ಮೋದಿ ಸಂಪುಟ ವಿಸ್ತರಣೆ: ಡಿವಿಎಸ್ ಭವಿಷ್ಯ ತೂಗುಯ್ಯಾಲೆ?
ನವದೆಹಲಿ, ನ.7: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಮೇಜರ್ ಸರ್ಜರಿಯಾಗುತ್ತಿದೆ. ಭಾನುವಾರ ಈ ವೇಳೆಗೆ ಸಚಿವ ಸಂಪುಟ ವಿಸ್ತರಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಬಲ್ಲ ಮೂಲಗಳ ಪ್ರಕಾರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಡಿ.ವಿ. ಸದಾನಂದ ಗೌಡರನ್ನು ರೈಲ್ವೆ ಖಾತೆಯಿಂದ ಕೈಬಿಟ್ಟು ಸ್ವಲ್ಪ ಕಡಿಮೆ ಮಹತ್ವದ ಖಾತೆ ನೀಡುವ ಸಾಧ್ಯತೆಯಿದೆ. ಅಥವಾ ಸಚಿವ ಸ್ಥಾನದ ಹೊರೆಯಿಂದ ಮುಕ್ತಗೊಳಿಸಬಹುದು. ಸದಾನಂದ ಗೌಡರು ರೈಲ್ವೆ ಸಚಿವಾಲಯದಲ್ಲಿ ನಿರೀಕ್ಷಿತ ಬದಲಾವಣೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಪ್ರವಾಸದ ಸಂದರ್ಭದಲ್ಲಿ ಹೈಸ್ಪೀಡ್ ಇಲ್ಲವೇ ಬುಲೆಟ್ ರೈಲು ಸ್ವಲ್ಪ ಸುದ್ದಿ ಮಾಡಿದ್ದನ್ನು ಬಿಟ್ಟರೆ ಈಗ ಈ ವಿಷಯದಲ್ಲಿ ರೈಲ್ವೆ ಸಚಿವಾಲಯದಲ್ಲಿ ಸಂಪೂರ್ಣ ಮೌನ ಎದ್ದು ಕಾಣುತ್ತಿದೆ.ಯೋಜನೆಗಳು ಘೋಷಣೆಗಳಿದ್ದರೂ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂಬ ರಿಪೋರ್ಟ್ ಕಾರ್ಡ್ ಮೋದಿ ಮಾಸ್ತರರ ಕೈ ಸೇರಿದೆ.
ಮೋದಿ ಸಂಪುಟದಲ್ಲಿ 44 ಸಚಿವರಿದ್ದು ಅವರಲ್ಲಿ 22 ಮಂದಿ ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವರ ಬಳಿ ಒಂದಕ್ಕಿಂತ ಹೆಚ್ಚು ಖಾತೆಗಳಿವೆ. ನವೆಂಬರ್ 8ರಂದು ನಡೆಯಲಿರುವ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಸಂಬಂಧವಾಗಿ ನಿರ್ಧಾರ ಕೈಗೊಳ್ಳಲಾಗುವುದು. ನವೆಂಬರ್ 9ಕ್ಕೆ ಮೊದಲು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.

ಡಿವಿಎಸ್ ಗೆ ಯಾವ ಖಾತೆ ಸಿಗಬಹುದು?
ಉತ್ತಮ ನಿರ್ವಹಣೆ ತೋರದ ಕಾರಣಕ್ಕೆ ಡಿವಿ ಸದಾನಂದ ಗೌಡ ಅವರನ್ನು ಖಾತೆಯಿಂದ ಕೆಳಗಿಳಿಸುವ ಸಾಧ್ಯತೆ ಇದೆಯಾದರೂ ಸಂಪುಟದಿಂದ ಪೂರ್ಣವಾಗಿ ಹೊರ ಹಾಕಲು ಮೋದಿ ಅವರು ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ. ಪ್ರಮುಖ ಖಾತೆಗಳಿಗೆ ಶಿವಸೇನಾ ಹಾಗೂ ಇತರೆ ಎನ್ ಡಿಎ ಪಕ್ಷಗಳ ಒತ್ತಡ ಹೆಚ್ಚಾಗಿದೆ. ಹೀಗಾಗಿ ಯಾವುದೇ ಪ್ರಮುಖ ಖಾತೆ ನಿರೀಕ್ಷಿಸಲು ಸಾಧ್ಯವಿಲ್ಲ.
ಜೊತೆಗೆ ಡಿವಿಎಸ್ ಅವರು ರೈಲ್ವೆ ಸಚಿವರಾಗಿ ಸಂಪುಟಕ್ಕೆ ಸೇರಿದ ಸಂದರ್ಭದಲ್ಲೇ ಸಂಪುಟ ಸೇರಿರುವ ಅನಂತಕುಮಾರ್ ಅವರ ಸ್ಥಾನ ಪಲ್ಲಟ ಸದ್ಯಕ್ಕಿಲ್ಲ ಎಂಬುದು ಖಚಿತವಾಗಿದೆ.

