ಮೋದಿ ಸರ್ಕಾರ ಉದ್ಯೋಗಕ್ಕೆ ಹಾನಿಕರ; ರಾಹುಲ್ ಟೀಕೆ
ನವದೆಹಲಿ, ಸೆಪ್ಟೆಂಬರ್ 3: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಏರಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಏರಿಕೆಯಾಗಿರುವುದರ ವರದಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ''ಮೋದಿ ಸರ್ಕಾರ ಉದ್ಯೋಗಕ್ಕೆ ಹಾನಿಕಾರಿಕ' ಎಂದು ಟೀಕಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವ ಕುರಿತು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ನಡೆಸಿದ ಸಮೀಕ್ಷೆಯು, ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುಮಾರು ಹದಿನೈದು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವುದಾಗಿ ತಿಳಿಸಿದೆ. ಈ ಬಗ್ಗೆ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಮೋದಿ ಸರ್ಕಾರ ಉದ್ಯೋಗಕ್ಕೆ ಹಾನಿಕರವಾಗಿದೆ. ಇದು ಯಾವುದೇ ರೀತಿಯ ವ್ಯಾಪಾರ ಅಥವಾ ಉದ್ಯೋಗವನ್ನು ಬೆಂಬಲಿಸುವುದಿಲ್ಲ. ತನ್ನ ಸ್ನೇಹಿತರಲ್ಲದ ಉದ್ಯೋಗಕ್ಕೆ ಬೆಂಬಲ ನೀಡುವುದಿಲ್ಲ. ಬದಲಿಗೆ ಉದ್ಯೋಗವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.
'ದೇಶದ ಜನರಿಂದ ಉದ್ಯೋಗದಲ್ಲಿ ಸ್ವಾಭಿಮಾನದ ನೆಪವನ್ನು ನಿರೀಕ್ಷಿಸುತ್ತಿದೆ' ಎಂದಿರುವ ಅವರು, 'ಇದು ಸಾರ್ವಜನಿಕರ ಹಿತಾಸಕ್ತಿಗಾಗಿ' ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ.
ದೇಶದ ಆರ್ಥಿಕತೆಯ ನಿಭಾವಣೆ ಹಾಗೂ ಉದ್ಯೋಗ ನಷ್ಟದ ಬಗ್ಗೆ ಮುಂಚಿನಿಂದಲೂ ಕಾಂಗ್ರೆಸ್ ಮೋದಿ ಸರ್ಕಾರದ ಮೇಲೆ ಆಕ್ರಮಣ ಮಾಡುತ್ತಾ ಬಂದಿದೆ. ಉದ್ಯೋಗ ಸೃಷ್ಟಿ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ. ಆದರೆ ವಿಪಕ್ಷಗಳ ಆರೋಪವನ್ನು ಕೇಂದ್ರ ತಳ್ಳಿಹಾಕಿದೆ.
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಕಾಯಗಳ ಆಸ್ತಿ ನಗದೀಕರಣ ಪೈಪ್ಲೈನ್ಗೆ ಚಾಲನೆ ನೀಡಿದ್ದನ್ನು ರಾಹುಲ್ ಈಚೆಗೆ ವಿರೋಧಿಸಿದ್ದರು.
ಭಾರತದಲ್ಲಿ ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಎಲ್ಲ ಆಸ್ತಿಗಳನ್ನು ಮತ್ತು ಪ್ರಮುಖ ವಲಯಗಳನ್ನು ಹಣ ಸಂಪಾದನೆಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ಆಗಸ್ಟ್ ತಿಂಗಳಿನಲ್ಲಿ ನಿರುದ್ಯೋಗ ದರ ಏರಿಕೆ; ವರದಿ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕುರಿತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ಸಮೀಕ್ಷೆ ನಡೆಸಿ ವರದಿ ನೀಡಿದೆ. ನಾಲ್ಕು ತಿಂಗಳ ನಂತರ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಹೆಚ್ಚಾಗಿದೆ. ಆಗಸ್ಟ್ ತಿಂಗಳಿನಲ್ಲಿ ನಿರುದ್ಯೋಗ ಸಮಸ್ಯೆ 8.32% ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಈ ಪ್ರಮಾಣ 6.95% ಇತ್ತು. ಇದೀಗ ಇನ್ನೂ ಹೆಚ್ಚಾಗಿರುವುದಾಗಿ ತಿಳಿಸಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ನೇಮಕಾತಿ ಪ್ರಕ್ರಿಯೆಯೂ ಕಷ್ಟಕರವಾಗಿದ್ದು, ಭಾರತದಲ್ಲಿ ನಿರುದ್ಯೋಗದ ಒಟ್ಟಾರೆ ದರ ಏರಿಕೆಯಾಗಿದೆ ಎಂದು ಹೇಳಿದೆ. ಸಂಸ್ಥೆಗಳು ಕೂಡ ನೇಮಕಾತಿಗಳಿಗೆ ತಡೆ ಹಿಡಿಯುತ್ತಿವೆ. ಈ ತಿಂಗಳಿನಲ್ಲಿ ಮಾರಾಟ ಪ್ರಕ್ರಿಯೆ ತಗ್ಗಿದ್ದು, ಇದೇ ಕಾರಣವಾಗಿ ಸಂಸ್ಥೆಗಳು ನೇಮಕಾತಿಯನ್ನು ಮುಂದೂಡುತ್ತಿವೆ ಎಂದು ಐಎಚ್ಎಸ್ ಮಾರ್ಕಿಟ್ ಪ್ರತ್ಯೇಕ ಸಮೀಕ್ಷೆ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆಯಾಗಿದ್ದು, ಜುಲೈ ತಿಂಗಳಿನಲ್ಲಿ ಶೇಕಡ 6.75 ರಷ್ಟು ಏರಿಕೆಯಾಗಿದೆ ಎಂದು ಸಿಎಮ್ಐಇ ಅಂಕಿ ಅಂಶಗಳು ತಿಳಿಸಿವೆ.
ಭಾರತದಲ್ಲಿ ನಿರುದ್ಯೋಗ ದರ 2020 ಮೇ ತಿಂಗಳಿನಲ್ಲಿ ದಾಖಲೆಯ ಪ್ರಮಾಣ ತಲುಪಿತ್ತು. ಲಾಕ್ಡೌನ್ ಕಾರಣದಿಂದಾಗಿ 23.5 ಶೇಕಡಾದಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿತ್ತು. ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ತಗ್ಗಿ, ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಸರಾಗಗೊಳಿಸುವ ಪ್ರಕ್ರಿಯೆಗಳು ಪರಿಹಾರ ನೀಡಲಿವೆ ಎಂದಿದ್ದರು. ಆದರೆ ಆಗಸ್ಟ್ ತಿಂಗಳಿನಲ್ಲಿ ಮತ್ತೆ ನಿರುದ್ಯೋಗ ದರ ಹೆಚ್ಚಾಗಿರುವುದಾಗಿ ಸಮೀಕ್ಷೆ ತಿಳಿಸಿದೆ.












Click it and Unblock the Notifications