ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ದೇಶ: ಮೋದಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ
ನವದಹೆಲಿ, ಏಪ್ರಿಲ್ 06: ಉದ್ಯಮಿ ಗೌತಮ್ ಅದಾನಿ ( Gautam Adani ) ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ, ದೇಶದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ( Narendra Modi ) ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Mallikarjun Kharge ) ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರವು ಪ್ರಜಾಸತ್ತಾತ್ಮಕ ತತ್ವಗಳನ್ನು ಅನುಸರಿಸುತ್ತಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಸಂಸತ್ ಭವನದಿಂದ ವಿಜಯ್ ಚೌಕ್ವರೆಗಿನ 'ತಿರಂಗಾ ನಡಿಗೆ' ನಂತರ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ವಿರೋಧ ಪಕ್ಷದ ನಾಯಕರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಬಜೆಟ್ ಅಧಿವೇಶನವನ್ನು ನಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ' ಎಂದು ಹೇಳಿದ್ದಾರೆ.
ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ ಅದು ಏನು ಹೇಳುತ್ತದೆಯೋ ಅದನ್ನು ಅನುಸರಿಸುವುದಿಲ್ಲ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕಾಗಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತಿವೆ ಎಂದು ಪ್ರತಿಪಾದಿಸಿದರು.

₹ 50 ಲಕ್ಷ ಕೋಟಿಯ ಬಜೆಟ್ ಅನ್ನು ಕೇವಲ 12 ನಿಮಿಷಗಳಲ್ಲಿ ಅಂಗೀಕರಿಸಲಾಗಿದೆ. ಆದರೆ ಅವರು (ಬಿಜೆಪಿ) ಯಾವಾಗಲೂ ವಿರೋಧ ಪಕ್ಷಗಳಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಆರೋಪಿಸುತ್ತಾರೆ. ಅವರು ಸದನದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ ಎಂದು ಖರ್ಗೆ ಹೇಳಿದರು.
'ಆಡಳಿತ ಪಕ್ಷದಿಂದ ಗೊಂದಲ ಸೃಷ್ಟಿಯಾಗಿದೆ. ನಾವು ಬೇಡಿಕೆ ಇಟ್ಟಾಗಲೆಲ್ಲ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. 52 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ. ಹಿಂದೆಂದೂ ಇಂತಹ ಘಟನೆ ನಡೆದಿಲ್ಲ' ಎಂದು ಅವರು ತಿಳಿಸಿದರು.
ಸರ್ಕಾರವು ಬಜೆಟ್ ಅಧಿವೇಶನವನ್ನು ನಿಲ್ಲಿಸಲು ಯೋಜನೆ ರೂಪಿಸಿದೆ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. 'ಇದು ಮುಂದುವರಿದರೆ, ಪ್ರಜಾಪ್ರಭುತ್ವವು ಕೊನೆಗೊಂಡು ನಾವು ಸರ್ವಾಧಿಕಾರದತ್ತ ಸಾಗಲಿದ್ದೇವೆ' ಎಂದು ಅವರು ಹೇಳಿದರು.

ಅದಾನಿ ವಿಚಾರದ ಬಗ್ಗೆ ಚರ್ಚಿಸುವಂತೆ 18 ರಿಂದ 19 ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಅದಾನಿ ಅವರ ಸಂಪತ್ತು ಕೇವಲ 2 ರಿಂದ 2.5 ವರ್ಷಗಳ ಅವಧಿಯಲ್ಲಿ ₹ 12 ಲಕ್ಷ ಕೋಟಿಗೆ ಹೇಗೆ ತಲುಪಿತು ಎಂದು ಅವರು ಕೇಳಿದರು.
'ಬಿಜೆಪಿಗೆ ಬಹುಮತವಿದೆ ಎಂದಾಗಲೂ ಜಂಟಿ ಸಂಸದೀಯ ಸಮಿತಿ ತನಿಖೆಗೆ ಏಕೆ ಭಯಪಡುತ್ತೀರಿ? ಏಕೆ ಮೀನಮೇಷ ಏನಿಸುತ್ತಿದ್ದೀರಿ? ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಗೆ ಆದೇಶಿಸಲು ಸರಕಾರ ಏಕೆ ಒಪ್ಪುತ್ತಿಲ್ಲ' ಎಂದು ಖರ್ಗೆ ಹೇಳಿದರು.
ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಸರ್ಕಾರ ಉತ್ತರಿಸಲಿಲ್ಲ. ಬದಲಿಗೆ ಯುಕೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮಾತನಾಡಿದ್ದಕ್ಕೆ ಕ್ಷಮೆಯಾಚಿಸಲು ಒತ್ತಾಯಿಸಿತು. ಈ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸಿತು ಎಂದು ಖರ್ಗೆ ಅವರು ಹೇಳಿದರು.
ಅದಾನಿ ಪ್ರಕರಣದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜೆಪಿಸಿ ತನಿಖೆಗೆ ಬೇಡಿಕೆ ಇಡಲಾಗಿದೆ. ಏಕೆಂದರೆ ವಿರೋಧ ಪಕ್ಷಗಳ ಸಂಸದರು ಈ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಅವಕಾಶವನ್ನು ಪಡೆಯುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಹೇಳಿದರು.












Click it and Unblock the Notifications