ಯಡಿಯೂರಪ್ಪಗೆ ಈ ಬಾರಿಯೂ ನಿರಾಶೆ
ಸಚಿವ ಸ್ಥಾನ ಬಯಸಿದ್ದ ಕರ್ನಾಟಕದ ಮತ್ತೊಬ್ಬ ಪ್ರಭಾವಿ ಬಿಜೆಪಿ ನಾಯಕ ಯಡಿಯೂರಪ್ಪಗೆ ಈ ಬಾರಿಯೂ ನಿರಾಶೆಯಾಗಿದೆ. ಯಡಿಯೂರಪ್ಪ ಅವರ ಆಪ್ತೆ ಶೋಭಾ ಕರಂದ್ಲಾಜೆ ಅವರಿಗೂ ರಾಷ್ಟ್ರಮಟ್ಟದಲ್ಲಿ ಯಾವುದೇ ಹುದ್ದೆ ಸಿಗುತ್ತಿಲ್ಲ. ಸದ್ಯಕ್ಕೆ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರಿಗೆ ಗೋವಾದ ನೂತನ ಸಿಎಂ ಆಯ್ಕೆ ಮಾಡುವ ಜವಾಬ್ದಾರಿ ನೀಡಲಾಗಿದೆ.

ನಿತಿನ್ ಗಡ್ಕರಿ ಅವರಿಗೆ ರೈಲ್ವೆ ಖಾತೆ ಸಿಗುವ ಸಾಧ್ಯತೆ
ಮಹಾರಾಷ್ಟ್ರದ ಸಿಎಂ ಸ್ಥಾನ ನನಗೆ ಬೇಡ ಎಂದು 'ತ್ಯಾಗ' ಮಾಡಿದ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ರೈಲ್ವೆ ಖಾತೆ ಸಿಗುವ ಸಾಧ್ಯತೆ ದಟ್ಟವಾಗಿದೆ.
* ಗಡ್ಕರಿಯವರಿಗೆ ಹೆದ್ದಾರಿ, ನೌಕೋದ್ಯಮ ಮತ್ತು ರೈಲ್ವೆ ಒಳಗೊಂಡ ಬೃಹತ್ ಸಾರಿಗೆ (ಸೂಪರ್ ಟ್ರಾನ್ಸ್ ಪೋರ್ಟ್) ಸಚಿವಾಲಯದ ಜವಾಬ್ದಾರಿಯನ್ನು ಹೊರಿಸುವ ಸಂಭವವಿದೆ.
* ಗೋಪಿನಾಥ್ ಮುಂಡೆ ಅವರ ಅಕಾಲಿಕ ನಿಧನದ ನಂತರ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೂಡಾ ಗಡ್ಕರಿ ನಿರ್ವಹಿಸುತ್ತಿದ್ದರು. ಇದು ಈಗ ಬೇರೆಯವರಿಗೆ ವಹಿಸುವ ಸಾಧ್ಯತೆಯಿದೆ

