ಕುಮಾರಸ್ವಾಮಿ ಪದಗ್ರಹಣದಲ್ಲಿ 'ಮಹಾ ಮೈತ್ರಿಕೂಟ'ದ ಶಕ್ತಿ ಪ್ರದರ್ಶನ
Recommended Video
ಬೆಂಗಳೂರು, ಮೇ 23: ಕರ್ನಾಟಕದಲ್ಲಿ 'ಕುಮಾರ ಪರ್ವ' ಆರಂಭವಾಗಿದೆ. ಇದೇ ವೇದಿಕೆ ಮೂಲಕ ರಾಷ್ಟ್ರ ರಾಜಕಾರಣದ ಹೊಸ ಪರ್ವಕ್ಕೆ ಮುನ್ನುಡಿ ಬರೆಯಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹೆಸರಿನಲ್ಲಿ ಪರಸ್ಪರ ವೈರಿಗಳು, ಭಿನ್ನ ಸಿದ್ಧಾಂತಗಳ ಪಕ್ಷದ ನಾಯರೆಲ್ಲಾ ಇಂದು ವಿಧಾನಸೌಧದ ಮೆಟ್ಟಿಲುಗಳಲ್ಲಿ ಒಂದು ಗೂಡಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇಂದು ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕದ 25ನೇ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ
ಪ್ರಮಾಣ ವಚನಕ್ಕಿಂತ ಹೆಚ್ಚು ಸುದ್ದಿಯಾಗಿದ್ದು, ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಎಸ್ಪಿ ನಾಯಕಿ ಮಾಯಾವತಿ, ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆರ್.ಎಲ್.ಡಿಯ ಅಜಿತ್ ಸಿಂಗ್, ಪುದುಚೆರಿ ಸಿಎಂ ವಿ ನಾರಾಯಣ ಸ್ವಾಮಿ, ಜಾರ್ಖಂಡ್ ಮಾಜಿ ಸಿಎಂಗಳಾದ ಹೇಮಂತ್ ಸೋರೆನ್, ಬಾಬುಲಾಲ್ ಮರಾಂಡಿ, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಸಿಪಿಐಎಂನ ಸೀತಾರಾಮ್ ಯೆಚೂರಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐಎಂನ ಡಿ. ರಾಜ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಕೂತಿದ್ದು ಪ್ರಮಾಣ ವಚನಕ್ಕಿಂತ ಬೇರೆಯದೇ ಸಂದೇಶವನ್ನು ರಾಷ್ಟ್ರ ರಾಜಕಾರಣಕ್ಕೆ ನೀಡಿದ್ದಾರೆ.
ಅದರಲ್ಲೂ ಇವರೆಲ್ಲಾ ಒಟ್ಟಾಗಿ ಕೈ ಮೇಲೆತ್ತಿ ಫೋಟೋಗೆ ನೀಡಿದ ಪೋಸ್, 2019ರ ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ರಣಕಹಳೆ ಮೊಳಗಿಸಿದಂತೆ ಭಾಸವಾಗುತ್ತಿತ್ತು. ಬದ್ಧ ವೈರಿಗಳಾಗಿದ್ದರೂ ಯೆಚೂರಿ ಮತ್ತು ದೀದಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ವೇದಿಕೆ ಹಂಚಿಕೊಂಡ ಅಖಿಲೇಶ್ ಮತ್ತು ಮಾಯಾವತಿಯವರು 'ಸಮಾನ ವಿರೋಧಿಗಳನ್ನು ಸೋಲಿಸಲು ನಮ್ಮ ವೈರುದ್ಧಗಳನ್ನು ಬದಿಗಿಟ್ಟು ಒಂದಾಗಬಲ್ಲೆವು' ಎಂಬ ಸಂದೇಶವನ್ನು ದಾಟಿಸಿದ್ದಾರೆ.
ಹೀಗೆ ಕುಮಾರಸ್ವಾಮಿಯವರ ಪದಗ್ರಹಣದ ನೆಪದಲ್ಲಿ ನರೇಂದ್ರ ಮೋದಿಯವರ ವಿರೋಧಿಗಳೆಲ್ಲಾ ಒಟ್ಟಾಗಿದ್ದಾರೆ. ಇದು ಇಷ್ಟಕ್ಕೇ ಸೀಮಿತವಾಗುತ್ತಾ? ಇವರ ಮುಂದಿನ ನಡೆಗಳು ಏನು? ಎಂಬುದಕ್ಕೆ ಬರಲಿರುವ ದಿನಗಳು ಸಾಕ್ಷಿಯಾಗಲಿವೆ.