ಮಲ್ಲಿಕಾರ್ಜುನ ಖರ್ಗೆ ಕುರಿತು ವ್ಯಂಗ್ಯವಾಡಿದ ಡಿಎಂಕೆ ವಕ್ತಾರ ಅಮಾನತು
ಚೆನ್ನೈ, ಅ. 21: ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟ್ವಿಟ್ಟರ್ ಪೋಸ್ಟ್ನಲ್ಲಿ ವ್ಯಂಗ್ಯವಾಡಿದ್ದ ಡಿಎಂಕೆ ಹಿರಿಯ ನಾಯಕ ಮತ್ತು ವಕ್ತಾರ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಹಿರಿಯ ನಾಯಕ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಪ್ರಾಥಮಿಕ ಸದಸ್ಯತ್ವ ಮತ್ತು ಇತರ ಜವಾಬ್ದಾರಿಗಳಿಂದ ಅಮಾನತುಗೊಳಿಸಿರುವುದಾಗಿ ಶುಕ್ರವಾರ ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಘೋಷಿಸಿದೆ.
ಪೋಸ್ಟ್ ಮಾಡಿ ನಂತರ ಅಳಿಸಲಾದ ಪೋಸ್ಟ್ನಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮನಮೋಹನ್ ಸಿಂಗ್ 2.0 ಎಂದು ವ್ಯಂಗ್ಯವಾಡುವ ಮೀಮ್ ಅನ್ನು ರಾಧಾಕೃಷ್ಣನ್ ಅವರು ಹಂಚಿಕೊಂಡಿದ್ದರು. ಇದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ನಿಜವಾದ ಅಧಿಕಾರವನ್ನು ಸೋನಿಯಾ ಗಾಂಧಿಯವರು ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ನ ಪ್ರತಿಸ್ಪರ್ಧಿಗಳು ಆರೋಪಿಸುವ ಮೀಮ್ ಆಗಿತ್ತು.

ಡಿಎಂಕೆ ಪ್ರಧಾನ ಕಾರ್ಯದರ್ಶಿ ಎಸ್ ದುರೈಮುರುಗನ್ ಶುಕ್ರವಾರ ರಾಧಾಕೃಷ್ಣನ್ ವಿರುದ್ಧ ಪಕ್ಷ ತಗೆದುಕೊಂಡ ಕ್ರಮವನ್ನು ಪ್ರಕಟಿಸಿದ್ದಾರೆ.
"ಪಕ್ಷದ ಶಿಸ್ತು ಉಲ್ಲಂಘಿಸಿದ ಮತ್ತು ಪಕ್ಷಕ್ಕೆ ಕಳಂಕ ತರುವ ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ ರಾಧಾಕೃಷ್ಣನ್ ಅವರನ್ನು ಪ್ರಾಥಮಿಕ ಸದಸ್ಯತ್ವ ಮತ್ತು ಪಕ್ಷದ ಇತರ ಎಲ್ಲಾ ಸ್ಥಾನಗಳಿಂದ ಅಮಾನತುಗೊಳಿಸಲಾಗಿದೆ" ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಎಸ್ದುರೈಮುರುಗನ್ ಹೇಳಿದ್ದಾರೆ.

ತಮ್ಮ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿ ವಿವಾದಗಳಿಗೆ ಕಾರಣವಾಗಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಇತ್ತಿಚೇಗೆ ಎಚ್ಚರಿಕೆ ನೀಡಿದ್ದರು. ಇದಾದ ಕೆಲವು ದಿನಗಳ ನಂತರ ರಾಧಾಕೃಷ್ಣನ್ ವಿರುದ್ಧ ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
"ಒಂದೆಡೆ ನಾನು ಡಿಎಂಕೆ ನಾಯಕ, ಮತ್ತೊಂದೆಡೆ ನಾನು ತಮಿಳುನಾಡಿನ ಮುಖ್ಯಮಂತ್ರಿ" ಎಂದು ಸ್ಟಾಲಿನ್ ಅವರು ಅಕ್ಟೋಬರ್ 9 ರಂದು ಡಿಎಂಕೆ ಅಧ್ಯಕ್ಷರಾಗಿ ಎರಡನೇ ಅಧಿಕಾರಾವಧಿಯನ್ನು ಪ್ರಾರಂಭಿಸಿದಾಗ ಹೇಳಿದರು. ಅದೇ ಭಾಷಣದಲ್ಲಿ, ಸ್ಟಾಲಿನ್ ತನ್ನ ಪಕ್ಷದ ಕೆಲವು ನಾಯಕರು ಹೇಳಿಕೆಗಳನ್ನು ನೀಡುವ ಮೂಲಕ ಅವರನ್ನು ಮುಜುಗರದ ಪರಿಸ್ಥಿತಿಗೆ ತಳ್ಳುತ್ತಿದ್ದಾರೆ. ತನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.












Click it and Unblock the Notifications