ಅನಾಥ ಮಕ್ಕಳ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿಯಿಂದ ಐವತ್ತು ಸಾವಿರ ನೆರವು
ನವದೆಹಲಿ, ಜೂನ್ 17: ಪ್ರಧಾನಿ ನರೇಂದ್ರ ಮೋದಿ ಅವರ ಮಾನವೀಯ ಮುಖದ ಪರಿಚಯ ಮಾಡಿಸುವ ಮತ್ತೊಂದು ಸನ್ನಿವೇಶ ಬೆಳಕಿಗೆ ಬಂದಿದೆ. ಅನಾಥ ಮಕ್ಕಳಿಬ್ಬರ ಮನವಿಗೆ ಕರಗಿದ ಪ್ರಧಾನಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಜತೆಗೆ ರಾಜಸ್ತಾನದಲ್ಲಿರುವ ಕೋಟಾದ ಈ ಅಣ್ಣ-ತಂಗಿಗೆ ಐವತ್ತು ಸಾವಿರ ರುಪಾಯಿ ಕೂಡ ನೀಡಿದ್ದಾರೆ.
ನೋಟು ನಿಷೇಧದ ನಂತರ ಹಳೆಯದನ್ನು ಬದಲಾಯಿಸಿಕೊಳ್ಳಲು ಇದ್ದ ಗಡುವು ಮುಗಿದ ಮೇಲೆ ತಮ್ಮ ಪೋಷಕರು ಇಟ್ಟಿದ್ದ 96500 ರುಪಾಯಿ ಈ ಮಕ್ಕಳಿಗೆ ದೊರೆತಿತ್ತು. ಈ ಮಕ್ಕಳು ಗುಡಿಸಲಿನಲ್ಲಿ ವಾಸವಿದ್ದವರು. ನೋಟು ಬದಲಾಯಿಸಿಕೊಳ್ಳಲು ಇದ್ದ ಸಮಯಾವಕಾಶ ಮುಗಿದಿದ್ದರಿಂದ ಅವುಗಳನ್ನು ರಿಸರ್ವ್ ಬ್ಯಾಂಕ್ ತಿರಸ್ಕರಿಸಿತ್ತು.

ಈ ಮಕ್ಕಳ ತಂದೆ ತೀರಿಕೊಂಡ ಕೆಲ ಸಮಯಕ್ಕೆ ತಾಯಿಯು ಕೂಡ ಕೊಲೆಯಾಗಿದ್ದರು. ಕೋಟಾದ ಮಕ್ಕಳ ಹಿತರಕ್ಷಣಾ ಸಮಿತಿಯವರು ಅವರಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ವೇಳೆ ಆ ಹಣ ಪತ್ತೆಯಾಗಿತ್ತು. ಆದರೆ ಅದನ್ನು ಬದಲಾಯಿಸಿಕೊಳ್ಳಲು ಸಮಯ ಮುಗಿದಿತ್ತು.
ಪಿಎಂಡಿಎಫ್ ನಿಂದ ಹಣವನ್ನು ನೀಡುವ ಜತೆಗೆ ಪ್ರಧಾನಿ ಮೋದಿ, ಹದಿನೇಳು ವರ್ಷದ ಸೂರಜ್ ಬಂಜಾರ ಹಾಗೂ ಆತನ ಒಂಬತ್ತು ವರ್ಷದ ಸಹೋದರಿ ಸಲೋನಿಗೆ ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನಾ (ಪಿಎಂಎಸ್ ಬಿವೈ) ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (ಪಿಎಂಜೆಜೆಬಿವೈ) ಅಡಿ ವಿಮೆ ಮಾಡಿಸಿಕೊಟ್ಟಿದ್ದಾರೆ.
ಮುಂದಿನ ಐದು ವರ್ಷದವರೆಗೆ ಸಾವಿರದ ಏಳುನೂರಾ ಹತ್ತು ರುಪಾಯಿ ಕಟ್ಟಿದ್ದಾರೆ. ಮೋದಿ ಅವರು ಬರೆದ ಪತ್ರದಲ್ಲಿ, "ನಿಮ್ಮ ಸಮಸ್ಯೆ ಪರಿಹರಿಸುವುದಕ್ಕೆ ಈ ಹಣ ಅಥವಾ ವಿಮಾ ಕಂತಿನಿಂದ ಸಾಧ್ಯವಿಲ್ಲದಿರಬಹುದು. ಆದರೆ ಇಂಥ ನೆರವು ನಿಮ್ಮ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ" ಎಂದಿದ್ದಾರೆ.
ಅಂದಹಾಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಯಾವಾಗ ಹಣ ಬದಲಾವಣೆ ಆಗಲ್ಲ ಎಂದು ಗೊತ್ತಾಗಿತ್ತೋ ಆಗ ಈ ಇಬ್ಬರು ಮಕ್ಕಳು ಪ್ರಧಾನಿಗೆ ಪತ್ರ ಬರೆದು ತಮ್ಮ ಸ್ಥಿತಿಯನ್ನು ವಿವರಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ನಿಮ್ಮ ಸ್ಥಿತಿಗೆ ಮರುಕ ಪಡುತ್ತಿದ್ದೇನೆ ಎಂದು ಕೂಡ ಪತ್ರದಲ್ಲಿ ತಿಳಿಸಿದ್ದಾರೆ. ಇದೀಗ ಈ ಮಕ್ಕಳ ಬ್ಯಾಂಕ್ ಖಾತೆಗೆ ಐವತ್ತು ಸಾವಿರ ಹಣ ಜಮೆಯಾಗಿದೆ.












Click it and Unblock the Notifications