ರೇಪ್ ಕೇಸ್ : ಮೋದಿ ಸಂಪುಟದ ಸಚಿವನಿಗೆ ಸಮನ್ಸ್
ಜೈಪುರ, ಜೂ.13: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಮೆಘ್ವಾಲ್ ಅವರನ್ನು ಹಳೆಯ ಪ್ರಕರಣವೊಂದು ಬಿಡದಂತೆ ಕಾಡುತ್ತಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿಹಾಲ್ ಚಂದ್ ಸೇರಿದಂತೆ 17 ಮಂದಿಗೆ ಜೈಪುರದ ಜಿಲ್ಲಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
'ನನ್ನ ಪತಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ನನಗೆ ಮಾದಕವಸ್ತು ನೀಡಿ ಪರ ಪುರುಷರಿಂದ ನನ್ನ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದ. ಅವರಲ್ಲಿ ನಿಹಾಲ್ ಚಂದ್ ಸಹ ಒಬ್ಬರು ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. 2011ರಲ್ಲಿ ದಾಖಲಾದ ಎಫ್ಐಆರ್ನಲ್ಲಿ ಮಹಿಳೆ ಆರೋಪಿಸಿದ್ದರು.
2012ರಲ್ಲಿ ನಿಹಾಲ್ ಚಂದ್ ವಿರುದ್ಧದ ಆರೋಪ ಸುಳ್ಳು ಎಂದು ಪ್ರಕರಣವನ್ನ ರದ್ದು ಮಾಡಲಾಗಿತ್ತು. ಪ್ರಕರಣ ರದ್ದು ಪ್ರಶ್ನಿಸಿ ಮಹಿಳೆ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೋರ್ಟ್ ಕೇಂದ್ರ ಸಚಿವರಿಗೆ ನೋಟಿಸ್ ನೀಡಿದ್ದು, ಆಗಸ್ಟ್ 20ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಳಂಕಿತ ಸಚಿವನನ್ನ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದೆ.

ಪ್ರಕರಣದ ಹಿನ್ನೆಲೆ: 2010ರ ಡಿಸೆಂಬರ್ 20ರಲ್ಲಿ ಓಂ ಪ್ರಕಾಶ್ ಆಫ್ ಹನುಮಾನ್ ಘರ್ ನ ನಿವಾಸಿ ಓಂ ಪ್ರಕಾಶ್ ಎಂಬುವವರನ್ನು ಹರ್ಯಾಣದ ಸಿರ್ಸಾದ ಮೂಲದ ಯುವತಿ ಮದುವೆಯಾಗಿದ್ದಾರೆ. ನಂತರ ಜೈಪುರಕ್ಕೆ ವರ್ಗವಾಗಿದ್ದಾರೆ. ಅಲ್ಲಿಂದ ಮುಂದೆ ವೈಶಾಲಿ ನಗರ ಸೇರಿದಂತೆ ಅನೇಕ ಕಡೆ ವಾಸವಾಗಿದ್ದಾರೆ. ವಿವಿಧೆಡೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆಯನ್ನು ಈ ಪಾಪ ಕೂಪಕ್ಕೆ ಆಕೆ ಪತಿಯೆ ತಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡವರಲ್ಲಿ ಶಾಸಕರು, ಸಚಿವರು ಇದ್ದಾರೆ ಎಂದು ಆರೋಪಿಸಲಾಗಿದೆ.
2011ರಲ್ಲಿ ತನಗಾದ ದೌರ್ಜನ್ಯದ ವಿರುದ್ಧ ವೈಶಾಲಿ ನಗರದಲ್ಲಿ ದೂರು ನೀಡುತ್ತಾಳೆ. ದೂರಿನಲ್ಲಿ ನಿಹಾಲ್ ಚಂದ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ. 2012ರಲ್ಲಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಿದ್ದರಿಂದ ಈಗ ಕೋರ್ಟ್ ಮೆಟ್ಟಿಲೇರಿ ನ್ಯಾಯ ಬೇಡುತ್ತಿದ್ದಾಳೆ.
ನಿಹಾಲ್ ಚಂದ್ ಅವರು ಮಾಸ್ಟರ್ ಭನ್ವರಿಲಾಲ್ ಮೇಘ್ವಲ್ ಅವರನ್ನು 2.91 ಲಕ್ಷ ಮತಗಳಿಂದ ಸೋಲಿಸಿ 16 ನೇ ಲೋಕಸಭೆ ಪ್ರವೇಶ ಪಡೆದುಕೊಂಡಿದ್ದರು. ರಸಗೊಬ್ಬರ ಖಾತೆ ರಾಜ್ಯಸಚಿವರಾಗುವ ಯೋಗವೂ ಲಭಿಸಿದೆ.












Click it and Unblock the Notifications