ರಾಜಕೀಯ ಲಾಭಕ್ಕಾಗಿ 'ಓಬಿಸಿ' ಹಿಂದೆ ಬಿದ್ದ ಮೋದಿ: ಪಟೋಲೆ ಟೀಕೆ
ನಾಗಪುರ, ಡಿಸೆಂಬರ್ 10: ಶುಕ್ರವಾರ ಬಿಜೆಪಿ ಪಕ್ಷಕ್ಕೆ ಮತ್ತು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾನಾ ಪಟೋಲೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.
ರಾಜಕೀಯ ಲಾಭಕ್ಕೋಸ್ಕರ ಪ್ರಧಾನಿ ನರೇಂದ್ರ ಮೋದಿ 'ಓಬಿಸಿ' ವಿಷಯ ಎತ್ತುತ್ತಿದ್ದಾರೆ ಎಂದು ಪಟೋಲೆ ಟೀಕಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ಜನರಿಗೆ ನೀಡಿದ್ದ ಭರವಸೆಗಳನ್ನು ಇಡೇರಿಸಿಲ್ಲ. ರೈತರ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿ ಪಟೋಲೆ ಬಿಜೆಪಿ ಮತ್ತು ಲೋಕಸಭಾ ಸ್ಥಾನ ಎರಡಕ್ಕೂ ಶುಕ್ರವಾರ ರಾಜೀನಾಮೆ ನೀಡಿದ್ದರು.

ಶನಿವಾರ ನಾಗಪುರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಟೋಲೆ ಪ್ರಧಾನಿ ಮೋದಿಯವರದು 'ಇಬ್ಬಗೆಯ ನೀತಿ' ಎಂದು ಕಿಡಿಕಾರಿದರು. ಮೋದಿ ತಮ್ಮ ಹಿಂದುಳಿದ ವರ್ಗದಿಂದ ಬಂದ ಹಿನ್ನಲೆಯನ್ನು ಚುನಾವಣೆ ಮತ್ತು ರಾಜಕೀಯ ಲಾಭಕ್ಕೋಸ್ಕರ ಬಳಸುತ್ತಿದ್ದಾರೆ. ಆದರೆ ಅದೇ ಓಬಿಸಿ ವರ್ಗದವರಿಗೆ ಮತ್ತು ರೈತರಿಗೆ ಏನನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಳೆದ ವರ್ಷ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ನಾನು ಓಬಿಸಿಗಾಗಿ ಪ್ರತ್ಯೇಕ ಇಲಾಖೆ ತೆರೆಯುವಂತೆ ಬೇಡಿಕೆ ಇಟ್ಟಿದ್ದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ಮೋದಿ ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಓಬಿಸಿಗಳಿಗೆ ಇದೆಲ್ಲಾ ಬೇಕಾಗಿಲ್ಲ ಎಂದರು," ಎಂಬುದಾಗಿ ಪಟೋಲೆ ಹೇಳಿದ್ದಾರೆ. ಇದೇ ಪ್ರಧಾನಿ ಇವತ್ತು ತಮ್ಮ ಓಬಿಸಿ ಹಿನ್ನಲೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಡೇರಿಸುತ್ತಿಲ್ಲ," ಎಂದು ಪಟೋಲೆ ವಾಗ್ದಾಳಿ ನಡೆಸಿದ್ದಾರೆ.
ತಾವು ರೈತರ ಬಗ್ಗೆ ಲೋಕಸಭೆ ಮತ್ತು ಪ್ರಧಾನಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ಆದರೆ ಕೇಂದ್ರ ಸರಕಾರಕ್ಕೆ ಈ ಸಮಸ್ಯೆಗಳನ್ನು ನಿವಾರಿಸುವುದು ಬೇಕಾಗಿಲ್ಲ ಎಂದು ಪಟೋಲೆ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications