ಇನ್ನೊಂದು ದಿನದಲ್ಲೇ ಮುಂಗಾರು; ನಲಿದಾಡಲಿ ಬೆಂಗಳೂರು
ಬೇಸಿಗೆ ಬಿಸಿಲಿನಿಂದ ಬೇಸತ್ತ ದಕ್ಷಿಣ ಭಾರತಕ್ಕೆ ಇಲ್ಲೊಂದು ಸಿಹಿಸುದ್ದಿಯಿದೆ. ಈ ಬಾರಿ ಜೂನ್ ಮೊದಲ ವಾರದಲ್ಲೇ ಉತ್ತಮ ಮುಂಗಾರು ಮಳೆ ಬೀಳಲಿದೆ ಎಂದು ಹವಾಮಾನ ತಜ್ಞ ಕಾಂತಿ ಪ್ರಸಾದ್ ಹೇಳಿದ್ದಾರೆ.
ನವದೆಹಲಿ, ಮೇ 06: ಕೆಲವು ದಿನಗಳಿಂದ ಬಂದ ಒಂದೆರಡು ಮಳೆಗೆ ಕೊಂಚ ಹಸಿಯಾಗಿರುವ ಬೆಂಗಳೂರಿಗೆ ಇನ್ನೊಂದು ದಿನದಲ್ಲಿ ಮುಂಗಾರು ಮಾರುತಗಳು ಬಂದು ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ ಏಪ್ರಿಲ್ 16ರಿಂದ ಮುಂಗಾರಿನ ಸೊಬಗು ಆರಂಭವಾಗಿದೆ. ಆಗಾಗ ಅಲ್ಪ ಸ್ವಲ್ಪ ಮಳೆ ಬಿದ್ದು ಬೆಂಗಳೂರನ್ನು ಕೊಂಚ ತಂಪಾಗಿಸಿದೆ.
ಅಂತೆಯೇ, ಮೇ 2ರಂದೂ ಅಲ್ಲಲ್ಲಿ ಮೋಡ ಕವಿದ ವಾತಾವರಣ, ಕೊಂಚ ಮಳೆ ಬಿದ್ದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಹವಾಮಾನ ಇಲಾಖೆಯು ಮುಂಗಾರು ಮಳೆಯು ನಿರೀಕ್ಷೆಗಿಂತ ಇನ್ನೂ ಬೇಗನೇ ಬರುವ ಸಾಧ್ಯತೆಗಳಿವೆ ಎಂದು ಹೇಳಿದೆ. ಹಾಗಾಗಿ, ಈ ಬಾರಿ ಬೆಂಗಳೂರು ಬೇಸಿಗೆ ಬಿಸಿಯಿಂದ ತಂಪಾಗಲು ತುಂಬಾ ದಿನ ಕಾಯಬೇಕಿಲ್ಲ.

ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಜೂನ್ ಮೊದಲ ವಾರದಲ್ಲಿ ಮುಂಗಾರು ಮಾರುತಗಳ ಗಾಢತೆ ತೀವ್ರವಾಗಲಿವೆ ಎಂದು ಹೇಳಿದೆ.
ಅದರಂತೆ, ಈ ಬಾರಿ ಜೂನ್ ಮೊದಲ ವಾರದಲ್ಲೇ ಉತ್ತಮ ಮುಂಗಾರು ಮಳೆ ಬೀಳಲಿದೆ ಎಂದು ಹವಾಮಾನ ತಜ್ಞ ಕಾಂತಿ ಪ್ರಸಾದ್ ಹೇಳಿದ್ದಾರೆ. ಹವಾಮಾನ ನಿರ್ವಹಣಾ ಇಲಾಖೆ ಏರ್ಪಡಿಸಿದ್ದ ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ಸಿಹಿಸುದ್ದಿ ತಿಳಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ಕೇರಳದಿಂದ ಆರಂಭವಾಗುವ ಮುಂಗಾರು ಮಳೆ ಕ್ರಮೇಣ ದೇಶವ್ಯಾಪಿ ಹರಡಲಿದೆ ಎಂಬ ಸುದ್ದಿ ನೀರಿನ ಅಭಾವದಿಂದ ಬಳಲುತ್ತಿರುವವರುವವರಿಗೆ ಕೊಂಚ ನಿರಾಳತೆಯನ್ನುಂಟುಮಾಡಿದೆ.
ಅಕ್ಟೋಬರ್ ಮತ್ತು ನವೆಂಬರ್ ಹೊತ್ತಿಗೆ ಅತಿವೃಷ್ಠಿಯಾಗುವ ಸಂಭವವೂ ಇದೆ ಎಂದು ಕಾಂತಿ ಪ್ರಸಾದ್ ಮುನ್ನೆಚ್ಚರಿಕೆ ನೀಡಿದ್ದಾರೆ.












Click it and Unblock the Notifications