ಬಿಯರ್ ಆರೋಗ್ಯಕರ ಪೇಯವಂತೆ, 13 ಲಾಭಗಳಿವೆಯಂತೆ!
ಬೆಂಗಳೂರು, ಜುಲೈ 05 : "ಯಾರು ಹೇಳಿದ್ದು ಬೀಯರ್ ಆರೋಗ್ಯಕರ ಪೇಯ ಅಲ್ಲ ಅಂತ? ಬೇಕಿದ್ದರೆ ನಾನು ಪ್ರೂವ್ ಮಾಡಿ ತೋರಿಸುತ್ತೇನೆ, ಬಿಯರ್ ಆರೋಗ್ಯಕ್ಕೆ ಒಳ್ಳೆಯದು" ಅಂತ ಘಂಟಾಘೋಷವಾಗಿ ಹೇಳಿದ್ದು ಆಂಧ್ರಪ್ರದೇಶದ ಅಬಕಾರಿ ಸಚಿವ ಕೆಎಸ್ ಜವಾಹರ್ ಅವರು.
ಒಂದೆಡೆ ಸರಕಾರದ ಮದ್ಯದ ನೀತಿ ವಿರುದ್ಧ ಆಂಧ್ರಪ್ರದೇಶದಲ್ಲಿ ಮಹಿಳೆಯರು ಯುದ್ಧ ಸಾರಿದ್ದಾರೆ. ಮತ್ತೊಂದೆಡೆ, ಬಿಯರ್ ಅನ್ನು ಆರೋಗ್ಯಕರ ಪೇಯವನ್ನಾಗಿ ಪ್ರಮೋಟ್ ಮಾಡುತ್ತೇನೆ ಎಂದು ರಾಜ್ಯದ ಮಹಿಳೆಯರಿಗೆ ಅಬಕಾರಿ ಸಚಿವರೇ ಚಾಲೆಂಜ್ ಮಾಡಿದ್ದಾರೆ.

ಹೀಗೆ ಮಂತ್ರಿವರ್ಯರು ನೀಡಿರುವ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಭಾರೀ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇಂಥ ಹೇಳಿಕೆ ನೀಡಲು ಹೇಗೆ ಸಾಧ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೆಲ್ಲ ಪ್ರತಿಭಟನೆಗಳು ನಡೆದಿರುವಾಗ, ಟಿವಿ ಚಾನಲ್ ವೊಂದಕ್ಕೆ ಜವಾಹರ್ ಅವರು ಸಂದೇಶವನ್ನು ಕಳಿಸಿದ್ದಾರೆ. ಅದರಲ್ಲಿ ಬಿಯರ್ ಕುಡಿಯುವುದರಿಂದ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ, ಲಾಭಗಳೇನು ಎಂಬ ಪಟ್ಟಿಯನ್ನು ಕಳಿಸಿದ್ದಾರೆ.
ಬಿಯರ್ ಕುಡಿಯುವುದರಿಂದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ, ಮಧುಮೇಹಕ್ಕೆ ಇದು ರಾಮಬಾಣ, ಬಿಯರ್ ಸೇವನೆಯಿಂದ ವಯಸ್ಸಾಗುವುದನ್ನು ಕೂಡ ಮುಂದೂಡಬಹುದು, ಹೃದಯ ಕಾಯಿಲೆ ದೂರ ಮಾಡುತ್ತೆ, ಇದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಇತ್ಯಾದಿ ಇತ್ಯಾದಿ 13 ಲಾಭಗಳನ್ನು ಅವರು ಪಟ್ಟಿ ಮಾಡಿದ್ದಾರೆ.
ಬಿಯರ್ ಅನ್ನು ಆರೋಗ್ಯಕರ ಪೇಯವನ್ನಾಗಿ ಮಂತ್ರಿವರ್ಯರು ಪ್ರಮೋಟ್ ಮಾಡುತ್ತಿರುವ ಬಗ್ಗೆ, ಇದರಿಂದ ಆಗುವ ಲಾಭಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಬ ಅಬಕಾರಿ ಇಲಾಖೆ ಕೈತೊಳೆದುಕೊಂಡಿದೆ.
ಇದು ಆರೋಗ್ಯಕರ ಪೇಯವಾಗಿದ್ದರೆ, ಲೈಸೆನ್ಸ್ ಪಡೆಯಲು ಯಾಕೆ ಒದ್ದಾಡಬೇಕು. ಬಿಯರ್ ಅಂಗಡಿಗಳು ಸೇರಿದಂತೆ ಎಲ್ಲೆಡೆ ಲಭ್ಯವಾಗುವಂತೆ ಸರಕಾರವೇ ಕ್ರಮ ತೆಗೆದುಕೊಳ್ಳಬಹುದಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.












Click it and Unblock the Notifications