕೊಲ್ಲಿಯ ಕೇಂದ್ರ ಪಶ್ಚಿಮ ಭಾಗಗಳು, ಬಂಗಾಳ ಕೊಲ್ಲಿಯ ಕೇಂದ್ರ ಪೂರ್ವದ ಉಳಿದ ಪ್ರದೇಶಗಳು ಹಾಗೂ ಈಶಾನ್ಯದ ಇನ್ನಷ್ಟು ಭಾಗಗಳಲ್ಲಿ ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.
ಕೇಂದ್ರ ಅರೇಬಿಯನ್ ಸಮುದ್ರ, ದಕ್ಷಿಣ ಕೊಂಕಣ ಮತ್ತು ಗೋವಾ ಮತ್ತಷ್ಟು ಭಾಗಗಳಲ್ಲಿ, ಕರ್ನಾಟಕ ಮತ್ತು ರಾಯಲಸೀಮೆಯ ಉಳಿದ ಭಾಗಗಳಲ್ಲಿ, ತೆಲಂಗಾಣದ ಕೆಲವು ಭಾಗಗಳಲ್ಲಿ, ಆಂಧ್ರ ಕರಾವಳಿ ಹಾಗೂ ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರದ ಮತ್ತಷ್ಟು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾರುತಗಳು ಬಲಗೊಳ್ಳಲು ಪರಿಸ್ಥಿತಿ ಪೂರಕವಾಗಿದೆ.
ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಕರಾವಳಿಯ ಇನ್ನಷ್ಟು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ನೈರುತ್ಯ ಮಾರುತಗಳು ಮಳೆಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರಬಲವಾಗಲಿವೆ.
ಐಎಂಡಿ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರದಲ್ಲಿ ಭಾರತದ ವಿವಿಧ ಭಾಗಗಳು, ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲೆ ಆವರಿಸಿರುವ ಮೋಡ.
ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಹೇಳಿದೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕೊಂಕಣ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ಪರಿಹಾರ ಘಟಕವು ಹೈ ಅಲರ್ಟ್ ಘೋಷಿಸಿದೆ. ಯಾವುದೇ ರೀತಿಯ ತುರ್ತು ಸನ್ನಿವೇಶಗಳನ್ನು ಎದುರಿಸಲು ಸಿದ್ಧರಾಗುವಂತೆ ಘಟಕವು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಏಷ್ಯಾ, ಯುರೋಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಐಎಂಡಿ ಉಪಗ್ರಹ ಚಿತ್ರ
ಮಂತ್ರಾಲಯ, ವಿಭಾಗೀಯ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಪಾಲಿಕೆಗಳು ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿನ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರುವಂತೆ ನಿರ್ದೇಶಿಸಲಾಗಿದೆ.
ಮುಂಬೈನಲ್ಲಿರುವ ಜನರು ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ 1916 ಮತ್ತು ಮುಂಬೈ ಹೊರಗಿರುವ ಜನರು 1077 ಸಂಖ್ಯೆಗೆ ಕರೆ ಮಾಡಬಹುದು.
ಹವಾಮಾನ ಇಲಾಖೆಯ ವರದಿ ಪ್ರಕಾರ ದೇಶದ ಕೇಂದ್ರ ಭಾಗದಲ್ಲಿ ಈ ಬಾರಿ ಸಾಮಾನ್ಯ ಮಳೆಯಾಗಲಿದೆ. ಆದರೆ, ದಕ್ಷಿಣದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅದು ತಿಳಿಸಿದೆ.
ಐಎಂಡಿಯ ಉಪಗ್ರಹ ಸೆರೆಹಿಡಿದಿರುವ ಭಾರತದ ಮೇಲೆ ಆವರಿಸಿರುವ ಮೋಡ ಚಿತ್ರ
ಈಶಾನ್ಯ ಭಾಗದಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ.
ದೀರ್ಘಾವಧಿ ಸರಾಸರಿಯಲ್ಲಿ (ಎಲ್ಪಿಎ) ದೇಶದಲ್ಲಿ ಜುಲೈ ತಿಂಗಳಿನಲ್ಲಿ ಶೇ 101ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ ತಿಂಗಳಿನಲ್ಲಿ ಶೇ 9ರ ವ್ಯತ್ಯಾಸದಲ್ಲಿ ಶೇ 94ರಷ್ಟು ಎಲ್ಪಿಎ ನಿರೀಕ್ಷಿಸಲಾಗಿದೆ.
ಉಪಖಂಡ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆಸ್ಟ್ರೇಲಿಯಾದವರೆಗಿನ ಹವಾಮಾನ ಸ್ಥಿತಿಯ ಕುರಿತು ಐಎಂಡಿಯ ಉಪಗ್ರಹ ಚಿತ್ರ
ಎಲ್ಪಿಎಯ ಶೇ 90-96ರವರೆಗಿನ ಮಳೆಯನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಶೇ 96-104ರ ವರೆಗಿನ ಎಲ್ಪಿಎಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.
ಶೇ 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಎಲ್ಪಿಎಯಲ್ಲಿ ಮಳೆಯ ಕೊರತೆ ಎಂದು, ಶೇ 104-110ರ ನಡುವಣ ಮಳೆ ಪ್ರಮಾಣವನ್ನು ಸಾಮಾನ್ಯಕ್ಕಿಂತ ಅಧಿಕ ಹಾಗೂ ಶೇ 110ಕ್ಕಿಂತ ಹೆಚ್ಚಿನ ಮಳೆ ಪ್ರಮಾಣವನ್ನು ಅತ್ಯಧಿಕ ಮಳೆ ಎಂದು ಪರಿಗಣಿಸಲಾಗುತ್ತದೆ.