ಸಂಭಾವ್ಯ ಖಾತೆ ಬದಲಾವಣೆ ಹಾಗೂ ಹೊಸಬರ ಆಯ್ಕೆ
* ಸ್ವತಂತ್ರ ಖಾತೆ ಸಚಿವ ರಾಧಾಮೋಹನ್ (ಕೃಷಿ) ಮತ್ತು ಶ್ರೀಪಾದ್ ನಾಯ್ಕಾ ರ (ಪ್ರವಾಸೋದ್ಯಮ) ಖಾತೆಗಳ ಬದಲಾವಣೆ ಸಾಧ್ಯತೆ.
* ಶಿವಸೇನಾ ಧುರೀಣ ಸುರೇಶ್ ಪ್ರಭು ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಮೋದಿ ನೇತೃತ್ವದ ಎನ್ಡಿಎ ಸರಕಾರ ಬಹಳ ಉತ್ಸುಕವಾಗಿದೆ. ಆದರೆ ಇದಕ್ಕೆ ಶಿವಸೇನೆಯಿಂದ ಒಪ್ಪಿಗೆ ಲಭಿಸಿಲ್ಲ.
* ಹಜಾರಿಬಾಗ್ನ ಸಂಸದ ಮತ್ತು ಹಿರಿಯ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಅವರನ್ನು ಕೇಂದ್ರ ಸಂಪುಟಕ್ಕೆ ಸಹಾಯಕ ಸಚಿವರಾಗಿ ಸೇರುವ ಸಾಧ್ಯತೆ.
* ಕಲ್ಲಿದ್ದಲು ಹಗರಣವನ್ನು ಬಹಿರಂಗಗೊಳಿಸಿದ್ದ ಮಹಾರಾಷ್ಟ್ರದ ಸಂಸದ ಹಂಸರಾಜ್ ಗಂಗಾರಾಂ ಅಹಿರ್ ಸಹ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
* ಯುವ ಬಿಜೆಪಿ ಧುರೀಣ ಅನುರಾಗ್ ಥಾಕೂರ್ ಮತ್ತು ಶಿವಸೇನೆಯ ಅನಿಲ್ ದೇಸಾಯಿ ಅವರ ಹೆಸರುಗಳು ಹೊಸ ಸಚಿವರ ಸ್ಥಾನಗಳಿಗೆ ಕೇಳಿಬಂದಿವೆ.

ಸಂಪುಟ ದರ್ಜೆಗೆ ಭಡ್ತಿ ನೀಡುವ ಸಂಭವ
* ವಾಣಿಜ್ಯ (ಸ್ವತಂತ್ರ) ಖಾತೆಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಪುಟ ದರ್ಜೆಗೆ ಭಡ್ತಿ ನೀಡುವ ಸಂಭವವಿದೆ.
* ವಾರ್ತಾ ಮತ್ತು ಪ್ರಸಾರ, ಪರಿಸರ ಖಾತೆಯಸಚಿವರಾಗಿರುವ ಪ್ರಕಾಶ್ ಜಾವಡೇಕರ್ ಅವರಿಗೂ ಭಡ್ತಿ ಲಭಿಸುವ ನಿರೀಕ್ಷೆ
* ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಖಾತೆ ಹೊಸಬರಿಗೆ ಸಿಗುವ ಸಾಧ್ಯತೆಯಿದೆ.
* ಪೀಯೂಶ್ ಗೋಯಲ್ ಅವರು ಹೊಂದಿರುವ ವಿದ್ಯುತ್, ಕಲ್ಲಿದ್ದಲು, ನವೀಕರಿಸಬಹುದಾದ ಇಂಧನ ಖಾತೆಗಳನ್ನು ಮರುಹಂಚಿಕೆ ಸಾಧ್ಯತೆ.
* ಗಿರಿರಾಜ್ ಸಿಂಗ್, ಅಶ್ವಿನಿಕುಮಾರ್ ಚೌಬೆ, ಮುಖ್ತಾರ್ ಅಬ್ಬಾಸ್ ನಕ್ವಿ, ಹರ್ಯಾಣದ ಜಾಟ್ ನಾಯಕ ಚೌಧರಿ ವೀರೇಂದ್ರ ಸಿಂಗ್ ಅವರ ಹೆಸರುಗಳೂ ಕೇಳಿ ಬಂದಿದೆ.
* ಬಿಜೆಪಿಯ ಮಿತ್ರ ಪಕ್ಷವಾಗಿರುವ ತೆಲುಗು ದೇಶಂಗೆ ಕೇಂದ್ರದಲ್ಲಿ ಇನ್ನೊಂದು ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ.











Click it and Unblock the Notifications