ಲಕ್ಷ್ಮಣ ರೇಖೆ ದಾಟದ ಮೋದಿ ವಿರುದ್ಧದ ಕೇಸು ಖಲಾಸ್
ವಡೋದರಾ, ಮೇ 2: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮತದಾನ ಮಾಡಿದ ಬಳಿಕ ಮತಗಟ್ಟೆ ಎದುರೇ ಪತ್ರಿಕಾಗೋಷ್ಠಿ ನಡೆಸಿದರೆಂದೂ, ಜತೆಗೆ ಬೆರಳಲ್ಲಿ ಕಮಲದ ಗುರುತನ್ನು ಹಿಡಿದು ಮಹಾಜನತೆಗೆ ತೋರಿಸಿದರೆಂದೂ ಆರೋಪಗಳು ಕೇಳಿಬರುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಆಯೋಗವು ಮೋದಿ ಆದ್ರೆ ಏನಂತೆ ಆತನ ವಿರುದ್ಧವೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸು ಜಡಿಯಿರಿ ಎಂದು ಸ್ಥಳೀಯ ಪೊಲೀಸರಿಗೆ ಆತುರಾತುರವಾಗಿ ಸೂಚಿಸಿತ್ತು.
ಇದು ದೇಶಾದ್ಯಂತ ಭಾರಿ ಸಂಚಲನವನ್ನು, ಮೋದಿ ಅಭಿಮಾನಿಗಳಲ್ಲಿ ಆತಂಕವನ್ನೂ ತಂದೊಡ್ಡಿತ್ತು. 'ಭಾವಿ ಪ್ರಧಾನಿ ಅಂತನ್ನಿಸಿಕೊಂಡವರು ಮತಗಟ್ಟೆ ಎದುರು ಮತಿಗೆಟ್ಟು ಎಂಥಾ ಕೆಲ್ಸ ಮಾಡಿದ್ದಾರೆ ನೋಡಿ. ನೋಡ್ತಿರಿ, 2 ವರ್ಷ ಅವರು ಜೈಲಲ್ಲಿ ಇದ್ದುಬರುತ್ತಾರೆ' ಎಂದು ಅವರ ವಿರೋಧಿಗಳು ಕುಹಕವಾಡಿದ್ದರು.
(ಆತುರಗೇಡಿ ಆಯೋಗದ ನಿರ್ಧಾರಕ್ಕೆ ಅರುಣ್ ಜೇಟ್ಲಿ ಏನನಂದಿದ್ದಾರೆ, ಇಲ್ಲಿ ಕ್ಲಿಕ್ಕಿಸಿ)

ಆದರೆ ಅದಕ್ಕೆಲ್ಲಾ ಈಗ ತೆರೆ ಬೀಳುವ ಸಾಧ್ಯತೆಯಿದೆ. ಏನಪ್ಪಾ ಅಂದರೆ ಗುಜರಾತ್ ಪೊಲೀಸರು ಮೋದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ, ವರದಿಯನ್ನು ಸಲ್ಲಿಸಿದ್ದಾರೆ. ಅದರಂತೆ ಮೋದಿ ಮತಗಟ್ಟೆಯಿಂದ (ಬಿಳಿ ಲಕ್ಷ್ಮಣ ರೇಖೆ ದಾಟಿ) 100 ಮೀಟರ್ ಆಚೆಗೆ ಹೆಜ್ಜೆ ಹಾಕಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ವರದಿ ಸಲ್ಲಿಸಿದೆ. ಸೋ, ಆಯೋಗ ಈಗ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು.
ಈ ಮಧ್ಯೆ, ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಮೋದಿ ತಮ್ಮ ಗುರಿಯತ್ತ ದೃಢ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ತನ್ನ ಕೈಗೇನೂ ಎಫ್ಐಆರ್ ಕಾಪಿ ಬಂದಿಲ್ಲ ಎಂದು ತಮ್ಮ ವಿರುದ್ಧ ದಾಖಲಾಗಿರುವ ಕೇಸಿನ ಬಗ್ಗೆ ತಣ್ಣಗೆ ಪ್ರತಿಕ್ರಿಯಿಸಿದ್ದ ಮೋದಿ ಗುರುವಾರ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ನಿನ್ನೆ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, 'ತಿಮ್ಮಪ್ಪಾ ನಿನ್ನ ಆಶೀರ್ವಾದ ಎನಗಿರಲಿ' ಎಂದು ಮೊರೆಯಿಟ್ಟಿದ್ದಾರೆ. ಅದಾದನಂತರ ರಾತ್ರಿ ವೇಳೆಗೆ ವಿಶಾಖಪಟ್ಟಣದಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಜತೆಗೂಡಿ ಸುರಿವ ಮಳೆಯನ್ನೂ ಲೆಕ್ಕಿಸದೆ ಬಹಿರಂಗ ಪ್ರಚಾರ ಸಭೆ ನಡೆಸಿದ್ದಾರೆ.











Click it and Unblock the Notifications